ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಈ ಬಾರಿ ಅ.24ರಿಂದ ಆರಂಭವಾದ ಹಾಸನಾಂಬ ಜಾತ್ರೋತ್ಸವ ಹನ್ನೊಂದನೇ ದಿನವಾದ ಭಾನುವಾರ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮಧ್ಯಾಹ್ನ 12.34ಕ್ಕೆ ಬಾಗಿಲು ಮುಚ್ಚುವ ಮೂಲಕ ೨೦೨೪ರ ದರ್ಶನೋತ್ಸವಕ್ಕೆ ತೆರೆ ಎಳೆಯಲಾಯಿತು. ಹಾಸನಾಂಬೆ ದೇವಾಲಯದ ಬಾಗಿಲು ಹಾಕುವ ವೇಳೆ ಕೆಲ ಸಮಯದಲ್ಲಿ ನೆರೆದಿರುವ ಭಕ್ತರಿಗೆ ದೇವಿ ದರ್ಶನವನ್ನು ಕಲ್ಪಿಸಿದರು. ಬೆಳಗ್ಗೆ ಪೂಜೆ, ನೈವೇದ್ಯಕ್ಕಾಗಿ ಸಾರ್ವಜನಿಕ ದರ್ಶನ ಬಂದ್ ಆಗಿದ್ದರಿಂದ ಸಾವಿರಾರು ಭಕ್ತರು ದರ್ಶನ ಸಾಧ್ಯವಾಗದೇ ನಿರಾಸೆಗೊಂಡರಾದರೂ ಭಕ್ತರು ದರ್ಶನಕ್ಕಾಗಿ ಕಾದು ಕುಳಿತು ಅವಕಾಶ ಕೇಳಿದ ಭಕ್ತರ ಕೋರಿಕೆಗೆ ಸ್ಪಂದಿಸಿದ ಜಿಲ್ಲಾಡಳಿತ ಸಾಲಿನಲ್ಲಿ ನಿಂತವರಿಗೆ ದೇವಿ ವಿಶ್ವರೂಪ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು. ಸಂಪ್ರದಾಯದಂತೆ ಪೂಜೆ, ನೈವೇದ್ಯ ನೆರವೇರಿಸಿ ನಂದಾದೀಪ ಹಚ್ಚಿಟ್ಟ ಅರ್ಚಕರು, ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿಂಗೇ ಗೌಡ, ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್ , ಮಂಜುನಾಥ್ (ಸಿಮೆಂಟ್ ಮಂಜು), ದಕ್ಷಿಣ ವಲಯದ ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ, ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ ಮತ್ತಿತರರ ಸಮ್ಮುಖದಲ್ಲಿ ದೇವಾಲಯದ ಬಾಗಿಲು ಮುಚ್ಚಿ ಮುದ್ರೆ ಹಾಕಿದರು. ಕೀಲಿ ಕೈ ಅನ್ನು ದೇವಾಲಯದ ಆಡಳಿತಾಧಿಕಾರಿಗೆ ಹಸ್ತಾಂತರಿಸಿದರು. ಕಳೆದ ವರ್ಷ ೧೪ ಲಕ್ಷ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಈ ವರ್ಷ ೨೦ಲಕ್ಷಕ್ಕೂ ಹೆಚ್ಚು ಜನ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುವ ಮೂಲಕ ದಾಖಲೆ ಬರೆದಂತಾಗಿದೆ.ಮಾಧ್ಯಮದೊಂದಿಗೆ ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಅನಾರೋಗ್ಯದ ಕಾರಣ ಉಸ್ತುವಾರಿ ಸಚಿವರು ಬಂದಿರುವುದಿಲ್ಲ. ಸಚಿವರು ಸಂದೇಶ ಕಳಿಸಿದ್ದಾರೆ. ಉಸ್ತುವಾರಿ ಸಚಿವರು ಕೂಡ ಉತ್ಸವ ಯಶಸ್ವಿ ಗೊಳಿಸಿದ್ದು, ಎಲ್ಲರಿಗು ಕೂಡ ಶುಭಾಶಯ ತಿಳಿಸುತ್ತೇನೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ದಿನಗಳಲ್ಲಿ ಬಂದು ಸಣ್ಣಪುಟ್ಟ ತಪ್ಪು ಆಗಿದೆ ಈ ಬಗ್ಗೆ ಮಾಹಿತಿ ಪಡೆದು ಸಭೆ ನಡೆಸುತ್ತಾರೆ. ಮುಂದಿನ ಬಾರಿ ಇನ್ನಷ್ಟು ಸೂಕ್ತ ಸೌಲಭ್ಯ ಒದಗಿಸಿ ದರ್ಶನಾವಕಾಶ ಮಾಡಲಾಗುವುದು. ಸ್ವಲ್ಪ ಅಡಚಣೆಗಳನ್ನು ಮುಂದಿನ ವರ್ಷ ಸರಿಪಡಿಸಿಕೊಂಡು ಅನುಕೂಲ ಮಾಡುತ್ತೇವೆ ಎಂದು ಹೇಳಿದರು.
ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಇಷ್ಟೊಂದು ಜನರು ಬರುತ್ತಾರೆ ಎಂದರೇ ಸಾಮಾನ್ಯವಾದುದಲ್ಲ. ದೇವರ ಮೇಲೆ ಇರುವ ಪೂಜ್ಯ ಭಾವನೆ ಹೇಳಿ ಕೇಳಿ ಬರುವುದಲ್ಲ. ಇದು ಮನುಕುಲದ ಸನಾತನ ಧರ್ಮದ ಇತಿಹಾಸದ ಪರಂಪರೆ ಹೊಂದಿರುವುದು. ಹಾಸನಾಂಬೆ ದರ್ಶನದ ವೇಳೆ ಸಲ್ಪ ಅಡಚಣೆಯಾಗಿದೆ. ನಾವು ಜಿಲ್ಲಾಡಳಿತ ಹಗಲು ಇರುಳು ಕೆಲಸ ಮಾಡಲಾಗಿದ್ದು, ಕೆಲ ಭಿನ್ನಾಭಿಪ್ರಾಯಗಳಿಂದ ಆಗಿದೆ. ಭೇದಭಾವ ಮಾಡಿದವರಿಗೆ ತಾಯಿ ಹಾಸನಾಂಬೆ ನೋಡಿಕೊಳ್ಳುತ್ತಾಳೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಉಪವಿಭಾಗಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ನಡೆದಿರುವ ಘಟನೆ ಕ್ಷುಲಕ ಎಂದು ಭಾವಿಸಿ. ಅತಿರಥ ಮಹ ರಾಜಕಾರಣಿಗಳು ಬಂದು ದೇವಿ ದರ್ಶನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಣ್ಣಪುಟ್ಟ ತಪ್ಪು ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಈ ತಪ್ಪುಗಳನ್ನು ಇನ್ನಷ್ಟು ತಿದ್ದಿಕೊಂಡು ಮುಂದಿನ ವರ್ಷ ಉತ್ತಮಪಡಿಸಲಾಗುವುದು. ಭರತ ಖಂಡದಲ್ಲಿ ಹಾಸನಾಂಬೆ ಇತಿಹಾಸವನ್ನು ತಾಯಿ ಶಕ್ತಿಯನ್ನು ತೋರಿಸಲಾಗುವುದು ಎಂದು ಹೇಳಿದರು.ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಮಾತನಾಡಿ, ಹಾಸನಾಂಬೆ ಜಾತ್ರೆಯ ಯಶಸ್ವಿಗೆ ದುಡಿದ ಎಲ್ಲಾರಿಗೂ ಅಭಿನಂದನೆ ತಿಳಿಸುತ್ತೇನೆ. ಈ ಬಾರಿಯಲ್ಲಿ ಹೆಚ್ಚು ಭಕ್ತರು ಆಗಮಿಸಿದ್ದು, ಎಲ್ಲರ ಬದುಕನ್ನು ಸಂತೃಪ್ತಿ, ಕೀರ್ತಿ, ನೆಮ್ಮದಿಯನ್ನು ಕೊಡಲಿ ಎಂದು ತಾಯಿಯನ್ನು ಕೋರುತ್ತೇನೆ ಎಂದು ತಿಳಿಸಿದರು. ದಕ್ಷಿಣ ವಲಯದ ಐಜಿ ಬೋರಲಿಂಗಯ್ಯ ಅವರು ಮಾತನಾಡಿ, ಹಾಸನಾಂಬ ಜಾತ್ರಾ ಮಹೋತ್ಸವ ಹಾಸನದ ದಸರಾ ಇದ್ದಂತೆ, ೨೦೨೨ರವರಿಗೆ ಸ್ಥಳೀಯ ಅಧಿಕಾರಿಗಳು ಮಾತ್ರ ಬಂದೋಬಸ್ತ್ ನೋಡಿಕೊಳ್ಳುತ್ತಿದ್ದರು. ೨೦೨೩ರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಿ ದರ್ಶನಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿ ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮತ್ತಿತರ ಅಧಿಕಾರಿಗಳು ಸೇರಿದಂತೆ ಒಟ್ಟು ೨೦೦೦ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಮೂಲಕ ದೇವಿಯ ಸೇವೆ ಮಾಡುವ ಅವಕಾಶ ದೊರೆತಿದೆ ಎಂದು ತಿಳಿಸಿದರು. ಜನದಟ್ಟಣೆ ನಿಭಾಯಿಸುವ ಸಂದರ್ಭದಲ್ಲಿ ಸಹಜವಾಗಿ ಸಣ್ಣಪುಟ್ಟ ತಳ್ಳಾಟಗಳು ನಡೆಯುತ್ತಿವೆ. ಇದನ್ನು ಯಾರು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರಲ್ಲದೆ, ರಾಜ್ಯದ ಜನತೆಗೆ ಹಾಸನಾಂಬ ಒಳ್ಳೆಯದು ಮಾಡಲಿ ಎಂದರು. ಉಪವಿಭಾಗಾಧಿಕಾರಿ ಮಾರುತಿ ಮಾತನಾಡಿ, ೨೦೨೪ರ ಹಾಸನಾಂಬೆ ದೇವಿ ದರ್ಶನ ಭಾನುವಾರ ವಿದ್ಯುಕ್ತವಾಗಿ ತೆರೆ ಕಂಡಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ಜನಪ್ರತಿನಿಧಿಗಳು, ಎಲ್ಲಾ ಅಧಿಕಾರಿಗಳು, ಎಲ್ಲಾ ಮಾಧ್ಯಮದವರು ಹಾಗೂ ಸಂಘ ಸಂಸ್ಥೆಗಳಿಗೂ ಧನ್ಯವಾದ ತಿಳಿಸುತ್ತೇನೆ. ಹಾಸನಾಂಬೆ ದರ್ಶನದ ಎರಡು ವರ್ಷದ ಅನುಭವ ನನಗೆ ಆಗಿದೆ. ಯಾವುದು ಬೇಕು ಬೇಡ ಎನ್ನುವ ಅನುಭವ ಬಂದಿದೆ ಎಂದರು. ಹಿಂದಿಗಿಂದಲೂ ಹಾಸನಾಂಬೆ ದರ್ಶನ ಸುಧಾರಿಸಿದೆ. ಜವಾಬ್ದಾರಿಯಿಂದ ಇನ್ನಷ್ಟು ಮಾಡಲು ಮುಂದಾಗಲಾಗುವುದು. ಮುಂದಿನ ವರ್ಷ ಅಕ್ಟೋಬರ್ ೯ರಿಂದ ಅಕ್ಟೋಬರ್ ೨೩ರವರೆಗೂ ಇರುತ್ತದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ, ತಹಸೀಲ್ದಾರ್ಗಳಾದ ಶ್ವೇತಾ, ಮಮತ, ಮೇಘನಾ ಇತರರು ಉಪಸ್ಥಿತರಿದ್ದರು.* ಬಾಕ್ಸ್: ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಗೈರು: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಅನಾರೋಗ್ಯದ ಕಾರಣ ನೀಡಿ ಗರ್ಭಗುಡಿ ಬಾಗಿಲು ಮುಚ್ಚುವ ವೇಳೆ ಗೈರಾಗಿದ್ದರು. ಅವರು ನವೆಂಬರ್ ೧ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೂ ಬಂದಿರಲಿಲ್ಲ. ಇದಕ್ಕೂ ಮುನ್ನ ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ನಡುವೆ ನಡೆದ ಮಾರಾಮಾರಿ, ಕಂದಾಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ನಡುವೆ ನಡೆದ ಮಾರಾಮಾರಿಯಿಂದಾಗಿ ಇಡೀ ದರ್ಶನೋತ್ಸವದಲ್ಲಿ ಇರುಸುಮುರುಸು ಉಂಟಾಗಿತ್ತು. ಇದಕ್ಕೆಲ್ಲಾ ಮಿತಿ ಮೀರಿದ ಸಂಖ್ಯೆಯಲ್ಲಿ ವಿವಿಐಪಿ ಪಾಸುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಹಂಚಿದ್ದೇ ಕಾರಣ ಎಂದು ಸಾಮಾನ್ಯ ಜನರು ಕೂಡ ಆರೋಪ ಮಾಡಿದ್ದರು. ಹಾಗಾಗಿ ಈ ಮುಜುಗರದಿಂದ ತಪ್ಪಸಿಕೊಳ್ಳಲಿಕ್ಕಾಗಿ ರಾಜಣ್ಣ ಅವರು ಬರುತ್ತಿಲ್ಲ ಎನ್ನುವುದು ಜಿಲ್ಲೆಯ ಜನರ ಆರೋಪ. *ಬಾಕ್ಸ್: ಲಡ್ಡು, ಟಿಕೆಟ್ನಿಂದ 9.69 ಕೋಟಿ ರು. ಆದಾಯ ಗರ್ಭಗುಡಿ ಬಾಗಿಲು ಮುಚ್ಚಿದ ನಂತರ ಮಾಧ್ಯಮದೊಂದಿಗೆ ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ,ಎಲ್ಲಾ ಅಧಿಕಾರಿಗಳ ಪರಿಶ್ರಮದಿಂದ ಹಾಸನಾಂಬೆ ಉತ್ಸವ ಯಶಸ್ವಿ ಆಗಿದೆ. ೨೦ ಲಕ್ಷದ ೪೦ ಸಾವಿರ ಭಕ್ತರು ಈ ವರ್ಷ ದರ್ಶನ ಮಾಡಿದ್ದಾರೆ. ೯.೬೯ ಕೋಟಿ ಆದಾಯ ಈಗಾಗಲೇ ಬಂದಿದೆ. ಟಿಕೆಟ್ ಮಾರಾಟ ಹಾಗು ಲಡ್ಡು ಮಾರಾಟದಿಂದ ಸಾಕಷ್ಟು ಆದಾಯ ಹರಿದು ಬಂದಿದ್ದು, ಡಿಸಿ, ಎಸ್ಪಿ, ಎಸಿ ಹಾಗೂ ಅವರ ಅಧಿಕಾರಿ, ಸಿಬ್ಬಂದಿ ವರ್ಗ ಪರಿಶ್ರಮದಿಂದ ಈ ಉತ್ಸವ ಯಶಸ್ವಿ ಆಗಿದೆ ಎಂದರು.