ಸಿ.ಕೆ.ನಾಗರಾಜ
ಹೊಸಪೇಟೆ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ವಿಜಯನಗರ ಜಿಲ್ಲೆಯ ರೈತರಿಗೂ ತಟ್ಟಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಪಾತಾಳಕ್ಕೆ ಕುಸಿದಿದೆ. ಈ ಬಾರಿ ಉತ್ತಮ ಬೆಲೆ ಸಿಗುವ ಕನಸಿನಲ್ಲಿದ್ದ ರೈತರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.ಇರಾನ್- ಇಸ್ರೇಲ್- ಅಮೆರಿಕ ನಡುವಿನ ಯುದ್ಧದ ಬಿಸಿ ನೇರವಾಗಿ ತಟ್ಟದಿದ್ದರೂ ಪರೋಕ್ಷವಾಗಿ ರೈತರಿಗೆ ತಟ್ಟುತ್ತಿದೆ. ಟೊಮ್ಯಾಟೊ ಬೆಲೆ ಕುಸಿತದಿಂದ ಟೊಮ್ಯಾಟೊವನ್ನು ಟ್ರ್ಯಾಕ್ಟರ್ನಲ್ಲಿ ಲೋಡ್ಗಟ್ಟಲೇ ತೆಗೆದುಕೊಂಡು ಹೋಗಿ ಕುರಿ, ಮೇಕೆ, ದನ-ಕರುಗಳಿಗೆ ಹಾಕುತ್ತಿದ್ದಾರೆ.
ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ವ್ಯಾಪ್ತಿಯ ರೈತರು ಹೆಚ್ಚಾಗಿ ಟೊಮ್ಯಾಟೊ ಬೆಳೆದ ಬೆಳೆಯನ್ನು ಹೊಸಪೇಟೆಯ ಎಪಿಎಂಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಮಾರುಕಟ್ಟೆಗೆ ತಂದ ಟೊಮ್ಯಾಟೊಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ ಬೆಳೆದ ಟೊಮ್ಯಾಟೊ ಈ ಹಿಂದೆ ಬೆಂಗಳೂರು, ಮುಂಬೈ ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಹೋಗುತ್ತಿತ್ತು. ಇದರ ಜತೆಗೆ ಸ್ಥಳೀಯವಾಗಿ ಹೆಚ್ಚಾಗಿ ಮಾರಾಟವಾಗುತ್ತಿತ್ತು. ಆದರೆ ಬೇಡಿಕೆ ಕುಗ್ಗಿದೆ. ಕೆಲವು ರೈತರು ಹೊಲದಲ್ಲಿ ಹರಿಯದೇ ಹಾಗೆ ಬಿಟ್ಟಿದ್ದಾರೆ. ನಾವು ಹಾಕಿದ ಬಂಡವಾಳವೂ ಬರುತ್ತಿಲ್ಲ, ಈ ರೀತಿಯಾದರೆ ಬದುಕುವುದು ಹೇಗೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.