ಸಮಾಜದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳು, ಐತಿಹಾಸಿಕ, ಸಾಮಾಜಿಕ ಪಿಡುಗುಗಳು ಸೇರಿದಂತೆ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವಂತಹ ನಾಟಕಗಳು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ.
ಧಾರವಾಡ:
ಯಾವುದೇ ಭೇದ-ಭಾವ, ಕೀಳರಿಮೆ, ಬಡವ-ಶ್ರೀಮಂತ ಎನ್ನದೇ ರಂಗಭೂಮಿಯು ಕಲಾವಿದರಿಗೆ ಆಶ್ರಯ ನೀಡಿ, ಅವರ ಬದುಕಿಗೆ ದಾರಿ ತೋರುತ್ತಿದೆ ಎಂದು ರಂಗಭೂಮಿ ಕಲಾವಿದೆ ಶಶಿಪ್ರಭಾ ಕೆ. ಆರಾಧ್ಯ ಹೇಳಿದರು.ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ “ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ, ರಂಗಗೀತೆ ಹಾಗೂ ನಾಟಕ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿದ ಅವರು, ಸಮಾಜದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳು, ಐತಿಹಾಸಿಕ, ಸಾಮಾಜಿಕ ಪಿಡುಗುಗಳು ಸೇರಿದಂತೆ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವಂತಹ ನಾಟಕಗಳು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಅಂತಹ ನಾಟಕಗಳ ಮೂಲಕ ನೋಡುಗರಿಗೆ ಅರಿವನ್ನು ಮೂಡಿಸುವ ಕಾರ್ಯವನ್ನು ರಂಗಾಯಣ ಮಾಡುತ್ತಿದೆ ಎಂದರು.ಹಿರಿಯ ಚಿಂತಕ ಡಾ. ಶ್ರೀರಾಮ ಭಟ್ಟ, ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ರಂಗಭೂಮಿಯ ವಿನ್ಯಾಸ, ನಟನೆ, ರಸ ಸಿದ್ಧಾಂತಗಳ ಕುರಿತು ವಿವರಿಸುತ್ತದೆ. ಅಂದಿನಿಂದಲೂ ನಾಟಕಗಳು ಪ್ರಚಲಿತದಲ್ಲಿದ್ದವು. ಕಾಲದಿಂದ ಕಾಲಕ್ಕೆ ನಾಟಕಗಳು ಬದಲಾವಣೆಗೊಂಡು ತನ್ನ ಅಸ್ತಿತ್ವ ಉಳಿಸಿಕೊಂಡು ಬರುತ್ತಿವೆ. ಪಾಶ್ಚಾತ್ಯೀಕರಣ, ಜನಪದ ರಂಗಭೂಮಿ ಹಾಗೂ ತೊಗಲುಬೊಂಬೆಯಾಟ ಹೀಗೆ ರಂಗಭೂಮಿಯು ಬೆಳೆಯುತ್ತಾ ತನ್ನ ವ್ಯಾಪ್ತಿ ವಿಸ್ತರಿಸಿದೆ. ಶಾಂತಕವಿ ಸಕ್ಕರಿ ಬಾಳಾಚಾರ್ಯರು ಹೊಸಗನ್ನಡ ಕಾವ್ಯರಚಿಸಿ ಯಕ್ಷಗಾನ ತಂತ್ರವನ್ನು ಬಳಸಿಕೊಂಡು ಹಲವಾರು ನಾಟಕಗಳನ್ನು ಬರೆದು ಸ್ವತಃ ಅವರೇ ಕಲಿಸಿ ಪ್ರದರ್ಶಿಸುವ ಮೂಲಕ ಕನ್ನಡ ರಂಗಭೂಮಿಗೆ ಭದ್ರಬುನಾದಿ ಹಾಕಿದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ಸಾಮಾಜಿಕ ಜಾಲತಾಣಗಳ ಇಂದಿನ ಯುಗದಲ್ಲಿ ರಂಗಭೂಮಿಯು ಅಸಮಾನತೆ ಹೊಗಲಾಡಿಸಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದೆ ಎಂದರು.ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋಪಾಲ ಉಣಕಲ್ಲ ಅವರನ್ನು ಸನ್ಮಾನಿಸಲಾಯಿತು. ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ಅಕ್ಕಮ್ಮ ದೇವರಮನಿ, ವಿನೋದ ದಂಡಿನ, ಕುಮಾರ ಲಾಲಸಾಬ್ ಇದ್ದರು. ಲಕ್ಷ್ಮಣ ಪೀರಗಾರ ರಚಿಸಿ, ರಾಘವ ಕಮ್ಮಾರ ಸಂಗೀತ ಸಂಯೋಜಿಸಿ, ದಿ. ರಾಜು ತಾಳಿಕೋಟಿ ಪರಿಕಲ್ಪನೆಯ ಮರಳಿ ಮಹಾತ್ಮನೆಡೆಗೆ” ನಾಟಕ ಹಾಗೂ ರಂಗಗೀತೆಗಳನ್ನು ರಂಗಾಯಣದ ರೆಪರ್ಟರಿ ಕಲಾವಿದರು ಪ್ರದರ್ಶಿಸಿದರು.