ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡಬೇಕು. ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ತಾಂತ್ರಿಕ, ವೈದ್ಯಕೀಯ ಸೇರಿದಂತೆ ಉನ್ನತ ಪದವಿಗಳನ್ನು ಪಡೆದು ಕೆಲಸ ಮಾಡುವುದು ಅಗತ್ಯ. ನಾರಿಯೊಬ್ಬಳು ಕಲಿತರೆ ಮನೆಯೇ ವಿದ್ಯಾವಂತ ಕುಟುಂಬ ಎಂಬಂತೆ ಮಹಿಳೆಯರು ಹೆಚ್ಚು ಬುದ್ಧಿವಂತರು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳು ಕೇವಲ ಪದವಿ ಪಡೆದರಷ್ಟೇ ಸಾಲದು, ಅದಕ್ಕೆ ಪೂರಕವಾಗಿ ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಉದ್ಯಮಿಗಳಾಗಬೇಕು. ಆ ಮೂಲಕ ಸಾಕಷ್ಟು ಮಂದಿಗೆ ಉದ್ಯೋಗ ಕೊಡುವಂತಹ ಕೆಲಸ ಮಾಡಬೇಕು ಎಂದು ಇಂಡಿಯನ್-ಅಮೆರಿಕನ್ ಕಂಪ್ಯೂಟರ್ ವಿಜ್ಞಾನಿ ಪ್ರೊ.ಸುಂದರ್‌ರಾಜಾ ಸೀತಾರಾಮ ಅಯ್ಯಂಗಾರ್ ತಿಳಿಸಿದರು.

ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿರುವ (ಸಿದ್ದಯ್ಯನಕೊಪ್ಪಲು ಗೇಟ್) ಕಾವೇರಿ ತಾಂತ್ರಿಕ ಮಹಾ ವಿದ್ಯಾಲಯದ ವತಿಯಿಂದ ಕಾಲೇಜಿನ ಆವರಣದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಉದ್ಯೋಗಿಗಳಾಗುವುದಕ್ಕೆ ಪದವಿಯನ್ನು ಸೀಮಿತಗೊಳಿಸಿಕೊಳ್ಳದೆ ಉದ್ಯಮಿಗಳಾಗುವತ್ತ ಗಂಭೀರ ಚಿಂತನೆ ನಡೆಸಬೇಕು. ಉದ್ಯಮಿಗಳಾಗುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಆ ಕೌಶಲ್ಯವನ್ನು ಸಂಪಾದಿಸುವ ಮೂಲಕ ಉದ್ಯೋಗದಾತರಾಗುವಂತೆ ಸಲಹೆ ನೀಡಿದರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರೇ ಹೆಚ್ಚು ಮಂದಿ ತಾಂತ್ರಿಕ ಪದವಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ಇದು ಒಳ್ಳೆಯ ಬೆಳವಣಿಗೆ. ಅದರಲ್ಲೂ ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡಬೇಕು. ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ತಾಂತ್ರಿಕ, ವೈದ್ಯಕೀಯ ಸೇರಿದಂತೆ ಉನ್ನತ ಪದವಿಗಳನ್ನು ಪಡೆದು ಕೆಲಸ ಮಾಡುವುದು ಅಗತ್ಯ. ನಾರಿಯೊಬ್ಬಳು ಕಲಿತರೆ ಮನೆಯೇ ವಿದ್ಯಾವಂತ ಕುಟುಂಬ ಎಂಬಂತೆ ಮಹಿಳೆಯರು ಹೆಚ್ಚು ಬುದ್ಧಿವಂತರು. ಅವರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಲ್ಲಿ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೇವಲ ಇಂಡಿಯಾದಲ್ಲಿ ಮಾತ್ರವಲ್ಲದೆ, ಅಮೆರಿಕಾದಲ್ಲೂ ಸಹ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲೂ ಸಹ ಸಾಕಷ್ಟು ಹಳ್ಳಿಗಳು ಇವೆ. ಅದನ್ನು ನಾನು ಹತ್ತಿರದಿಂದ ಕಂಡಿದ್ದೇನೆ ಎಂದರು.

ವಿದ್ಯಾರ್ಥಿಗಳು ಕೇವಲ ಪದವಿ ಪಡೆದರಷ್ಟೇ ಸಾಲದು, ಅದಕ್ಕೆ ಪೂರಕವಾಗಿ ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಉದ್ಯಮಿಗಳಾಗಬೇಕು. ಆ ಮೂಲಕ ಸಾಕಷ್ಟು ಮಂದಿಗೆ ಉದ್ಯೋಗ ಕೊಡುವಂತಹ ಕೆಲಸ ಮಾಡಬೇಕು ಎಂದರು.

ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಸೌಲಭ್ಯ ಕಲ್ಪಿಸುತ್ತಿದೆ. ಸ್ಕಿಲ್ ಡೆವಲಪ್‌ಮೆಂಟ್‌ಗಾಗಿ ಪ್ಲೇಸ್‌ಮೆಂಟ್ ಟ್ರೈನಿಂಗ್ ನೀಡುತ್ತಿದೆ. ಈಗಾಗಲೇ ಅಂತಿಮ ವರ್ಷದ ೧೧೦ ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಕಂಪನಿಗಳೊಡನೆ ಹಾಗೂ ಇಂಡೋನೇಷಿಯಾದ ವಿವಿ ಉನ್ತಾರ್‌ನೊಂದಿಗೆ ಎಂ.ಒ.ಯು.ಗೆ ಸಹಿ ಮಾಡಿದ್ದಾರೆ ಇದು ವಿದ್ಯಾರ್ಥಿಗಳಿಗಾಗಿ ಮಾಡಿರುವ ಒಳ್ಳೆಯ ಕೆಲಸವಾಗಿದೆ ಎಂದು ಶ್ಲಾಘಿಸಿದರು.

ಕಾವೇರಿ ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಿ.ಜಿ. ಸಂಗಮೇಶ್ವರ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಾರ್ಯದರ್ಶಿ ಡಾ. ಸಿ.ಜೆ. ಗಂಗಾಧರಗೌಡ, ಪ್ರಾಂಶುಪಾಲ ಡಾ. ಎ.ಎಸ್. ಶ್ರೆಕಂಠಪ್ಪ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.