ಸಾರಾಂಶ
ಗದಗ: ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಗದಗ ಜಿಲ್ಲೆಯ ಪಾತ್ರ ಶ್ರೇಷ್ಠವಾದದ್ದು ಎಂದು ಹುಲಕೋಟಿಯ ಗ.ಸ.ಜ.ಗಿ.ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಅರ್ಜುನ ಗೊಳಸಂಗಿ ಹೇಳಿದರು.
ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ್ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪತ್ರಗಾರ ಇಲಾಖೆ, ಪ್ರಾದೇಶಿಕ ಪತ್ರಗಾರ ಕಚೇರಿ ಧಾರವಾಡ ಸಹಯೋಗದಲ್ಲಿ ನಡೆದ ಕರ್ನಾಟಕ ಏಕೀಕರಣ ಚಳವಳಿ ಕುರಿತು ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.೨೦ ಪ್ರಾಂತಗಳಲ್ಲಿ ನಮ್ಮ ರಾಜ್ಯ ಹರಿದು ಹಂಚಿಹೋಗಿತ್ತು. ಇಂದು ನಾವು ಪರಕೀಯದನ್ನೆಲ್ಲ ನಮ್ಮದಾಗಿಸಿಕೊಂಡು ನಮ್ಮದನ್ನು ದೂರಗೊಳಿಸುತ್ತಿದ್ದೇವೆ. ಹಿಂದೆ ನಮ್ಮ ಪೂರ್ವಜರಲ್ಲಿ ಪ್ರತಿಭಟನೆಯ ಗುಣ, ಸ್ವಾಭಿಮಾನ ತುಂಬಿ ತುಳುಕುತ್ತಿದ್ದವು. ಆದರೆ ಇಂದಿನ ಯುವಕರಲ್ಲಿ ಈ ಎರಡು ಗುಣಗಳು ಕುಗ್ಗುತ್ತಿರುವುದನ್ನು ನಾವು ಕಾಣುತ್ತೇವೆ. ಇಂದಿನ ದಿನಗಳಲ್ಲಿ ಪ್ರತಿಭಟನೆ ಇಲ್ಲದೆ ನಾವು ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.
ಈ ವೇಳೆ ಧಾರವಾಡದ ಹಿರೇಮಲ್ಲೂರ ಈಶ್ವರನ್ ಪಪೂ ಕಾಲೇಜಿನ ಪ್ರಾ.ಪ್ರೊ. ಶಶಿಧರ್ ತೊಡಕರ್ ಅವರು, ಏಕೀಕರಣ ಪೂರ್ವದ ಕರ್ನಾಟಕದ ಇತಿಹಾಸ ಕುರಿತು ಉಪನ್ಯಾಸವನ್ನು ನೀಡಿದರು.ದಾಂಡೇಲಿಯ ಸರಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಧ್ಯಾಪಕ ಡಾ. ಬಸವರಾಜ ಅಕ್ಕಿ ಅವರು, ಭಾಷಾವಾರು ಪ್ರಾಂತ್ಯಗಳ ಕಲ್ಪನೆ ಮತ್ತು ಅವಲೋಕನ ಎನ್ನುವ ವಿಷಯ ಕುರಿತು ಉಪನ್ಯಾಸವನ್ನು ನೀಡಿದರು.
ಹಾವೇರಿ ಜಿಲ್ಲೆ ಹಂಸಬಾವಿಯ ಎಂ.ಎ.ಎಸ್.ಸಿ. ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಮಹಾಂತೇಶ ಎಂ. ಅಕ್ಕಿ ಅವರು, ಕರ್ನಾಟಕ ಏಕೀಕರಣ ಚಳವಳಿಯ ಆರಂಭ ಎನ್ನುವ ವಿಷಯ ಕುರಿತು ಪ್ರಬಂಧವನ್ನು ಮಂಡಿಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಶಿವಪ್ಪ ಕುರಿ, ಡಾ.ಲಕ್ಷ್ಮಣ ಮುಳುಗುಂದ, ಡಾ. ಅಪ್ಪಣ್ಣ ಹಂಜೆ, ಡಾ. ಉಲ್ಲಾಸ ಶೆಟ್ಟಿ, ಡಾ. ಜಿತೇಂದ್ರ ಜಾಗೀರ್ದಾರ, ವನಮಾಲಾಖಾನ್ ಗೌಡ್ರು, ಜೆ.ಪಿ. ದೊಡ್ಡೂರ, ಡಾ. ಪ್ರಬಲ ದೊಡ್ಡಣ್ಣವರ್, ಪರಶುರಾಮ ಕಟ್ಟಿಮನಿ, ಡಾ. ಕಿರಣಕುಮಾರ್ ರಾಯರ್ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ನವೀನ ತಿರ್ಲಾಪುರ ನಿರೂಪಿಸಿದರು. ಶಬ್ಬೀರಬಾಷಾ ಆಲೂರ ವಂದಿಸಿದರು.