ವೀರಶೈವ ಮಠಗಳಿಂದ ಧರ್ಮ ಉಳಿಸುವ ಕೆಲಸ: ಜಗದೀಶ ಶೆಟ್ಟರ

| Published : Oct 27 2024, 02:19 AM IST / Updated: Oct 27 2024, 02:20 AM IST

ಸಾರಾಂಶ

ನಾಡಿನಾದ್ಯಂತ ವೀರಶೈವ ಮಠಗಳು ಧರ್ಮ ಜಾಗೃತಿ ಮಾಡುವ ಮೂಲಕ ಧರ್ಮ ಉಳಿಸುವ ಕೆಲಸ ಮಾಡುತ್ತಿವೆ.

ಲಿಂ. ವಿರೂಪಾಕ್ಷಲಿಂಗ ಶಿವಾಚಾರ್ಯ ಪುಣ್ಯಸ್ಮರಣೆಯ ದಶಮಾನೋತ್ಸವ । ಲಿಂಗಾಂಗ ಸಾಮರಸ್ಯ ಧರ್ಮಸಭೆ

ಕುಷ್ಟಗಿ:

ನಾಡಿನಾದ್ಯಂತ ವೀರಶೈವ ಮಠಗಳು ಧರ್ಮ ಜಾಗೃತಿ ಮಾಡುವ ಮೂಲಕ ಧರ್ಮ ಉಳಿಸುವ ಕೆಲಸ ಮಾಡುತ್ತಿವೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ತಾಲೂಕಿನ ಚಳಗೇರಾ ಗ್ರಾಮದಲ್ಲಿ ಲಿಂ. ವಿರೂಪಾಕ್ಷಲಿಂಗ ಶಿವಾಚಾರ್ಯ ಪುಣ್ಯಸ್ಮರಣೆಯ ದಶಮಾನೋತ್ಸವದ ಅಂಗವಾಗಿ ರಂಭಾಪುರಿ ಶ್ರೀಗಳಾದ ಡಾ. ವೀರಸೋಮೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆದ ಲಿಂಗಾಂಗ ಸಾಮರಸ್ಯ ಧರ್ಮಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕುಷ್ಟಗಿ ತಾಲೂಕಿನ ಚಳಗೇರಾ ಮಠವು ಅನ್ನದಾಸೋಹ, ಶಿಕ್ಷಣ ನೀಡುವ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಮಾತಿನಂತೆ ರಂಭಾಪುರಿ ಶ್ರೀಗಳು ನಾಡಿನ ತುಂಬೆಲ್ಲ ಪ್ರವಾಸ ಮಾಡಿ ಧರ್ಮ ಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಶಾಂತಿ ನೆಲೆಸಬೇಕು ಎಂಬ ಉದ್ದೇಶದಿಂದ ಅನೇಕ ದೇಶಗಳಿಗೆ ಪ್ರವಾಸ ಮಾಡುವ ಮೂಲಕ ಅಲ್ಲಿಯ ಅಧ್ಯಕ್ಷರನ್ನು ಭೇಟಿ ಮಾಡಿ ಯುದ್ಧ ಮಾಡುವ ಬದಲಿಗೆ ಶಾಂತಿ ನೆಲೆಸುವ ಕಾರ್ಯ ಮಾಡಬೇಕು ಎಂದು ಬುದ್ದಿವಾದ ಹೇಳುವ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತಿದಾರೆ ಎಂದರು.

ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಸುಮಾರು ಐದು ಸಾವಿರ ವರ್ಷಗಳ ಕಾಲದಿಂದಲೂ ಸಹಿತ ವೀರಶೈವ ಮಠಗಳು ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಮೂಲಕ ಶಿಕ್ಷಣ, ವಸತಿ, ಅನ್ನದಾಸೋಹ ಹಾಗೂ ಧರ್ಮ ಜಾಗೃತಿ ಕಾರ್ಯ ಮಾಡುತ್ತಿವೆ. ಇಂತಹ ಮಠಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಬೆಳೆಸುವ ಕೆಲಸ ಮಾಡಬೇಕು. ಈ ಚಳಗೇರಾ ಮಠವು ವಸತಿ ನಿಲಯದ ಸ್ಥಾಪನೆಗೆ ಹೆಜ್ಜೆ ಇಟ್ಟಿದ್ದು, ಶ್ಲಾಘನೀಯ. ಈ ಕಟ್ಟಡಕ್ಕೆ ನಾನು ಈ ವರ್ಷ ₹10 ಲಕ್ಷ, ಮುಂದಿನ ವರ್ಷ ₹ಹತ್ತು ಲಕ್ಷ ಅನುದಾನ ನೀಡುತ್ತೇನೆ ಎಂದರು.

ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಕೆ. ಶರಣಪ್ಪ ವಕೀಲರು, ಎಸ್.ಆರ್. ನವಲಿ ಹಿರೇಮಠ ಸೇರಿದಂತೆ ಅನೇಕರು ಮಾತನಾಡಿದರು. ಈ ಸಂದರ್ಭ ವಿಮಲರೇಣುಕ ಮುಕ್ತಿಮುನಿ, ವೀರಸಂಗಮೇಶ್ವರ ಶಿವಾಚಾರ್ಯರು, ವೀರಭದ್ರಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ವಾಮದೇವ ಸ್ವಾಮಿಗಳು, ಕರಿಬಸವ ಶಿವಾಚಾರ್ಯರು, ಚಂದ್ರಶೇಖರ ದೇವರು, ಶಿವಶಾಂತವೀರ ಸ್ವಾಮಿಗಳು ಸೇರಿದಂತೆ ಭಕ್ತಾಧಿಗಳು ಇದ್ದರು. ಶಿಕ್ಷಕ ಚನ್ನಯ್ಯಸ್ವಾಮಿ ಕಾರ್ಯಕ್ರಮದ ನಿರೂಪಿಸಿದರು.