ರಕ್ತಕ್ಕೆ ಪರ್ಯಾಯವಾಗಿ ಯಾವುದೇ ಔಷಧಿ ಇಲ್ಲ: ಡಾ.ಮೀರಾ ಶಿವಲಿಂಗಯ್ಯ

| Published : Oct 26 2025, 02:00 AM IST

ಸಾರಾಂಶ

ರಕ್ತದಾನ ಮಹಾದಾನ, ದಾನಕ್ಕಿಂತ ಮಿಗಿಲಾದ್ದು ರಕ್ತದಾನ. ರಕ್ತಕ್ಕೆ ಪರ್ಯಾಯವಾಗಿ ಯಾವುದೇ ಔಷಧಿ ಇಲ್ಲದ ಕಾರಣ ರಕ್ತಕ್ಕೆ ರಕ್ತವೇ ಪರಿಹಾರ. ಮಿಮ್ಸ್ ರಕ್ತ ನಿಧಿ ಕೇಂದ್ರದಲ್ಲಿ ತಿಂಗಳಿಗೆ 1,500 ರಿಂದ 2,000 ದಷ್ಟು ರಕ್ತ ಚೀಲಗಳ ಅವಶ್ಯಕತೆ ಇರುತ್ತದೆ. ಅದರಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳಲ್ಲಿ ಶೇ.60 ರಷ್ಟು ಮಾತ್ರ ಸಂಗ್ರಹಣೆ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಕ್ತಕ್ಕೆ ಪರ್ಯಾಯವಾಗಿ ಯಾವುದೇ ಔಷಧಿ ಇಲ್ಲ. ದಾನಿಗಳು ನೀಡುವ ರಕ್ತಕ್ಕೆ ರಕ್ತವೇ ಪರಿಹಾರ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ ಹೇಳಿದರು.

ತಾಲೂಕಿನ ಅರಕೆರೆ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ವೀಲ್ ಕಾಟ್ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ರಕ್ತದಾನ ಮಹಾದಾನ, ದಾನಕ್ಕಿಂತ ಮಿಗಿಲಾದ್ದು ರಕ್ತದಾನ. ರಕ್ತಕ್ಕೆ ಪರ್ಯಾಯವಾಗಿ ಯಾವುದೇ ಔಷಧಿ ಇಲ್ಲದ ಕಾರಣ ರಕ್ತಕ್ಕೆ ರಕ್ತವೇ ಪರಿಹಾರ. ಮಿಮ್ಸ್ ರಕ್ತ ನಿಧಿ ಕೇಂದ್ರದಲ್ಲಿ ತಿಂಗಳಿಗೆ 1,500 ರಿಂದ 2,000 ದಷ್ಟು ರಕ್ತ ಚೀಲಗಳ ಅವಶ್ಯಕತೆ ಇರುತ್ತದೆ. ಅದರಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳಲ್ಲಿ ಶೇ.60 ರಷ್ಟು ಮಾತ್ರ ಸಂಗ್ರಹಣೆ ಮಾಡಲಾಗುತ್ತಿದೆ ಎಂದರು.

ಸರ್ಕಾರದ ನಿಯಮಗಳ ಪ್ರಕಾರ ರಕ್ತ ಚೀಲಗಳನ್ನು ನೀಡುವ ಸಂದರ್ಭದಲ್ಲಿ ಬದಲಿ ರಕ್ತ ಪಡೆಯದೆ ರಕ್ತ ಚೀಲಗಳನ್ನು ರೋಗಿಗಳಿಗೆ ನೀಡಬೇಕಾಗಿದೆ. ಆದರೆ, ಮಂಡ್ಯದಲ್ಲಿ ಹೆಚ್ಚು ಹೆರಿಗೆ, ಅನೀಮಿಯ, ಶಸ್ತ್ರಚಿಕಿತ್ಸೆಗಳು ನಡೆಯುತ್ತಿರುವುದರಿಂದ ಉಳಿದ ಶೇ.40 ರಷ್ಟು ಬದಲಿ ರಕ್ತ ಪಡೆದು ರಕ್ತಚೀಲಗಳನ್ನು ನೀಡಲಾಗುತ್ತಿದೆ. ಇದು ನಿಲ್ಲಬೇಕು ಎಂದರು.

ಹೆಚ್ಚು ಹೆಚ್ಚು ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ನಡೆಯಬೇಕು. 18 ರಿಂದ 60 ವರ್ಷದೊಳಗಿನ ಆರೋಗ್ಯವಂತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಬೇಕು ಎಂದರು.

ಅರಕೆರೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು 80 ಮಂದಿ ರಕ್ತ ನೀಡುವ ಮಾನವೀಯತೆ ಮೆರೆದರು. ಈ ವೇಳೆ ಕಾಲೇಜು ಯುವ ರೆಡ್ ಕ್ರಾಸ್ ಘಟಕ ಸಂಯೋಜಕಿ ಸುಮಲತಾ, ಪ್ರಭಾರ ಪ್ರಾಂಶುಪಾಲ ಶಿವರಾಜು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತಿಬ್ಬೇಗೌಡ, ಅಲಯನ್ಸ್ ಸಂಸ್ಥೆಯ ಅನಿಲ್ ಬಾಬು, ಚನ್ನೇಗೌಡ, ಕಿಶೋರ್ ಎ.ಎಸ್, ರಕ್ತನಿಧಿ ಕೇಂದ್ರದ ಭಾನುಮತಿ, ವೀಲ್ ಕಾಟ್ ಸಂಸ್ಥೆ ಶಿವಕುಮಾರ್ ಸೇರಿದಂತೆ ಇತರರು ಇದ್ದರು.