ಸಮಾಜದ ಹಿಂದುಳಿದ ವರ್ಗಗಳ ಉನ್ನತಿಗಾಗಿ ಅವರು ಮಾಡಿದ ಹೋರಾಟ ಇಂದಿಗೂ ಪ್ರಸ್ತುತವಾಗಿದ್ದು, ಶಿಕ್ಷಣ ಸರ್ವರಿಗೂ, ಸಮ ಬಾಳು, ಸಮ ಪಾಲು ಎಂಬ ಅವರ ಆಶಯವು ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕವಾಗಿದೆ.
ಗದಗ: ಡಾ. ಅಂಬೇಡ್ಕರ್ ಅವರು ಭಾರತ ಸಂವಿಧಾನದ ಮೂಲಕ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಮೌಲ್ಯಗಳನ್ನು ಸ್ಥಾಪಿಸಿದ ಮಹಾನ್ ದಾರ್ಶನಿಕರು ಎಂದು ಆರ್ಡಿಪಿಆರ್ ವಿವಿ ಕುಲಪತಿ ಡಾ. ಸುರೇಶ್ ವಿ. ನಾಡಗೌಡರ ಹೇಳಿದರು.
ಇಲ್ಲಿಯ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯಲ್ಲಿ ಅವರು ಮಾತನಾಡಿದರು.ಸಮಾಜದ ಹಿಂದುಳಿದ ವರ್ಗಗಳ ಉನ್ನತಿಗಾಗಿ ಅವರು ಮಾಡಿದ ಹೋರಾಟ ಇಂದಿಗೂ ಪ್ರಸ್ತುತವಾಗಿದ್ದು, ಶಿಕ್ಷಣ ಸರ್ವರಿಗೂ, ಸಮ ಬಾಳು, ಸಮ ಪಾಲು ಎಂಬ ಅವರ ಆಶಯವು ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕವಾಗಿದೆ. ಸಂವಿಧಾನಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು ನ್ಯಾಯ, ಸಮಾನತೆ ಮತ್ತು ಬಾಂಧವ್ಯವನ್ನು ಜೀವನದಲ್ಲಿ ಅನುಸರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಶಶಿಭೂಷಣ ದೇವೂರ ಮಾತನಾಡಿ, ಡಾ. ಅಂಬೇಡ್ಕರ್ ಅವರ ಜೀವನ ಹಾಗೂ ಸಾಧನೆಗಳು ಶ್ರಮ, ದೃಢನಿಶ್ಚಯ ಮತ್ತು ಶಿಕ್ಷಣದ ಮಹತ್ವವನ್ನು ಪ್ರತಿಪಾದಿಸುತ್ತವೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಸಮಾಜದಲ್ಲಿ ಅಳವಡಿಸುವುದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜಕ ಪ್ರಕಾಶ್ ಮಾಚೇನಹಳ್ಳಿ ಮಾತನಾಡಿ, ಡಾ. ಅಂಬೇಡ್ಕರ್ ಅವರ ಚಿಂತನೆಗಳು ಯುವಪೀಳಿಗೆಗೆ ಸಾಮಾಜಿಕ ಜವಾಬ್ದಾರಿತ್ವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಅರಿವು ಮೂಡಿಸುತ್ತವೆ ಎಂದರು.
ಉಪನ್ಯಾಸಕ ಡಾ. ಸಂತೋಷಕುಮಾರ, ಚಂದ್ರಪ್ಪ ಬಾರಂಗಿ ಹಾಗೂ ಪ್ರವೀಣ್ ಅಂಕಲಕೋಟಿ ಮಾತನಾಡಿದರು. ಈ ವೇಳೆ ಮೃತ್ಯುಂಜಯ ಮೆಣಸಿನಕಾಯಿ, ಉಮೇಶ್ ಬಾರಕೇರ, ಎಂ.ಬಿ. ಚನ್ನಪ್ಪಗೌಡರ, ಡಾ. ಗಿರೀಶ್ ದೀಕ್ಷಿತ್, ಡಾ. ಶ್ರೀಧರ ಹಾದಿಮನಿ ಸೇರಿದಂತೆ ಇತರರು ಇದ್ದರು. ಸುರೇಶ್ ಲಮಾಣಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪೂರ್ಣಿಮಾ ನಿರೂಪಿಸಿದರು.ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ
ಡಂಬಳ: ವಿಶ್ವದಲ್ಲಿಯೇ ದೇಶಕ್ಕೆ ಮಾದರಿಯಾದ ಸಂವಿಧಾನವನ್ನು ನೀಡಿದ ಮಹಾನ್ ಮಾನವತಾವಾದಿ ಅಂಬೇಡ್ಕರ್ ಎಂದು ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ತಿಳಿಸಿದರು.ಡಂಬಳ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಸಾನ್ನಿಧ್ಯ ವಹಿಸಿ ಮಾತನಾಡಿ, ಅಂಬೇಡ್ಕರ್ ಒಂದು ಜಾತಿಗೆ ಸೀಮಿತರಾದವರಲ್ಲ. ಅವರನ್ನು ಎಲ್ಲರೂ ಗೌರವಿಸಿ, ಅವರ ಆದರ್ಶಗಳನ್ನು ವೈಯಕ್ತಿಕ ಬದುಕಿನಲ್ಲಿ ಮೈಗೂಡಿಸಿ ಕೊಳ್ಳಬೇಕು ಎಂದರು.ಪತ್ರಕರ್ತ ಲಕ್ಷ್ಮಣ ದೊಡ್ಡಮನಿ ಮತ್ತು ಬುಡ್ನೇಸಾಬ ಅತ್ತಾರ ಮಾತನಾಡಿ, ರಾಜ್ಯದ ಎಲ್ಲ ಗ್ರಾಮಗಳಿಂತ ನಮ್ಮ ಡಂಬಳ ಗ್ರಾಮದಲ್ಲಿ ಸಮಾನತೆಯ, ಕೋಮು ಸೌಹಾರ್ದದಿಂದ ಜಾತಿ, ಧರ್ಮ ಬದಿಗೊತ್ತಿ ಬದುಕುತ್ತಿದ್ದಾರೆ ಎಂದರು.ಹಿರಿಯರಾದ ಡಿ. ಪ್ರಸಾದ, ಡಂಬಳ ನಾಡ ಕಾರ್ಯಾಲಯದ ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೆನ್, ನೋಟಪುಸ್ತಕ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಹಿರಿಯರಾದ ಮರಿತೆಮ್ಮಪ್ಪ ಆದಮ್ಮನವರ, ನಾಗಪ್ಪ ತಳವಾರ, ಮರಿಯಪ್ಪ ಸಿದ್ದಣ್ಣವರ, ಯುವ ಮುಖಂಡ ಬಸವರಡ್ಡಿ ಬಂಡಿಹಾಳ, ಮಲ್ಲಪ್ಪ ಮಠದ, ಗವಿವಿಸಿದ್ದಪ್ಪ ಹಾದಿಮನಿ, ವಾಸಪ್ಪ ಕಾಶಭೋವಿ, ಬಸೀರಹ್ಮದ ತಾಂಬೋಟಿ, ಜಂದಿಸಾಬ ತಾಂಬೋಟಿ, ಶಪೀಕ್ ಮೂಲಿಮನಿ, ಮಹೇಶ ಗುಡ್ಡದ, ಎಂ.ಆರ್. ಆಲೂರ, ಚಂದ್ರು ಯಳಮಲಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಸುಶೀಲಾ ಛಲವಾದಿ, ಉಪನ್ಯಾಸಕ ಮಂಜುನಾಥ ಬಿಸನಳ್ಳಿ, ರಾಕೇಶ ಅಡವಿ, ಅಶೋಕ ತಳಗೇರಿ, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿಯ ಎಲ್ಲ ಸದಸ್ಯರು, ಗ್ರಾಮಸ್ಥರು ಇದ್ದರು. ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಗೌಡನವರ ನಿರೂಪಿಸಿ, ವಂದಿಸಿದರು.