ಸಾರಾಂಶ
ಬೆಂಗಳೂರು : ಕ್ಯಾಬ್ ಹೋಗುವಾಗ ಆಟೋ ಮೇಲೆ ನೀರು ಹಾರಿತು ಎಂಬ ಕಾರಣಕ್ಕೆ ಕಿಡಿಗೇಡಿಗಳು ಕ್ಯಾಬ್ ತಡೆದು ಕಲ್ಲು ಎತ್ತಿಹಾಕಿ ಪುಂಡಾಟ ಮೆರೆದಿರುವ ಘಟನೆ ಜಾಲಹಳ್ಳಿಯ ಶೆಟ್ಟಿಹಳ್ಳಿ ಸಮೀಪದ ಮಲ್ಲಸಂದ್ರ ಮುಖ್ಯರಸ್ತೆಯಲ್ಲಿ ಭಾನುವಾರ ಸಂಜೆ ನಡೆದಿದೆ.
ಯಾದಗಿರಿ ಮೂಲದ ಮಲ್ಲಿಕಾರ್ಜುನ್ ಎಂಬುವವರ ಕ್ಯಾಬ್ ಘಟನೆಯಲ್ಲಿ ಜಖಂಗೊಂಡಿದೆ. ಪೊಲೀಸರಿಗೆ ದೂರು ನೀಡಲು ಮಲ್ಲಿಕಾರ್ಜುನ್ ಹೆದರಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಿಡಿಗೇಡಿಗಳ ಪುಂಡಾಟದ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಏನಿದು ಘಟನೆ?
ಚಾಲಕ ಮಲ್ಲಿಕಾರ್ಜುನ್ ತಮ್ಮ ಕಾರನ್ನು ಓಲಾ-ಉಬರ್ಗೆ ಆಟ್ಯಾಚ್ ಮಾಡಿಕೊಂಡು ಕೆಲಸ ಮಾಡುತ್ತಿದ್ದರು. ಭಾನುವಾರ ಸಂಜೆ ಕೆಲಸ ಮುಗಿಸಿಕೊಂಡು ತಮ್ಮ ಕ್ಯಾಬ್ನಲ್ಲಿ ಮನೆ ಕಡೆಗೆ ಹೊರಟ್ಟಿದ್ದರು. ಜಾಲಹಳ್ಳಿಯ ಅಯ್ಯಪ್ಪ ದೇವಸ್ಥಾನದ ಬಳಿ ಹೋಗುವಾಗ ರಸ್ತೆಯಲ್ಲಿನ ನೀರು ಆಟೋ ಮೇಲೆ ಹಾರಿದೆ. ಅಷ್ಟಕ್ಕೆ ಆಟೋ ಚಾಲಕ ಹಾಗೂ ಆತನ ಸ್ನೇಹಿತ ಕ್ಯಾಬ್ ತಡೆದು ಜಗಳ ಮಾಡಿದ್ದಾರೆ. ಕ್ಯಾಬ್ ಚಾಲಕ ಮಲ್ಲಿಕಾರ್ಜುನ್ ಆಟೋ ತೊಳೆದುಕೊಡುವುದಾಗಿ ಹೇಳಿದರೂ ಕೇಳಿದೆ ದಪ್ಪ ಕಲ್ಲು ಎತ್ತಿ ಕಾರಿನ ಮೇಲೆ ಹಲವು ಬಾರಿ ಎತ್ತಿಹಾಕಿ ಪುಂಡಾಟ ಮೆರೆದಿದ್ದಾರೆ. ಇದರಿಂದ ಕಾರಿನ ಮುಂಭಾಗದ ಗಾಜು ಹಾಗೂ ಬಾನೆಟ್ ಹಾನಿಯಾಗಿದೆ. ಈ ಘಟನೆಯನ್ನು ಸಾರ್ವಜನಿಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.