ನವಲಗುಂದ: ಪಂಚಗ್ರಹ ಹಿರೇಮಠದ ಗುರುಪಟ್ಟಾಧಿಕಾರ ಮಹೋತ್ಸವ ನಿಮಿತ್ತ 11 ದಿನಗಳ ಕಾಲ ನಿರಂತರವಾಗಿ ಪ್ರವಚನ ಆಯೋಜಿಸುವ ಮೂಲಕ ಭಕ್ತರಲ್ಲಿ ಆಧ್ಯಾತ್ಮದ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.
ಪಟ್ಟಣದ ಹಿರೇಮಠದಲ್ಲಿ ಮೇ 12-13 ರಂದು ಪಂಚಪೀಠಾಧೀಶ್ವರರ ನೇತೃತ್ವದಲ್ಲಿ ಜರುಗಲಿರುವ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಆಯೋಜಿಸಿಲಾದ 11 ದಿನಗಳ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭೀಮರಾಶಿ ಹೂಗಾರ ರಚಿಸಿದ ಸಾಹಿತ್ಯದ ಹಾಡುಗಳ ಸಿದ್ದೇಶ್ವರ ಶ್ರೀ ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದರು.ಯೂಟೂಬ್, ಬ್ಲೂಟೂತ್ ಯುಗದಲ್ಲಿ ನಸಿಸಿ ಹೋಗುತ್ತಿರುವ ಭಕ್ತಿ ಸಂಗೀತಕ್ಕೆ ಮೆರಗು ನೀಡುವಂತೆ ಸಾವಿರ ವರ್ಷಗಳ ಇತಿಹಾಸ ಇರುವ ಹಿರೇಮಠದ ಕತೃ ಶ್ರೀ ಸಿದ್ದೇಶ್ವರ ಶ್ರೀಗಳ ಕುರಿತಾಗಿ ರಚಿತವಾದ ಭಕ್ತಿಗೀತೆಗಳು ಇಂದಿನ ಪೀಳಿಗೆಗೆ ಅವಶ್ಯವಾಗಿದೆ ಎಂದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ತಾಲೂಕಿನ ಎಲ್ಲ ಜನತೆಯು ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಆಚರಣೆಗೆ ವಿಜೃಂಭಣೆಯ ಸಿದ್ಧತೆ ನಡೆಸಿದ್ದು, ಜ. ಪಂಚಾಚಾರ್ಯರ ಸಮ್ಮುಖದಲ್ಲಿ ಪೀಠಾಧಿಕಾರ ಮಹೋತ್ಸವ ನಡೆಸಲು ಉದ್ದೇಶಿಸಿರುವುದು ಹಾಗೂ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಸುತ್ತಿರುವುದು ಈ ನೆಲದ ಹೆಮ್ಮೆಯಾಗಿದೆ. ಜಗದ್ಗುರುಗಳ ಸಾನ್ನಿಧ್ಯದಲ್ಲಿ ನವಲಗುಂದ ಪುಣ್ಯಭೂಮಿಯಾಗಿ ರೂಪಗೊಳ್ಳಲಿ ಎಂದರು.ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ತುಪ್ಪದಕುರಟ್ಟಿಯ ಪಂಡಿತಾರಾಧ್ಯ ಸ್ವಾಮೀಜಿ, ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ನಿಯೋಜಿತ ಪೀಠಾಧಿಕಾರಿ ವೀರಬಸವದೇವರು, ಅಣ್ಣಪ್ಪ ಬಾಗಿ, ವರ್ತಕರ ಸಂಘದ ಅಧ್ಯಕ್ಷ ರಾಘವೇಂದ್ರ ಧಾರವಾಡ, ವಿರೇಶ ಕೂಗುಮಠ, ಶ್ರೀಶೈಲ ಮೂಲಿಮನಿ, ಪಾಂಡಪ್ಪ ಕೋನರಡ್ಡಿ, ಸಿದ್ದಲಿಂಗಯ್ಯ ಹಿರೇಮಠ. ಅಲ್ಲಾಸಾಬ ಕಲ್ಲಕುಟ್ರಿ, ಅಪ್ಪಣ್ಣ ಹಳ್ಳದ, ಅಡಿವೆಪ್ಪ ಶಿರಸಂಗಿ, ಯಲ್ಲಪ್ಪ ಭೋವಿ ಮತ್ತಿತರರಿದ್ದರು.