ತನಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಜೀವನ ನಿರ್ವಹಣೆ ದುಸ್ಥರವಾಗಿದೆ. ಪ್ರಚಾರಕ್ಕಾಗಿ ಸಮಾರಂಭಗಳಲ್ಲಿ ಭರವಸೆ ಮಾತ್ರ ಸಿಗುತ್ತಿದೆ. ಯೋಧ, ಯೋಧರ ಕುಟುಂಬವನ್ನು ಇಂದಿನ ವ್ಯವಸ್ಥೆ ನಡೆಸಿಕೊಳ್ಳುವ ರೀತಿ ಬೇಸರವಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಯೋಧ ಜನಾರ್ಧನಗೌಡರು (ಜಾನು) ಅಗಲಿ 3 ವರ್ಷವಾದರೂ ಸರ್ಕಾರದ ಸಹಾಯ ಕೇವಲ ಮಾತಲ್ಲಿ ಉಳಿದಿದೆ ಎಂದು ಯೋಧನ ಪತ್ನಿ ರಂಜಿತಾ ಬಿಕ್ಕಿ ಬಿಕ್ಕಿ ಅಳಲು ತೋಡಿಕೊಂಡರು.

ಪಟ್ಟಣದ ನಿವಾಸಿ ಮೃತ ಯೋಧ ಜನಾರ್ಧನಗೌಡರ ನೆನಪಿನಲ್ಲಿ ಸ್ನೇಹಿತ ಬಳಗದ ಕಿಕ್ಕೇರಮ್ಮ ಷಟಲ್‌ ಕಾಕ್‌ ಕ್ಲಬ್, ಗ್ರಾಮಸ್ಥರ ಸಹಕಾರದಲ್ಲಿ ನೆನಪು ಶಾಶ್ವತವಾಗಿರಲು ಯೋಧನ ಪುತ್ಥಳಿ ಅನಾವರಣಗೊಳಿಸಿದ ಸಂದರ್ಭದಲ್ಲಿ ತಮ್ಮ ಕಷ್ಟದ ಬದುಕನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಸ್ಥಳದಲ್ಲಿದ್ದ ಯೋಧರ ಸ್ಮರಣೆ ಮಾಡುತ್ತಿದ್ದ ಸಮೂಹ ಯೋಧರ ಪತ್ನಿಯ ನೋವಿನ ನುಡಿ ಕೇಳಿ ಸರ್ಕಾರದ ವ್ಯವಸ್ಥೆ ಕಂಡು ಬೇಸರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಎಚ್.ಟಿ.ಮಂಜು, ಜಿಲ್ಲಾಧಿಕಾರಿಗಳು ತಮ್ಮ ಪತ್ನಿ ಮೃತರಾದ ವೇಳೆ ಶವ ಸಂಸ್ಕಾರಕ್ಕೆ ಸರ್ಕಾರಿ ಮಾರ್ಯದೆ ಸಲ್ಲಿಸಿದರು. ಸ್ಥಳೀಯ ಮುಖಂಡರಿಂದ ಹಿಡಿದು ಎಲ್ಲರೂ ಉದ್ಯೋಗ ಕೊಡಿಸುವ ಮತ್ತಿತರ ಭರವಸೆ ನೀಡಿದರು.

ತನಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಜೀವನ ನಿರ್ವಹಣೆ ದುಸ್ಥರವಾಗಿದೆ. ಪ್ರಚಾರಕ್ಕಾಗಿ ಸಮಾರಂಭಗಳಲ್ಲಿ ಭರವಸೆ ಮಾತ್ರ ಸಿಗುತ್ತಿದೆ. ಯೋಧ, ಯೋಧರ ಕುಟುಂಬವನ್ನು ಇಂದಿನ ವ್ಯವಸ್ಥೆ ನಡೆಸಿಕೊಳ್ಳುವ ರೀತಿ ಬೇಸರವಾಗಿದೆ ಎಂದು ಗದ್ದಗದಿತರಾದರು.

ಯೋಧರ ಪುತ್ಥಳಿಗೆ ಪುಷ್ಪಾರ್ಚನೆ ಅರ್ಪಿಸಿ ಗ್ರಾಮ ಮುಖಂಡರು, ಅಭಿಮಾನಿಗಳು, ಕ್ಲಬ್ ಸದಸ್ಯರು ಸ್ಮರಣೆ ಮಾಡಿದರು. ನಂತರ ಅನ್ನದಾಸೋಹ ನಡೆಯಿತು.

ಈ ವೇಳೆ ಕೆಪಿಸಿಸಿ ಸದಸ್ಯ ಸುರೇಶ್, ಜಿಪಂ ಮಾಜಿ ಅಧ್ಯಕ್ಷ ಕೆ.ಎಸ್. ಪ್ರಭಾಕರ್, ಕ್ಲಬ್‌ ದಿನೇಶ್‌ ಬಾಬು, ಕೇಶವಮೂರ್ತಿ, ಕುಮಾರಸ್ವಾಮಿ, ಕೆ.ಪಿ.ಮಧುಕರ್, ಮಂಜುನಾಥ್, ಬೇಲೂರೇಗೌಡ, ಎಲ್.ಎಸ್.ಧರ್ಮಪ್ಪ, ಹೈಕೋರ್ಟ್ ಅಪರ ಸರ್ಕಾರಿ ವಕೀಲ ಕೆ.ಪಿ.ಯೋಗಣ್ಣ, ಗ್ರಾಪಂ ಅಧ್ಯಕ್ಷ ಕೆ.ಬಿ. ಚಂದ್ರಶೇಖರ್, ಮಾಜಿ ಅಧ್ಯಕ್ಷ ಕೆ.ವಿ.ಅರುಣಕುಮಾರ್, ಕೆ.ಟಿ.ಪರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಬಿ. ಮಧು, ಐಸಿಎಲ್ ರಾಜಶೇಖರ್, ಕಡಹೆಮ್ಮಿಗೆ ರಮೇಶ್, ಮಾಜಿ ಯೋಧರಾದ ಲೋಕೇಶ್, ದಾಸಪ್ಪಶೆಟ್ಟಿ, ಯೋಧನ ತಂದೆ ಪ್ರಕಾಶ್, ಸಹೋದರ ಕೆ.ಪಿ.ಮಹೇಂದ್ರ ಮತ್ತಿತರರು ಇದ್ದರು.