ಸಾರಾಂಶ
ಶಿವಮೊಗ್ಗ: ಮಾನವೀಯ ನೆಲೆಯಲ್ಲೆ ನಡೆಯಬೇಕಾದ ಭಾರತದ ಪತ್ರಿಕೋದ್ಯಮ ತನ್ನ ಸಹಜ, ವೃತ್ತಿಪರ ಹಾದಿಯಿಂದ ಜಾರುತ್ತಿದೆ. ಹೀಗಾಗಿ ವಿಕಸಿತ ಭಾರತ ನಿರ್ಮಾಣಕ್ಕೆ ಮಾನವೀಯ ನೆಲೆಯ ಪತ್ರಿಕೋದ್ಯಮ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಎನ್.ರವಿಕುಮಾರ್ ಹೇಳಿದರು.
ಶಿವಮೊಗ್ಗ: ಮಾನವೀಯ ನೆಲೆಯಲ್ಲೆ ನಡೆಯಬೇಕಾದ ಭಾರತದ ಪತ್ರಿಕೋದ್ಯಮ ತನ್ನ ಸಹಜ, ವೃತ್ತಿಪರ ಹಾದಿಯಿಂದ ಜಾರುತ್ತಿದೆ. ಹೀಗಾಗಿ ವಿಕಸಿತ ಭಾರತ ನಿರ್ಮಾಣಕ್ಕೆ ಮಾನವೀಯ ನೆಲೆಯ ಪತ್ರಿಕೋದ್ಯಮ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಎನ್.ರವಿಕುಮಾರ್ ಹೇಳಿದರು.ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ’ಜಾಗತೀಕರಣ ಸಂದರ್ಭದಲ್ಲಿ ಭಾರತದ ಪತ್ರಿಕೋದ್ಯಮ ಮಾನವೀಯ ವೃತ್ತಿಯಾಗಿದೆಯೇ ? ವಿಷಯ ಕುರಿತು ಅವರು ಮಾತನಾಡಿದರು.
ಮಾನವೀಯತೆಯೇ ಪತ್ರಿಕೋದ್ಯಮದ ಜೀವಧಾತು ಎಂಬ ಸಹಜ ವೃತ್ತಿಪರ ಸೂತ್ರವಾಗಿರಲೇ ಬೇಕಾಗಿರುವಾಗ ಇಂತಹದ್ದೊಂದು ಪ್ರಶ್ನೆ ನಮ್ಮ ಮುಂದೆ ಇರುವುದು ವಿಪರ್ಯಾಸ. ಮಾನವೀಯ ನೆಲೆಯಲ್ಲೆ ನಡೆಯಬೇಕಾದ ಭಾರತದ ಪತ್ರಿಕೋದ್ಯಮ ತನ್ನ ಸಹಜ, ವೃತ್ತಿಪರ ಹಾದಿಯಿಂದ ಜಾರುತ್ತಿರುವುದನ್ನು ಗುರುತಿಸಬಹುದು ಎಂದು ವಿಷಾದಿಸಿದರು.ಮನುಷ್ಯನ ಒಳಿತನ್ನು ಬಯಸುವುದೆ ಪತ್ರಿಕಾ ಧರ್ಮವಾಗಿದೆ. ನನ್ನ ಜನರಿಗೆ ಪತ್ರಿಕೆಗಳಿಲ್ಲ ಎಂದು ಕೊರಗಿದ ಅಂಬೇಡ್ಕರ್ ಈ ದೇಶದ ದಮನಿತ ಬಹುಜನರ ಧ್ವನಿಯಾಗಿ, ಅವರ ಬದುಕಿನ ಹಕ್ಕು, ನ್ಯಾಯದ ಹೋರಾಟಕ್ಕೆ, ಜಾಗೃತಿಗೆ ಬಳಸಿಕೊಂಡಿದ್ದು ಪತ್ರಿಕಾ ರಂಗವನ್ನೇ. ಅಮೇರಿಕಾದಲ್ಲಿದ್ದಾಗ ಅಲ್ಲಿನ ಪತ್ರಿಕೆಗಳು ಕಪ್ಪು ಜನರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದ್ದನ್ನು ಗಂಭೀರವಾಗಿ ಗಮನಿಸಿದ್ದ ಅಂಬೇಡ್ಕರ್ ಅವರು ಭಾರತಕ್ಕೆ ಬರುತ್ತಿದ್ದಂತೆ ಪತ್ರಕರ್ತರಾಗಿ ಸಾಮಾಜಿಕ ಚಳವಳಿಯನ್ನು ಆರಂಭಿಸಿದರು ಎಂದು ತಿಳಿಸಿದರು.ಸ್ವಾತಂತ್ಯ ಕಾಲದ ಪತ್ರಿಕೋದ್ಯಮದ ಸ್ಥಿತಿ ಹೀಗಿದ್ದರೆ. ಸ್ವಾತಂತ್ರ್ಯ ನಂತರದಲ್ಲಿ ಪತ್ರಿಕೋದ್ಯಮ ಪ್ರಜಾಪ್ರಭುತ್ವವನ್ನು ಕಾಯುವ ’ಕಾವಲು ನಾಯಿ’ ಎಂದೇ ಪ್ರಶಂಸನಾತ್ಮಕವಾಗಿ ಕರೆಯಲ್ಪಟ್ಟಿತು. ಅನೇಕ ರಾಷ್ಟ್ರೀಯ, ಪ್ರಾದೇಶಿಕ ಪತ್ರಿಕೆಗಳು ನಿಷ್ಪಕ್ಷಪಾತವಾಗಿ ಭಾರತವನ್ನು ಮಾನವೀಯತೆಯ ತಳಹದಿ ಮೇಲೆ ಕಟ್ಟುವಲ್ಲಿ ಕೆಲಸ ಮಾಡಿವೆಯಾದರೂ ಕ್ರಮೇಣ ಜಾಗತೀಕರಣ , ದೇಶದ ರಾಜಕೀಯ ಹಿತಾಸಕ್ತಿಗೆ ತುತ್ತಾಗಿದ್ದು, ಕಾಲದ ಪಲ್ಲಟ ಎನ್ನಬಹುದು. ಪತ್ರಿಕಾ ರಂಗ ಪತ್ರಿಕೋದ್ಯಮವಾದ ಮೇಲೆ ಬಂಡವಾಳ ಹೂಡಿಕೆ ಮತ್ತು ಗಳಿಕೆಯ ವ್ಯಾಪ್ತಿಗೆ ಬಂದು ಮಾನವೀಯತೆಯೇ ಮರೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದರು.ಜಾಗತೀಕ ಭಾರತದ ಮರು ನಿರ್ಮಾಣದಲ್ಲಿ ಚಲನಚಿತ್ರಗಳ ಮಹತ್ವಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಎಚ್.ಯು.ವೈದ್ಯನಾಥ್, ಪತ್ರಿಕೋದ್ಯಮದಂತೆ ಚಿತ್ರರಂಗವು ಚಿತ್ರೋದ್ಯಮವಾದ ನಂತರ ಮೌಲ್ಯಗಳೆ ಇಲ್ಲವಾಗಿ ಸೊರಗುತ್ತಿದೆ. ನಾಯಕ- ನಾಯಕಿಯರ ವೈಭವೀಕರಿಸುವುದನ್ನು ಬಿಟ್ಟರೆ, ಸಮಾಜಮುಖಿಯಾದ ಸಿನಿಮಾಗಳು ಬರುತ್ತಿಲ್ಲ. ಚಲನಚಿತ್ರಗಳು ಇಂದು ಜನರ ಮನಸ್ಸುನ್ನು ಗೆಲ್ಲುವಲ್ಲಿ ವಿಫಲವಾಗುತ್ತಿವೆ, ಸಿನಿಮಾ ಕೇವಲ ಮನರಂಜನೆಯಲ್ಲ, ಅದೊಂದು ಶಿಕ್ಷಣ ಎಂಬ ಕಲ್ಪನೆಯೇ ಇಲ್ಲವಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಹ ಪ್ರಾಧ್ಯಾಪಕ ಡಾ.ಕೆ.ಚಂದ್ರಪ್ಪ ಮಾತನಾಡಿ, ಇಂದು ಎಲ್ಲಾ ಕ್ಷೇತ್ರಗಳು ಬದಲಾವಣೆಯಾಗಿವೆ, ಮೊಬೈಲ್ ಬಂದು ನಮ್ಮ ಸೃಜನಾಶೀಲತೆಯನ್ನು ಕಸಿದುಕೊಂಡಿವೆ ಎಂದರು.ಸಹ್ಯಾದ್ರಿ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಕೆ.ಎನ್.ಮಹಾದೇವ ಸ್ವಾಮಿ ಇದ್ದರು.