ಈ ಬಾರಿ ವಾಡಿಕೆಗಿಂತ ಹೆಚ್ಚು 24 ರಷ್ಟು ಹೆಚ್ಚು ಮಳೆ : ರೈತರ ಮೊಗದಲ್ಲಿ ಸಂತಸ ಇಮ್ಮಡಿ

| N/A | Published : May 28 2025, 11:55 PM IST / Updated: May 29 2025, 12:51 PM IST

ಈ ಬಾರಿ ವಾಡಿಕೆಗಿಂತ ಹೆಚ್ಚು 24 ರಷ್ಟು ಹೆಚ್ಚು ಮಳೆ : ರೈತರ ಮೊಗದಲ್ಲಿ ಸಂತಸ ಇಮ್ಮಡಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಪ್ರಮುಖ ರಾಗಿ ಬೆಳೆಯನ್ನು 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಿರುವ ಹಿನ್ನೆಲೆಯಲ್ಲಿ 1125 ಕ್ವಿಂಟಾಲ್ ರಾಗಿ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

 ನಾಗಮಂಗಲ : ಕಳೆದ ಮೂರು ತಿಂಗಳಿನಿಂದ ತಾಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ರೈತರ ಮೊಗದಲ್ಲಿ ಸಂತಸ ಇಮ್ಮಡಿಯಾಗಿದೆ. ನಿರೀಕ್ಷೆಗೂ ಮೀರಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆ ಕಾಯಕದಲ್ಲಿ ತೊಡಗಿದ್ದಾರೆ.

ಪ್ರಸಕ್ತ ಸಾಲಿನ ವಾರ್ಷಿಕ ವಾಡಿಕೆ ಮಳೆ 765.10 ಮಿ.ಮೀ. ಇರುತ್ತದೆ. ಮೇ 28 ರವರೆಗಿನ ಸಂಚಿತ ವಾಡಿಕೆ ಮಳೆ 181.70 ಮಿ.ಮೀ. ಇದ್ದು 225.90 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ತಾಲೂಕಿನಲ್ಲಿ ವಾಡಿಕೆಗಿಂತ ಶೇ.24 ರಷ್ಟು ಹೆಚ್ಚು ಮಳೆಯಾಗಿದೆ.

ಕಳೆದ 2024ರ ಮಾರ್ಚ್ ತಿಂಗಳಲ್ಲಿ ಮಳೆಯಾಗಿರಲಿಲ್ಲ. ಏಪ್ರಿಲ್‌ನಲ್ಲಿ 8.90 ಮಿ.ಮೀ. ಮಳೆಯಾಗಿದ್ದರೆ, ಮೇ ತಿಂಗಳಲ್ಲಿ 86 ಮಿ.ಮೀ. ಮಳೆಯಾಗಿತ್ತು. ಆದರೆ 2025ರ ಮಾರ್ಚ್ ತಿಂಗಳಲ್ಲಿ ವಾಡಿಕೆ ಮಳೆ 18.10 ಮಿ.ಮೀ. ಇದ್ದು,20.4 ಮಿ.ಮೀ. ಮಳೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ವಾಡಿಕೆ ಮಳೆ 46.90 ಮಿ.ಮೀ. ಇದ್ದು 74 .೫೦ಮಿ.ಮೀ. ಮಳೆಯಾಗಿದೆ. ಈ ತಿಂಗಳಲ್ಲಿ ವಾಡಿಕೆ ಮಳೆ 65.40 ಮಿ.ಮೀ. ಇದ್ದು ಮೇ 28ಕ್ಕೆ 97.10 ಮಿ.ಮೀ. ಮಳೆಯಾಗಿದೆ.

ಬಿತ್ತನೆಯ ಗುರಿ:

ಕೃಷಿ ಇಲಾಖೆಯ ಮಾಹಿತಿಯಂತೆ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಒಟ್ಟು 38,793 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ. ಈವರೆಗೆ 7070 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಮಳೆ ಆಶ್ರಯದಲ್ಲಿ 37,213 ಹೆಕ್ಟೇರ್ ಪ್ರದೇಶ ಗುರಿಯಿದೆ. ಈ ಪ್ರದೇಶದಲ್ಲಿ ತಾಲೂಕಿನ ರೈತರು ಈಗಾಗಲೇ 4740 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ, 2175 ಹೆಕ್ಟೇರ್‌ನಲ್ಲಿ ಎಳ್ಳು, 90 ಹೆಕ್ಟೇರ್‌ನಲ್ಲಿ ಉದ್ದು ಮತ್ತು 65 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಕಾಳು ಬಿತ್ತನೆ ಮಾಡಿದ್ದಾರೆ. ಪೂರ್ವ ಮುಂಗಾರು ಹಂಗಾಮಿನಲ್ಲಿ ಅಲಸಂದೆ, ಎಳ್ಳು, ಹೆಸರು ಮತ್ತು ಉದ್ದು ಬೆಳೆಗಳು ಬೆಳವಣಿಗೆ ಹಂತದಲ್ಲಿವೆ.

‘ಈ ವರ್ಷದ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ರಿಯಾಯ್ತಿ ದರದಲ್ಲಿ ವಿತರಣೆ ಮಾಡಲಾಗಿದೆ. 19.45 ಕ್ವಿಂಟಾಲ್‌ನಷ್ಟು ಅಲಸಂದೆ ಬಿತ್ತನೆ ಬೀಜ ವಿತರಿಸಲಾಗಿದೆ. ತೊಗರಿ, ಹೆಸರುಕಾಳು, ಹಸಿರೆಲೆ ಗೊಬ್ಬರದ ಅಪಸೆಣಬು, ಟಾರ್ಪಲ್, ಲಘು ಪೋಷಕಾಂಶಗಳು ಮತ್ತು ಪಿವಿಸಿ ಪೈಪ್‌ಗಳು ಇಲಾಖೆಯಲ್ಲಿ ಲಭ್ಯವಿದ್ದು, ರೈತರು ರಿಯಾಯ್ತಿ ದರದಲ್ಲಿ ಪಡೆದುಕೊಳ್ಳಬಹುದು. ತಾಲೂಕಿನ ಪ್ರಮುಖ ರಾಗಿ ಬೆಳೆಯನ್ನು 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಿರುವ ಹಿನ್ನೆಲೆಯಲ್ಲಿ 1125 ಕ್ವಿಂಟಾಲ್ ರಾಗಿ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ’

ಆರ್. ಹರೀಶ್, ಸಹಾಯಕ ಕೃಷಿ ನಿರ್ದೇಶಕ, ನಾಗಮಂಗಲ.

Read more Articles on