ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕಾವ್ಯದ ಕಂಪು ಮಕ್ಕಳ ಮನದಲ್ಲಿ ಮೂಡಿದರೆ ಸುಮಧುರ ಪರಿಮಳ ನಾಡಿನಾದ್ಯಂತ ಪಸರಿಸಲಿದೆ ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.ಪಟ್ಟಣದ ಕೇಂಬ್ರಿಡ್ಜ್ ಶಾಲೆಯಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಪಂದನಾ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಹಾಗೂ ಸಿ.ಅಶ್ವಥ್ ನೆನಪಿನ ಸುಗಮ ಸಂಗೀತ ಯಾತ್ರೆಯಲ್ಲಿ ಮಾತನಾಡಿ, ಸಂಗೀತ ಸಂಸ್ಕಾರದ ಮೊದಲ ಹೆಜ್ಜೆ. ಸಂಗೀತಕ್ಕೆ ಸೋಲದ ಮನಸ್ಸಿಲ್ಲ. ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಸಂಗೀತಕ್ಕಿದೆ ಎಂದರು.
ಸುಗಮ ಸಂಗೀತ ಎಂದರೆ ಬರೀ ಸಂಗೀತವಲ್ಲ. ಇದರಲ್ಲಿ ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಸ್ಕಾರ, ಕವಿ, ಗಾಯಕ, ಸಂಯೋಜಕರ ಭಾವೈಕ್ಯತೆಯ ಸಮ್ಮಿಲನವಾಗಿದೆ. ಶಿಕ್ಷಕರು ಇಂತಹ ಗೀತೆ ಕಲಿತರೆ ಮಕ್ಕಳ ಮೂಲಕ ಮತ್ತೊಂದು ತಲೆಮಾರಿಗೆ ತಲುಪಿಸುವ ಪವಿತ್ರ ಕೆಲಸ ಮಾಡಬಹುದು ಎಂದರು.ಮೊಬೈಲ್ ತಲೆ ತಗ್ಗಿಸುವಂತೆ ಮಾಡಿದರೆ, ಟಿವಿ ಭವಿಷ್ಯವನ್ನು ಕಿತ್ತುಕೊಳ್ಳಲಿದೆ. ಇದರಿಂದ ದೂರವಿರಲು ಪಾಲಕರು ತಿಳಬೇಕು. ಕುವೆಂಪು ಅವರ ಪ್ರತಿ ಗೀತೆಯ ಸಾಲಿನಲ್ಲಿ ಪ್ರಕೃತಿ, ನಾಡು, ನುಡಿ, ರೈತ, ಯೋಧ, ದೇಶಭಕ್ತಿ ಅಡಗಿದೆ. ಈ ಸಾರಕ್ಕೆ ಜೀವಧ್ವನಿಯನ್ನು ಸ್ವರ ಸಾಮ್ರಾಟ್ ಸಿ.ಅಶ್ವಥ್ ತುಂಬಿದ್ದಾರೆ ಎಂದರು.
ರಾಜ್ಯಾದ್ಯಂತ ಅಕಾಡೆಮಿ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಪ್ರೇಮಕವಿ ಕಿಕ್ಕೇರಿಯಕೆ.ಎಸ್.ನರಸಿಂಹಸ್ವಾಮಿ ಸೇರಿದಂತೆ ಸುಪ್ರಸಿದ್ದ ಕವಿಗಳ ಪರಿಚಯ, ಗೀತೆ, ಪರಿಸರ ಉಳಿವಿಗಾಗಿ ಸುಗಮ ಸಂಗೀತ ಯಾತ್ರೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮಕ್ಕಳು ಕನ್ನಡ ಬಾವುಟ ಹಿಡಿದು ಗೀತೆಗಳನ್ನು ಹಾಡಿ ನಲಿದಾಡಿದರು. ಕೇಂಬ್ರಿಡ್ಜ್ ಶಾಲೆ ವ್ಯವಸ್ಥಾಪಕಿ ಎಚ್.ಎಸ್. ಅನುಸೂಯ, ಮುಖ್ಯಶಿಕ್ಷಕಿ ಎಚ್.ಎಂ.ದೀಪಾ, ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್, ಕರವೇ ಜಿಲ್ಲಾಧ್ಯಕ್ಷ ಸಾಸಲು ಗುರುಮೂರ್ತಿ, ಪ್ರಶಾಂತ್, ಶೇಕ್ಷವಲ್ಲಿ, ಕೋಮಲ, ಶುಭಾ, ರಕ್ಷಿತಾ, ಶಿಕ್ಷಕ ಸಮೂಹದವರು ಇದ್ದರು.