ದೊಡ್ಡಬಳ್ಳಾಪುರ: ಇಲ್ಲಿನ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗುರುವಾರ ರಾಜರ್ಷಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್‌, ನಾಲ್ವಡಿ ಅವರು ಮೈಸೂರು ಸಂಸ್ಥಾನ ಕಂಡ ಅತ್ಯಂತ ಜನಪ್ರಿಯ ಮತ್ತು ಜನಮುಖಿ ರಾಜರಲ್ಲಿ ಒಬ್ಬರಾಗಿದ್ದಾರೆ. ಮೈಸೂರಿನ 24ನೇ ರಾಜರಾಗಿ ಆಳ್ವಿಕೆ ನಡೆಸಿದ ಅವರು, ಶೋಷಿತರು, ತುಳಿತಕ್ಕೊಳಗಾದವರು ಸೇರಿದಂತೆ ಎಲ್ಲ ಸಮುದಾಯಗಳ ಅಭ್ಯುದಯಕ್ಕೆ ಶ್ರಮಿಸಿದರು. ಅವರ ಅನನ್ಯ ಯೋಜನೆಗಳು ಇಂದಿಗೂ ರಾಜ್ಯದ ಎಲ್ಲ ಜನರ ಆಶೋತ್ತರಗಳಿಗೆ ದನಿಯಾಗಿವೆ ಎಂದು ಸ್ಮರಿಸಿದರು.

ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ಪರಿವರ್ತನೆ ಮಾಡಿದಂತಹ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಸುಮಾರು ಕಾಲೇಜುಗಳನ್ನು ಸ್ಥಾಪನೆ ಮಾಡಿ ಮೈಸೂರು ವಿದ್ಯಾವಂತ ರಾಜ್ಯವನ್ನಾಗಿ ಮಾಡಿದಂತಹ ಕೀರ್ತಿ ಅವರದು. ದೊಡ್ಡಬಳ್ಳಾಪುರಕ್ಕೆ ವಿದ್ಯುತ್ ಶಕ್ತಿಯನ್ನು ತಂದುಕೊಟ್ಟಂತಹ ಗೌರವ ಅವರಿಗೆ ಸಲ್ಲುತ್ತದೆ. ಹಾಗಾಗಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ ಜಯಂತಿಯನ್ನು ನಮ್ಮ ಸಂಘಟನೆ ವತಿಯಿಂದ ಆಚರಿಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅರವಿಂದಪ್ಪ, ರಾಜ್ಯ ಮುಖಂಡ ಪಿ ವಾಸು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜಿತ್ ಗೌಡ, ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಮಾರ್, ತಾಲೂಕು ಉಪಾಧ್ಯಕ್ಷ ಅಂಬರೀಶ್, ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರ್ ರೆಡ್ಡಿ ಹಾಗೂ ವೇದಿಕೆಯ ಕಾರ್ಯಕರ್ತರು ಭಾಗವಹಿಸಿದ್ದರು.

4ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿಯನ್ನು ಆಚರಿಸಲಾಯಿತು.