ಎಂಎಲ್‌ಎ ಎಂದು ಪೊಲೀಸರಿಗೆ ಆವಾಜ್‌ ಹಾಕಿದವನ ಸೆರೆ

| Published : Aug 21 2024, 12:41 AM IST

ಸಾರಾಂಶ

ನಾನು ಗೋಕಾಕ ಎಂಎಲ್‌ಎ ಮಾತಾಡೋದು ನಾ ಹೇಳಿದಂಗ್‌ ಕೇಳ್ಲಿಲ್ಲಾ ಅಂದ್ರ ನಿಮ್ಮನ್ನ ಎತ್ತಂಗಡಿ ಮಾಡಿಸ್ತಿನಿ ಹುಷಾರ್ ಎಂದು ಪಿಎಸ್ಐ ಹಾಗೂ ಸಿಪಿಐಗೆ ದೂರವಾಣಿ ಕರೆ ಮೂಲಕ ಪೊಲೀಸರಿಗೆ ಆವಾಜ್‌ ಹಾಕಿದ್ದ ವ್ಯಕ್ತಿಯನ್ನು ಗೋಕಾಕ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕಾಕ

ನಾನು ಗೋಕಾಕ ಎಂಎಲ್‌ಎ ಮಾತಾಡೋದು ನಾ ಹೇಳಿದಂಗ್‌ ಕೇಳ್ಲಿಲ್ಲಾ ಅಂದ್ರ ನಿಮ್ಮನ್ನ ಎತ್ತಂಗಡಿ ಮಾಡಿಸ್ತಿನಿ ಹುಷಾರ್ ಎಂದು ಪಿಎಸ್ಐ ಹಾಗೂ ಸಿಪಿಐಗೆ ದೂರವಾಣಿ ಕರೆ ಮೂಲಕ ಪೊಲೀಸರಿಗೆ ಆವಾಜ್‌ ಹಾಕಿದ್ದ ವ್ಯಕ್ತಿಯನ್ನು ಗೋಕಾಕ ಪೊಲೀಸರು ಬಂಧಿಸಿದ್ದಾರೆ.

ಮೂಡಲಗಿ ತಾಲೂಕಿನ ಅರಭಾವಿ ನಿವಾಸಿ ಸುನೀಲ್ ದಾಸರ್ ಬಂಧಿತ ಆರೋಪಿ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಸಚಿವ ಸತೀಶ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಹೆಸರಲ್ಲಿ ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ಏನಿದು ಪ್ರಕರಣ?:

ಸಂಬಂಧಿಕರಿಂದ ಹಣ ಪಡೆದು ವಾಪಸ್ ಕೊಡದ ಆರೋಪಿಯ ತಾಯಿಯನ್ನು ಗೋಕಾಕ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಆರೋಪಿ ಸುನೀಲ್ ಎಸ್ಪಿ ಡಾ.ಭೀಮಾಶಂಕರ್ ಗುಳೇದ, ಉತ್ತರ ವಲಯದ ಐಜಿಪಿ ವಿಕಾಸಕುಮಾರ್‌ಗೆ ಅವರಿಗೂ ಕರೆ ಮಾಡಿ ನನ್ನ ತಾಯಿಗೆ ತೊಂದರೆ ಕೊಡ್ತಿದ್ದೀರಿ. ನನಗೆ ಸಿಎಂ ಗೊತ್ತು, ಸಿಎಂ ನನಗೆ ಖಾಸಾ ಖಾಸಾ. ನಿಮ್ಮನ್ನ ಎತ್ತಂಗಡಿ ಮಾಡಿಸ್ತಿನಿ ಎಂದು ಬೆದರಿಕೆ ಹಾಕಿದ್ದ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಗೋಕಾಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಸುನೀಲ್ ದಾಸರ್ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ.