ಕನ್ನಡಪ್ರಭ ವಾರ್ತೆ ಹಾಸನನಗರದ ಪೆನ್‌ಷನ್ ಮೊಹಲ್ಲಾ ಹಾಗೂ ರಾಜ್‌ಕುಮಾರ್‌ ನಗರದಲ್ಲಿ ಶ್ರೀ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನ ಸೇವಾ ಸಮಿತಿ ಮತ್ತು ಡಾ. ಬಿ. ಆರ್‌. ಅಂಬೇಡ್ಕರ್‌ ಯುವಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಕೊಲ್ಲಾಪುರದಮ್ಮನವರ 236ನೇ ವರ್ಷದ ಜಾತ್ರಾ ಮಹೋತ್ಸವ ಭಕ್ತಿಭಾವ ಮತ್ತು ವೈಭವದೊಂದಿಗೆ ನೆರವೇರಿತು.ಮೂರು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ಆಶೀರ್ವಾದ ಪಡೆದುಕೊಂಡರು. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಕೆಂಡಕೊಂಡೋತ್ಸವವು ಭಕ್ತರ ಜಯಘೋಷಗಳ ಮಧ್ಯೆ ಅದ್ದೂರಿಯಾಗಿ ಜರುಗಿತು. ಅಮ್ಮನವರ ಅಡ್ಡೆ, ಕರಗ ಹಾಗೂ ಚಾಮದೇವರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವೇಳೆ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಉದ್ಘಾಟನಾ ಸಮಾರಂಭ, ಮಹಾಮಂಗಳಾರತಿ, ಮಡೆಬುತ್ತಿ ಮೆರವಣಿಗೆ ಹಾಗೂ ರಾತ್ರಿ ಚೋಮನ ಕುಣಿತ ಸೇರಿದಂತೆ ಹಲವು ಸಾಂಸ್ಕ್ರತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ವಿದ್ಯುತ್ ದೀಪಗಳು ಮತ್ತು ಹೂವಿನ ಅಲಂಕಾರದಿಂದ ಜಾತ್ರೆಯ ವಾತಾವರಣ ಮತ್ತಷ್ಟು ಕಂಗೊಳಿಸಿತು. ದೇವಿಗೆರೆಯಲ್ಲಿ ಗಂಗಾಸ್ನಾನ ಮತ್ತು ವಿಶೇಷ ಪೂಜೆ ನೆರವೇರಿದ ಬಳಿಕ ದೇವಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ವಿಜೃಂಭಣೆಯಿಂದ ಕರೆತರಲಾಯಿತು. ಸಂಜೆ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕೆಂಡಕೊಂಡೋತ್ಸವದಲ್ಲಿ ಭಕ್ತರು ಹರಕೆ ತೀರಿಸಿ ದೇವಿಯ ಕೃಪೆಗೆ ಪಾತ್ರರಾದರು. ನಂತರ ಶಾಂತಿ ಕಾರ್ಯಕ್ರಮ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.ಮೂರನೇ ದಿವಸ ಭಾನುವಾರ ಜಗಜೀವನರಾಂನಗರ, ರಾಜ್‌ಕುಮಾರ್ ನಗರ ಹಾಗೂ ಪೆನ್‌ಷನ್ ಮೊಹಲ್ಲಾದ ಬೀದಿಗಳಲ್ಲಿ ಪೂಜೆ ಕಾರ್ಯಕ್ರಮಗಳು ನಡೆದ ಬಳಿಕ ಸಂಜೆ ಶ್ರೀ ಅಮ್ಮನವರ ಅಡ್ಡೆಯನ್ನು ಮೂಲ ಗರ್ಭಗುಡಿಗೆ ಇರಿಸುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಕೃಷ್ಣ ದೇವರಾಜು, ಆರಕ್ಷಕ ನಿರೀಕ್ಷಕ ರಾಜೇಶ್, ಸ್ವಾಮಿನಾಥ್, ಅಧ್ಯಕ್ಷ ಸೀತಾರಾಮ್, ಬಸವರಾಜು, ಕುಮಾರ್‌, ಚಂದ್ರಶೇಖರ್‌, ಪಾಪಣ್ಣ, ರಾಮಚಂದ್ರ, ಶಂಕರ್‌, ಮಣಿಕಂಠ, ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.ಅರ್ಚಕರಾದ ಮಂಜು, ಚಂದ್ರಣ್ಣ, ಶಿವು, ನಂದೀಶ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.