ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಆದರ್ಶ ಚಿಂತನೆಗಳು ಮುಖ್ಯ. ಮಹಾತ್ಮರ ಮತ್ತು ತಪಸ್ವಿಗಳ ಚಿಂತನೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾ ಕಿರಣ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶಿಗ್ಗಾಂವಿ: ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಆದರ್ಶ ಚಿಂತನೆಗಳು ಮುಖ್ಯ. ಮಹಾತ್ಮರ ಮತ್ತು ತಪಸ್ವಿಗಳ ಚಿಂತನೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾ ಕಿರಣ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಮಂಗಳವಾರ ಅರಳೆಲೆ ಕಟ್ಟಿಮನಿ ಹಿರೇಮಠದ ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರ ಲಿಂಗ ಬೆಳಕಿನ ೫೨ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ಸಾರ್ಥಕಗೊಳ್ಳದು. ಮನುಷ್ಯನಿಗೆ ಸಂಪತ್ತು ಮತ್ತು ಆ ಸಂಪತ್ತಿನಿಂದ ಇಷ್ಟಾರ್ಥಗಳನ್ನು ಅಷ್ಟೇ ಬಯಸುತ್ತಾನೆ. ಇವೆರಡನ್ನು ಬಯಸುವ ಮನುಷ್ಯನಿಗೆ ಧರ್ಮವೇ ಮೂಲವೆಂಬುದನ್ನು ಮರೆಯುತ್ತಾನೆ.ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮದ ಆದರ್ಶ ಮೌಲ್ಯಗಳನ್ನು ಬಾಳ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದವರು ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು. ಅವರ ಸಾತ್ವಿಕ ಮಾರ್ಗದರ್ಶನದಲ್ಲಿ ಬಹಳಷ್ಟು ಜನ ಭಕ್ತರು ಜೀವನದಲ್ಲಿ ಸುಖ ಶಾಂತಿ ಪಡೆದಿದ್ದನ್ನು ಕಾಣುತ್ತೇವೆ. ಪರಮ ಪೂಜ್ಯ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು, ಹುಲ್ಯಾಳ ಶಂಭುಲಿಂಗ ಶಿವಾಚಾರ್ಯರು, ಹುಬ್ಬಳ್ಳಿ ಹನ್ನೆರಡು ಮಠದ ಮಡಿವಾಳ ಶಿವಾಚಾರ್ಯರನ್ನು ನಾಡಿಗೆ ಕೊಟ್ಟ ಕೀರ್ತಿ ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳಿಗೆ ಸಲ್ಲುತ್ತದೆ. ಇಂದಿನ ಪಟ್ಟಾಧ್ಯಕ್ಷರಾದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳವರು ಅವರು ಹಾಕಿದ ದಾರಿಯಲ್ಲಿ ನಡೆದು ಭಕ್ತ ಸಂಕುಲಕ್ಕೆ ಮಾರ್ಗದರ್ಶನ ನೀಡುತ್ತಿರುವುದು ತಮಗೆ ಹರುಷ ತಂದಿದೆ ಎಂದರು.ನೇತೃತ್ವ ವಹಿಸಿದ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯನ ಉಜ್ವಲ ಬದುಕಿಗೆ ಧರ್ಮವೇ ದಿಕ್ಸೂಚಿ. ಧರ್ಮದ ದಾರಿ ಮೀರಿ ನಡೆದರೆ ಶಾಂತಿ ಸುಖ ದೊರಕಲಾರದು. ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯರು ತಪಸ್ವಿಗಳಾಗಿ ಸಮಾಜ ಚಿಂತಕರಾಗಿ ವೀರಶೈವ ಧರ್ಮ ಸಂಸ್ಕೃತಿ ಬೆಳೆಸುವುದರಲ್ಲಿ ಶ್ರಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ೫೨ನೇ ವರ್ಷದ ಲಿಂಗ ಬೆಳಗಿನ ಸಮಾರಂಭದಲ್ಲಿ ನಾಡಿನೆಲ್ಲೆಡೆಯಿಂದ ಭಕ್ತರು ಆಗಮಿಸಿ ಅವರ ಕೃಪಾ ಕಾರುಣ್ಯಕ್ಕೆ ಪಾತ್ರರಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಸಮಾರಂಭ ಉದ್ಘಾಟಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜ್ಞಾನ ಕ್ರಿಯಾ ಸಂವೇದನಾಶೀಲ ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸಿದೆ. ಗಂಡು ಹೆಣ್ಣು, ಉಚ್ಛ ನೀಚ, ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲದೇ ಸಕಲರ ಶ್ರೇಯಸ್ಸನ್ನು ಬಯಸಿದೆ. ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯರು ಶ್ರೇಷ್ಠ ಆಧ್ಯಾತ್ಮ ಚಿಂತಕರಾಗಿ ವೀರಶೈವ ಧರ್ಮ ಸಂಸ್ಕೃತಿ ಮತ್ತು ಗುರು ಪರಂಪರೆ ಮಹತ್ವವನ್ನು ಭಕ್ತರಿಗೆ ಬೋಧಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.ಈ ಪವಿತ್ರ ಸಮಾರಂಭದಲ್ಲಿ ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಗಂಜೀಗಟ್ಟಿ ಡಾ.ಶಿವಲಿಂಗ ಶಿವಾಚಾರ್ಯರು, ಕರ್ಜಗಿ ಶಿವಯೋಗಿ ಶಿವಾಚಾರ್ಯರು, ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು, ಮಳಲಿಮಠದ ಡಾ.ನಾಗಭೂಷಣ ಶಿವಾಚಾರ್ಯರು, ಶಾಂತಪುರ ಮಠದ ಶಿವಾನಂದ ಶಿವಾಚಾರ್ಯರು, ಸೂಡಿ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯರು, ಹಾವೇರಿ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಕೂಡಲ ಗುರುಮಹೇಶ್ವರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಗಳ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.ಶಾಸಕ ಯಾಸೀರಖಾನ ಪಠಾಣ, ಮಾಜಿ ಸಂಸದ ಮಂಜುನಾಥ ಕುನ್ನೂರ, ಗಂಗಿಭಾವಿ ಶಶಿಧರ ಯಲಿಗಾರ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಡಾ. ಆರ್.ಎಸ್. ಅರಳೆಲೆಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಸವಣೂರಿನ ಡಾ. ಗುರುಪಾದಯ್ಯ ವೀ. ಸಾಲಿಮಠ ಹಾಗೂ ಬಂಕಾಪುರದ ಎಂ.ಬಿ. ಉಂಕಿ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಬಂಕಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯರ ಭವ್ಯ ಭಾವಚಿತ್ರ-ಬೆಳ್ಳಿ ಮಂಗಲ ಮೂರ್ತಿಯ ಭವ್ಯ ಮೆರವಣಿಗೆ ಜರುಗಿತು. ಬಂದ ಎಲ್ಲ ಭಕ್ತರಿಗೆ ಅನ್ನ ದಾಸೋಹ ಜರುಗಿತು..