ಸಾರಾಂಶ
ಹಾವೇರಿ ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನವಾಗಬೇಕು, ಮತದಾರರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭಿತಿಯಿಂದ ಮೇ 7ರಂದು ತಪ್ಪದೇ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಧಿಕಾರಿ ಅಕ್ಷಯ ಶ್ರೀಧರ ಮನವಿ ಮಾಡಿದರು.
ರಟ್ಟಿಹಳ್ಳಿ: ಹಾವೇರಿ ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನವಾಗಬೇಕು, ಮತದಾರರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭಿತಿಯಿಂದ ಮೇ 7ರಂದು ತಪ್ಪದೇ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ಮನವಿ ಮಾಡಿದರು.
ತಾಲೂಕಿನ ಕೋಡಮಗ್ಗಿ ಹಾಗೂ ನೇಶ್ವಿ ಗ್ರಾಮದಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಅತ್ಯಧಿಕ ತಾಪಮಾನ ಉಂಟಾಗಿದ್ದು ಕಾರಣ ಕೆಲಸದ ಸಮಯದಲ್ಲಿ ರಿಯಾಯಿತಿ ನೀಡಿದ್ದು ಕಾರ್ಮಿಕರು ಬಿಸಿಲಿನ ತಾಪಮಾನ ಹೆಚ್ಚುವ ಮುನ್ನ ನಿಗದಿತ ಕೆಲಸ ಮುಗಿಸಿಕೊಂಡು ತೆರಳಬೇಕು, ತಾಪಮಾನ ಹೆಚ್ಚಾದ್ದರಿಂದ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಕಾರಣ ಪ್ರತಿ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.ಕಾರ್ಮಿಕರ ಅವಶ್ಯಕತೆಗೆ ತಕ್ಕಂತೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಇನ್ನೂ ಹೆಚ್ಚಿನ ಕಾಮಗಾರಿಗಳನ್ನುಅನುಷ್ಠಾನಗೊಳಿಸಿ ಮಾದರಿ ಕಾಮಗಾರಿಗಳನ್ನು ನಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಸಹಾಯಕ ನಿರ್ದೇಶಕ ಜಿ.ಜಿ. ನಾಯಕ, ಗ್ರಾ.ಪಂ. ಸದಸ್ಯ ಯಶವಂತ ಯಡಗೋಡ, ತಾಂತ್ರಿಕ ಸಂಯೋಜಕ ಬಸನಗೌಡ ಎಸ್.ಪಿ., ಐಇಸಿ ಸಂಯೋಜಕ ಕುಮಾರ ಚಿಕ್ಕಮಠ, ಪಿಡಿಒ ದರ್ಶನ ಕೆ., ಪ್ರವೀಣ ಆರ್.ಬಿ., ಹೊನ್ನಪ್ಪ, ಪ್ರೇಮಾ, ಸುಧಾ ಸೇರಿದಂತೆ ಪಂಚಾಯತ್ ಸಿಬ್ಬಂದಿಗಳು ಇದ್ದರು.