ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜಗತ್ತಿಗೆ ಇಂದು ಶಾಂತಿ ಬೇಕಾಗಿದೆ. ಅದು ವಿಶ್ವಗುರು ಬಸವಣ್ಣನವರ ಸಂದೇಶದಲ್ಲಿದೆ. ಇದನ್ನು ಜಗತ್ತಿಗೆ ಅರ್ಥಮಾಡಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು ಎಂದು ಶ್ರೀಕ್ಷೇತ್ರ ಕಾಪನಹಳ್ಳಿ ಗವಿಮಠದ ಪೀಠಾಧ್ಯಕ್ಷ ಶ್ರೀಸ್ವತಂತ್ರ ಚನ್ನವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಬಸವ ಜಯಂತಿ ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ಕೂಡಾ ಮುಂದುವರೆದ ಜಗತ್ತನ್ನು ನೋಡುತ್ತಿದ್ದೇವೆ. ಹಣಕಾಸಿನ ತೊಂದರೆಯಿಲ್ಲ. ಎಲ್ಲವೂ ಅಂಗೈಯಲ್ಲಿದೆ. ಆದರೆ, ನಮಗೆ ಬೇಕಾದ ಶಾಂತಿ ಮಾತ್ರ ದೊರಕುತ್ತಿಲ್ಲ. ಇದರ ಹುಡುಕಾಟದಲ್ಲಿ ನಾವು ಸೋಲುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ನಮ್ಮಲ್ಲಿಯೇ ಬಡಿದಾಡಿಕೊಳ್ಳುತ್ತಿದ್ದೇವೆ. ಈ ಹಿಂದೆ ನಾವೆಲ್ಲರೂ ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದೆವು. ಎಲ್ಲವನ್ನು ಹಣ ನಿರ್ಧರಿಸುತ್ತಿರಲಿಲ್ಲ. ಅಂತಹ ಜೀವನವನ್ನು ಮರುಸ್ಥಾಪಿಸಬೇಕೆಂದರೆ ಬಸವಣ್ಣನವರನ್ನು ನಾವು ಓದಬೇಕಾಗಿದೆ ಎಂದರು.

ಶಾಸಕ ಎಚ್.ಟಿ.ಮಂಜು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಜಾತಿ ಸಂಕೋಲೆಗಳಿಂದ ಮಹನೀಯರನ್ನು ಹೊರತರಬೇಕಿದೆ. ಬಸವಣ್ಣನವರನ್ನು ನಾವು ಜಾತಿಯ ಸಂಕೋಲೆಯಿಂದ ಹೊರತರದಿದ್ದರೆ ನಾವುಗಳು ನಮ್ಮ ನಾಶವನ್ನು ನಾವೇ ಮಾಡಿಕೊಂಡಂತೆ ಎಂದರು.


ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಸಾಧಕರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಚೇಂದ್ರಪ್ರಸಾದ್, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತೋಂಟಪ್ಪಶೆಟ್ಟಿ, ಜನಜಾಗೃತಿ ಮಹಾಸಭಾದ ಮಾಜಿ ಅಧ್ಯಕ್ಷ ಕೆ.ಎಸ್.ರಾಜೇಶ್, ಜೆ.ಡಿ.ಎಸ್ ಮುಖಂಡ ಬಸವಲಿಂಗಪ್ಪ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಆಚಾರ್ಯ ವಿದ್ಯಾಶಾಲೆ ಆಡಳಿತಾಧಿಕಾರಿ ಕೆಎ.ಸ್.ನಾಗೇಶ್‌ಬಾಬು, ಬ್ಯಾಂಕ್ ಪರಮೇಶ್, ಉಪ ತಹಸೀಲ್ದಾರ್ ಲೋಕೇಶ್, ಡಿಎಫ್‌ಒ ಅನಿತಾ, ತಾಪಂ ಇಒ ಕೆ.ಸುಷ್ಮ ಸೇರಿದಂತೆ ಹಲವರು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಬಸವಣ್ಣನವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯದ ಸಮೇತ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.