ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಎಂ.ಎಸ್. ರಾಮಯ್ಯ ಯೂತ್ ಫೌಂಡೇಶನ್ನಿಂದ ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ನಡೆದ ಬೃಹತ್ ಉದ್ಯೋಗ ಮತ್ತು ಸಾಲ ಮೇಳದಲ್ಲಿ 114 ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಿದ್ದವು.ನಗರದ ಶಿಡ್ಲಘಟ್ಟ ರಸ್ತೆಯ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಬೃಹತ್ ಉದ್ಯೋಗ ಮತ್ತು ಸಾಲ ಮೇಳದಲ್ಲಿ ಶೇ 60 ಮಂದಿಗೆ ಉದ್ಯೋಗ ಮತ್ತು ಶೇ 40 ರಷ್ಟು ಅಭ್ಯರ್ಥಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಬೆಳಿಗ್ಗೆ 9 ಗಂಟೆಗೆ ಆರಂಭವಾದ ಉದ್ಯೋಗ ಮೇಳ ಸಂಜೆವರೆಗೆ ನಡೆಯಿತು. ಒಟ್ಟು 7,500 ಮಂದಿ ಮೇಳದಲ್ಲಿ ಭಾಗವಹಿಸಿದ್ದು, ಮೇಳಕ್ಕೆ ಅಭೂತಪೂರ್ವ ಯಶಸ್ಸು ಲಭಿಸಿತು.
ಉದ್ಯೋಗ ಕಲ್ಪಿಸಲು ಕೇಂದ್ರ ನಿರಾಸಕ್ತಿಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಸ್. ರಾಮಯ್ಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ, ಉದ್ಯೋಗ ದೊರಕಿಸಿಕೊಡಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಯಕ ಸಂಸ್ಕೃತಿಗೆ ಒತ್ತು ನೀಡಿದ್ದು, ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂಬ ಆಶಯ ಹೊಂದಿದ್ದು, ಇದನ್ನು ಸಾಕಾರಗೊಳಿಸಲು ಚೊಚ್ಚಲ ಪ್ರಯತ್ನ ಇದಾಗಿದೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಒತ್ತು ನೀಡಿದ್ದು, ನಿರಂತರವಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು. ಇದಕ್ಕಾಗಿ ವಾಟ್ಸ್ ಆ್ಯಪ್ ಚಾಟ್ ಮತ್ತು ಪ್ರತ್ಯೇಕ ಸಹಾಯವಾಣಿ ತೆರೆಯಲಾಗಿದೆ. ಉದ್ಯೋಗ ಸಿಗದವರು ನಿರಾಶರಾಗಬೇಕಿಲ್ಲ. ಮುಂಬರುವ ದಿನಗಳಲ್ಲಿ ಉದ್ಯೋಗ ಮೇಳಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಸಲಾಗುವುದು ಎಂದರು.
ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿದಿದೆ. ಪ್ರಸ್ತುತ ಬಿಜೆಪಿ ಆಡಳಿತವಿರುವ ಹರಿಯಾಣ ರಾಜ್ಯದಲ್ಲಿ ಶೇ 37.4 ರಷ್ಟು ನಿರುದ್ಯೋಗ ಪ್ರಮಾಣವಿದ್ದು, ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ಬಗ್ಗೆ ಆತಂಕ ಮೂಡಿಸುತ್ತಿದೆ ಎಂದರು.ಉದ್ಯೋಗದ ಜತೆ ಸಾಲ ಮೇಳ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಮಾತನಾಡಿ, ಯುವ ನಿಧಿ ಇಡೀ ರಾಷ್ಟ್ರದಲ್ಲೇ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದ್ದು, ನಮ್ಮ ಪಕ್ಷ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು ನೀಡಿದೆ.
ಖಾಸಗಿ ಸಂಸ್ಥೆಗಳು ನೇಮಕಾತಿ ಏಜನ್ಸಿಗಳನ್ನು ಹೊಂದಿದ್ದು, ತಮಗೆ ಬೇಕಾದವರಿಗೆ ಉದ್ಯೋಗ ನೀಡುತ್ತವೆ. ಆದರೆ ಇಲ್ಲಿ ನೇರವಾಗಿ ಉದ್ಯೋಗ ನೀಡುತ್ತಿರುವುದು ಉತ್ತಮ ಬೆಳವಣಿಯಾಗಿದೆ. ಉದ್ಯೋಗದ ಜೊತೆ ಸಾಲ ಮೇಳ ವಿಶೇಷವಾದದ್ದು ಎಂದರು.ಈ ವೇಳೆ ಕ್ರೈಸ್ತ ಮಿಷನರಿಯ ಫಾದರ್ಗಳಾದ ಡ್ಯಾನಿಯಲ್, ಆಲ್ಬರ್ಟ್ಜಿಯೋ,ಸೆಂಟ್ ಜೋಸೆಫ್ ಖಾಲೇಜಿನ ಪ್ರಾಂಶುಪಾಲ ಬ್ಯಾರಿಸ್ಟರ್ ಬಾರ್ಗಿ,ಸಿಸ್ಟರ್ ಗಳಾದ ನಕ್ಷತ್ರ ,ಭಾರತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ರಾಜೀವ್ ಗಾಂಧಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎನ್.ಬಾಬಾಜಾನ್,ಮಹಿಳಾ ಕಾಂಗ್ರೇಸ್ ರಾಜ್ಯ ಉಪಾಧ್ಯಕ್ಷೆ ಮಮತಾ ಮೂರ್ತಿ, ಜಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಸ್.ರಫೀಉಲ್ಲಾ, ಇಂಟೆಕ್ ರಾಜ್ಯಾಧ್ಯಕ್ಷ ಮಾಡ್ರನ್ ಶಿವು, ಸ್ಥಳೀಯ ಮಹಿಳಾ ಘಟಕದ ನಾರಾಯಣಮ್ಮ, ನಿರ್ಮಲ ಸೇರಿದಂತೆ ಮತ್ತಿತರರು ಇದ್ದರು.