ಖರೀದಿಸಿದ ವಸ್ತುವಿಗೆ ರಶೀದಿ ಇರಲಿ: ನ್ಯಾಯಾಧೀಶ ಮಂಜುನಾಥ

| Published : Mar 21 2025, 12:34 AM IST

ಸಾರಾಂಶ

ಆನ್‌ಲೈನ್ ವ್ಯವಹಾರ ಸೃಷ್ಟಿಯಾಗಿದ್ದು ಸಣ್ಣ ಲಾಭಕ್ಕಾಗಿ ದೊಡ್ಡ ಮೋಸಕ್ಕೆ ಬಲಿಯಾಗಬಾರದು. ಪ್ರತಿಯೊಂದು ವಸ್ತುಗಳ ಖರೀದಿ ಸಮಯದಲ್ಲಿ ಅದರ ಗುಣಮಟ್ಟ ಅರಿತುಕೊಳ್ಳಬೇಕು. ವಸ್ತು ಖರೀದಿಸಿ ಮೋಸ ಹೋದಾಗ ರಶೀದಿ ಇದ್ದರೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು.

ಕುಷ್ಟಗಿ:

ಮಾರುಕಟ್ಟೆಯಲ್ಲಿ ಖರೀದಿಸುವ ಪ್ರತಿಯೊಂದು ವಸ್ತುಗಳಿಗೆ ಬಿಲ್ ಪಡೆಯುವುದು ಗ್ರಾಹಕನ ಹಕ್ಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆನ್‌ಲೈನ್ ವ್ಯವಹಾರ ಸೃಷ್ಟಿಯಾಗಿದ್ದು ಸಣ್ಣ ಲಾಭಕ್ಕಾಗಿ ದೊಡ್ಡ ಮೋಸಕ್ಕೆ ಬಲಿಯಾಗಬಾರದು. ಪ್ರತಿಯೊಂದು ವಸ್ತುಗಳ ಖರೀದಿ ಸಮಯದಲ್ಲಿ ಅದರ ಗುಣಮಟ್ಟ ಅರಿತುಕೊಳ್ಳಬೇಕು. ವಸ್ತು ಖರೀದಿಸಿ ಮೋಸ ಹೋದಾಗ ರಶೀದಿ ಇದ್ದರೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು ಎಂದರು.

ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ವ್ಯಾಪಾರಿಗಳು ಗ್ರಾಹಕರು ಖರೀದಿಸಿದ ವಸ್ತುಗಳಿಗೆ ಕಡ್ಡಾಯವಾಗಿ ರಶೀದಿ ನೀಡಬೇಕು. ವ್ಯಾಪಾರಿಗಳಿಂದ ಗ್ರಾಹಕರಿಗೆ ಮೋಸ ಉಂಟಾದರೆ ಕಾನೂನು ಸೇವಾ ಸಮಿತಿಯಲ್ಲಿ ಸೂಕ್ತ ಮಾಹಿತಿ ಪಡೆದುಕೊಂಡು ಮುಂದಿನ ಕಾನೂನು ಕ್ರಮಕ್ಕಾಗಿ ಮುಂದಾಗಬೇಕು ಎಂದು ಹೇಳಿದರು.

ಸಿಪಿಐ ಯಶವಂತ ಬಿಸನಹಳ್ಳಿ ಮಾತನಾಡಿದರು, ಈ ವೇಳೆ ಪಿಎಸ್ಐ ಹನುಮಂತಪ್ಪ ತಳವಾರ, ಸರ್ಕಾರಿ ಸಹಾಯಕ ಅಭಿಯೋಜಕ ಎಲ್. ರಾಯನಗೌಡ, ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೇಲಿಮಠ ಸೇರಿದಂತೆ ವ್ಯಾಪಾರಿಗಳು ಇದ್ದರು.