ಜ್ಞಾನಿಗೆ ವಿಶ್ವದ ಯಾವುದೇ ಮೂಲೆಯಲ್ಲಿ ಮಹತ್ವವಿರುತ್ತದೆ. ಅದಕ್ಕೆ ಜ್ಞಾನಿ ಸರ್ವತ್ರ ಪೂಜಿತ. ಈತನು ಬ್ರಹ್ಮಾಂಡವನ್ನೇ ತೂಗುವ ಶಕ್ತಿ ಹೊಂದಿರುತ್ತಾನೆ. ಬ್ರಹ್ಮಾಂಡದ ಮೇಲೆ ಆಟವಾಡುವನೇ ಜ್ಞಾನಿಯೆಂದು ಹಿಪ್ಪರಗಿ ಇಂಚಗೇರಿ ಮಠದ ಯಲ್ಲಟ್ಟಿ ಇಂಚಗೇರಿಮಠದ ಲಿಂಗರಾಜ ಮಹಾರಾಜರು ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಜ್ಞಾನಿಗೆ ವಿಶ್ವದ ಯಾವುದೇ ಮೂಲೆಯಲ್ಲಿ ಮಹತ್ವವಿರುತ್ತದೆ. ಅದಕ್ಕೆ ಜ್ಞಾನಿ ಸರ್ವತ್ರ ಪೂಜಿತ. ಈತನು ಬ್ರಹ್ಮಾಂಡವನ್ನೇ ತೂಗುವ ಶಕ್ತಿ ಹೊಂದಿರುತ್ತಾನೆ. ಬ್ರಹ್ಮಾಂಡದ ಮೇಲೆ ಆಟವಾಡುವನೇ ಜ್ಞಾನಿಯೆಂದು ಹಿಪ್ಪರಗಿ ಇಂಚಗೇರಿ ಮಠದ ಯಲ್ಲಟ್ಟಿ ಇಂಚಗೇರಿಮಠದ ಲಿಂಗರಾಜ ಮಹಾರಾಜರು ಹೇಳಿದರು.ರಬಕವಿಯ ಗುರುದೇವ ಹೂಗಾರರ ತೋಟದಲ್ಲಿ ನಡೆದ ಇಂಚಗೇರಿ ಸಂಪ್ರದಾಯದ ರಾಚೋಟೇಶ್ವರ ಹಾಗೂ ಮಾತೋಶ್ರೀ ಕಾಶವ್ವತಾಯಿಯವರ ಪುಣ್ಯತಿಥಿ ನಿಮಿತ್ತ ನಡೆದ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದರು. ಧರ್ಮ, ಅರ್ಥ, ಕಾಮ, ಮೋಕ್ಷ ಇವೆಲ್ಲ ಗೆದ್ದವನೇ ಜ್ಞಾನಿ. ಆತ್ಮದ ವೈಭವ ಅನುಭವಿಸುವವನೇ ಜ್ಞಾನಿ. ಇದನ್ನು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಗಳು ಅನುಭವಿಸಿ ಹೋಗಿದ್ದಾರೆ. ಗುರುವಿನ ಸ್ಮರಣೆಯೊಂದಿಗೆ ಉಪದೇಶ ಪಾಲಿಸುವುದು ಅಮೂಲ್ಯ. ಎಲ್ಲ ಜಾತಿ-ಮತ, ಪಂಥ ಹಾಗೂ ಶಾಸ್ತ್ರ, ಧರ್ಮ ಮೀರಿ ಬೆಳೆಯುವಲ್ಲಿ ಇಂಚಗೇರಿ ಸಂಪ್ರದಾಯ ಮಹತ್ವ ಪಡೆದಿದೆ. ಪ್ರಾಣಕ್ಕೆ ಲಿಂಗ ಕಟ್ಟಿದವರೇ ಇಂಚಗೇರಿ ಸದ್ಭಕ್ತರು. ದೇವರು ನಮ್ಮ ಆತ್ಮದೊಳಗೇ ಇದ್ದಾನೆಂದು ಮತ್ತು ಜಾಗತಿಕ ಜಂಜಾಟದಲ್ಲಿ ಮುಳುಗಿ ಚಂಚಲ ಮನಸ್ಸಿನಿಂದ ಮೂಲ ಸ್ವರೂಪ ಕಳೆದುಕೊಂಡು ಕೆಟ್ಟ ಮನಸ್ಸು ಕಟ್ಟಿಕೊಳ್ಳುತ್ತಿದ್ದೇವೆ. ಇವೆಲ್ಲವನ್ನೂ ನಿರ್ಮೂಲನೆಗೊಳಿಸಲು ಧ್ಯಾನವೊಂದೇ ದಿವ್ಯ ಪರಮೌಷಧಿ ಆಗಿದೆ ಎಂದು ಹೇಳಿದರು.
ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿ, ಇಂಚಗೇರಿ ಸಂಪ್ರದಾಯದಿಂದಲೇ ದೇಶ ಸುಧಾರಣೆಗೆ ಸಾಧ್ಯ. ಅಹಂ, ಜಂಬ, ಜಾತಿ, ಪಂಥ ಬಿಟ್ಟು ಸಮಾನತೆ ಕಾಪಾಡುವ ಏಕೈಕ ಸಂಪ್ರದಾಯವಾಗಿದೆ. ಧ್ಯಾನದೊಂದಿಗೆ ಎಲ್ಲವನ್ನೂ ಗೆಲ್ಲಲು ಸಾಧ್ಯ. ಅದಕ್ಕೆ ಏಕಾಗ್ರತೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕೆಂದರು. ಗಿರಮಲ್ಲಪ್ಪ ಚನಾಳ ಮಹಾರಾಜರು ಮಾತನಾಡಿ, ಭಾರತದ ತತ್ವ, ಮುಸ್ಲಿಮರ ಒಗ್ಗಟ್ಟು, ಕ್ರೈಸ್ತರ ವಿಶ್ವಾಸ ಗಟ್ಟಿಗೊಂಡಾಗ ಜಗತ್ತು ಸುಧಾರಣೆಯಾಗಲು ಸಾಧ್ಯವೆಂದರು.ಮಲ್ಲಿಕಾರ್ಜುನ ಹುಲಗಬಾಳಿ, ಗಿರೀಶ ಮುತ್ತೂರ, ಎಂ.ಎಸ್. ಬಾದಾಮಿ, ಶಿವಾನಂದ ಭಸ್ಮೆ ಮಹಾರಾಜರು, ವಿರುಪಾಕ್ಷ ಮಹಾರಾಜರು, ಬಂಡಿವಾಡದ ಬಾಲಪ್ಪ ಮಹಾರಾಜರು, ಶ್ರೀನಿವಾಸ ಬಾಗಲಕೋಟ, ಬಸವರಾಜ ದಲಾಲ, ಶಂಕರ ಜಾಲಿಗಿಡದ, ಸೋಮಶೇಖರ ಕೊಟ್ರಶೆಟ್ಟಿ, ಶಾಂತೇಶ ಪರಮಶೆಟ್ಟಿ, ಮಹಾಶಾಂತ ಶೆಟ್ಟಿ, ನಿವೃತ್ತ ಡಿಡಿಪಿಯು ಶಶಿಧರ ಪೂಜಾರಿ, ಗುರುದೇವ ಹೂಗಾರ, ಬಾಲಚಂದ್ರ ಗುರುವ, ಪ್ರಕಾಶ ಮಂಡಿ, ಸುರೇಶ ಪಟ್ಟಣಶೆಟ್ಟಿ, ಅರವಿಂದ ಮಗದುಮ್ ಮಹಾರಾಜರು ದಾಸಬೋಧ ಪಠಣ ಮಾಡಿದರು.