ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ:ಅಂಧ-ಅನಾಥರ ಬಾಳಿನಲ್ಲಿ ನಿರಂತರ ಜ್ಯೋತಿಯಾಗಿ ಬೆಳಗುತ್ತಿರುವ ಇಲ್ಲಿನ ಲಿಂ.ಪಂ.ಪುಟ್ಟರಾಜ ಗವಾಯಿಗಳವರ ಸ್ಮಾರಕ ಭವನ ದಶಕ ಕಳೆದರೂ ಇನ್ನೂ ಕುಂಟುತ್ತ ಸಾಗಿದೆ.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಭವನ ಇದುವರೆಗೂ ಅಪೂರ್ಣವಾಗಿ ಉಳಿದುಕೊಂಡಿದ್ದು, ನಿಗದಿತ ಸಮಯದಲ್ಲಿ ಸ್ಮಾರಕ ಭವನ ಪೂರ್ಣಗೊಂಡು, ಅದನ್ನೊಂದು ಪ್ರವಾಸಿ ತಾಣವನ್ನಾಗಿ ರೂಪಿಸಿ, ಆಶ್ರಮಕ್ಕೆ ಆಗಮಿಸುವ ಕಲಾವಿದರು, ಭಕ್ತರಿಗೆ ಕೈಲಾಸವಾಗಬೇಕಿದ್ದ ಪೂಜ್ಯನೀಯ ಸ್ಥಳ ನಿಂತಲ್ಲೇ ನಿಂತಿದೆ.ಹಿನ್ನೆಲೆ: ಗದಗ ಎಪಿಎಂಸಿಯಲ್ಲಿರುವ ವೀರೇಶ್ವರ ಪುಣ್ಯಾಶ್ರಮಕ್ಕೆ ಹೊಂದಿಕೊಂಡಿರುವ ಈ ಸ್ಮಾರಕ ಭವನ 27 ಗುಂಟೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಲಿಂಗೈಕ್ಯರಾದ ವೇಳೆಯಲ್ಲಿ ಭೇಟಿ ನೀಡಿದ್ದ ಅಂದಿನ ಸಿಎಂ ಯಡಿಯೂರಪ್ಪ ಸ್ಮಾರಕ ನಿರ್ಮಾಣಕ್ಕೆ ₹5 ಕೋಟಿ ಘೋಷಣೆ ಮಾಡಿದ್ದರು. 2010ರಲ್ಲಿ ಸ್ಮಾರಕಭವನ ನಿರ್ಮಾಣಕ್ಕೆ ಸರಕಾರ ಆದೇಶ ಮಾಡಿ, 2014ರಲ್ಲಿ ಕಾಮಗಾರಿ ಆರಂಭಿಸಿದರೂ ಇವರೆಗೂ ಪೂರ್ಣಗೊಂಡಿಲ್ಲ. ಮೊದಲನೆ ಹಂತದಲ್ಲಿ ₹ 5 ಕೋಟಿ ಅನುದಾನದಲ್ಲಿ ಕಾಮಗಾರಿ ಮುಗಿದಿದ್ದು, ಹೆಚ್ಚುವರಿಯಾಗಿ ₹1.24 ಕೋಟಿ ಖರ್ಚಾಗಿದೆ. 2ನೇ ಹಂತದ ಕಾಮಗಾರಿಯಲ್ಲಿ ಪ್ಲೋರಿಂಗ್. ಡಿಸೈನ್ ಮತ್ತು ಪಿನಿಷಿಂಗ್ ಕಾರ್ಯ ಉಳಿದುಕೊಂಡಿದೆ. ಈ ಸ್ಮಾರಕ ಭವನದಲ್ಲಿ ನೆಲಮಾಳಿಗೆಯಲ್ಲಿ ಕಚೇರಿ, ಪಾರ್ಕಿಂಗ್, ವಸತಿಗೆ, ಮೊದಲನೆ ಮಹಡಿಯಲ್ಲಿ ಅಡಿಟೋರಿಯಂ ಮತ್ತು ಬಾಲ್ಕನಿಯಲ್ಲಿ ಪಂ.ಪುಟ್ಟರಾಜ ಗವಾಯಿಗಳು ನುಡಿಸುತ್ತಿದ್ದ ತಂಬೂರಿ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ನಿರ್ಮಾಣ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ.ಹುಸಿಯಾಗಿರುವ ಭರವಸೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಗದಗ ಜಿಲ್ಲೆಗೆ ಆಗಮಿಸಿದ ವೇಳೆಯಲ್ಲಿ ಅವರಿಗೆ ಅಪೂರ್ಣಗೊಂಡ ಪಂ.ಪುಟ್ಟರಾಜ ಗವಾಯಿಗಳವರ ಸ್ಮಾರಕ ಭವನ ಪೂರ್ಣಗೊಳಿಸಲು ಅನುದಾನ ನೀಡುವಂತೆ ವಿನಂತಿಸಲಾಗಿತ್ತು. ಅಂದು ಭರವಸೆ ನೀಡಿದ್ದ ಇಲಾಖೆ ಸಚಿವರ ಭರವಸೆ ಇದುವರೆಗೂ ಭರವಸೆಯೇ ಆಗಿ ಉಳಿದಿದೆ.
ಅಂತಿಮ ಹಂತದ ಕಾಮಗಾರಿಗಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಮಾರಕ ಭವನ ನಿರ್ಮಾಣಗೊಳ್ಳಲು ಬಾಕಿ ಕಾಮಗಾರಿ ಮೊತ್ತ ರು. ₹1.24 ಕೋಟಿ ಕಳೆದ ಮಾರ್ಚನಲ್ಲಿ ನೀಡಲಾಗಿದ್ದು, ಅಂತಿಮ ಕಾಮಗಾರಿಗಾಗಿ ₹5 ಕೋಟಿ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಈ ವರ್ಷದಲ್ಲಿ ಸ್ಮಾರಕ ಭವನ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗದಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹೇಳಿದರು.