ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ದೇಶದಲ್ಲಿ ಶೇ.70ರಷ್ಟು ರೈತರು ಇದ್ದು, ಅವರೇ ಬೆನ್ನೆಲುಬು, ಅವರಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಬೇಕು, ರೈತರ ಹಿತ ಕಾಪಾಡುವ ಮೂಲಕ ಅವರ ಬದುಕು ಹಸನಾಗಿಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.ತಾಲೂಕಿನ ಕಗ್ಗೆರೆ ಬಳಿಯ ರಾಮಸಮುದ್ರ ನಾಲೆಯಡಿ ಬರುವ ರು. 43 ಕೋಟಿ ಮೊತ್ತದ ಚಾಮಲಾಪುರ, ಕಗ್ಗೆರೆ ಮತ್ತು ಬನ್ನಿಕುಪ್ಪೆ ಶಾಖಾ ನಾಲೆಯ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರ ಹಿತಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ವಿವಿಧ ಕಾಮಗಾರಿಗೆ ರು. 6 ಸಾವಿರ ಕೋಟಿ ಅನುದಾನ ಮೀಸಲು ಇಟ್ಟಿದ್ದರು. ಅದರಲ್ಲಿ ಕೆ.ಆರ್. ನಗರ ಕ್ಷೇತ್ರದ ವ್ಯಾಪ್ತಿಯಲ್ಲಿನ ನಾಲೆಗಳ ಆಧುನೀಕರಣಕ್ಕೆ ರು.166 ಕೋಟಿ ಅನುದಾನ ನೀಡಲಾಗಿದೆ ಎಂದರು.6 ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕಿಗೆ ಆಗಮಿಸಿ ರು. 506 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ್ದರು. ಅದರಲ್ಲಿ ಇಲ್ಲಿನ ಶಾಖಾ ನಾಲೆಗಳ ಆಧುನೀಕರಣ ಕಾಮಗಾರಿಯೂ ಒಂದಾಗಿದ್ದು, ಇಂದು ಚಾಲನೆ ನೀಡಲಾಗಿದೆ ಎಂದರು.
ತಾಲೂಕು ಅಖಿಲ ನಾಮಧಾರಿಗೌಡ ಸಂಘದ ಅಧ್ಯಕ್ಷ ಕೆ.ಆರ್. ಅಶೋಕ್, ನವನಗರ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಮಹದೇವಯ್ಯ, ಟಿಎಪಿಸಿಎಂಸ್ ಮಾಜಿ ಅಧ್ಯಕ್ಷ ಎಸ್. ಸಿದ್ದೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಮಹದೇವ್, ಉದಯಶಂಕರ್, ವಕ್ತಾರ ಸಯ್ಯದ್ ಜಾಬೀರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಕೆ.ಎಂ. ಶ್ರೀನಿವಾಸ್, ನೀರಾವರಿ ಇಲಾಖೆಯ ಇಇ ಕುಶುಕುಮಾರ್, ಎಇಇ ಆಯಾಸ್ ಪಾಷ, ಎಇ ಕಿರಣ್, ಜೆಇಕನ್ನಿಕಾ, ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮಹದೇವನಾಯಕ, ಮುಖಂಡರಾದ ರಾಜೇಗೌಡ, ದೇವರಾಜು, ತಾಂಡು, ಆನಂದ್, ದಿನೇಶ್, ಬಸವೇಶ್, ಪುಟ್ಟರಾಜು, ತಾಂಡವಮೂರ್ತಿ ಇದ್ದರು.