ದೀಪಾವಳಿ ನಿಮಿತ್ತ ಸಂಭ್ರಮದ ಹುಲಿವಾಹನೋತ್ಸವ ಮೆರವಣಿಗೆ

| Published : Oct 24 2025, 01:00 AM IST

ದೀಪಾವಳಿ ನಿಮಿತ್ತ ಸಂಭ್ರಮದ ಹುಲಿವಾಹನೋತ್ಸವ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಲಿವಾಹನೋತ್ಸವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹುಲಿವಾಹನವನ್ನು ಹೊತ್ತ ಮೆರವಣಿಗೆ ನಡೆಸಿದ ಯುವಕರು ಉಘೇ..ಉಘೇ.. ಉಘೇ ಮಾದಪ್ಪ ಎಂಬುದಾಗಿ ಘೋಷಣೆಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ನಡೆದ ಶ್ರೀಮಹದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಲಕ್ಷ್ಮೀಸಾಗರ ಗ್ರಾಮಸ್ಥರು ಗುರುವಾರ ಅದ್ಧೂರಿಯಾಗಿ ಹುಲಿವಾಹನೋತ್ಸವ ಮೆರವಣಿಗೆ ನಡೆಸಿದರು.

ಗ್ರಾಮದ ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಲಕ್ಷ್ಮೀಸಾಗರ ಗ್ರಾಮದ ಯಜಮಾನರಾದ ಕೃಷ್ಣೇಗೌಡ(ಕಿಟ್ಟಪ್ಪ), ಎಲ್.ಡಿ.ಸಂಜಯ್, ಎಲ್.ಸಿ.ಶಶಿಕುಮಾರ್, ಎಲ್.ಕೆ.ರವಿ, ಎಲ್.ಸಿ.ಬೆಟ್ಟೇಗೌಡ, ಶಂಕರಯ್ಯ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹುಲಿವಾಹನವನ್ನು ಬಣ್ಣಬಣ್ಣದ ಹೂ, ಹಣ್ಣುಗಳಿಂದ ಅಲಂಕರಿಸಿದರು.

ಗ್ರಾಮದ ಯಜಮಾನವರು ಹುಲಿವಾಹನಕ್ಕೆ ಮೊದಲ ಪೂಜೆಸಲ್ಲಿಸಿದ ನಂತರ ಗ್ರಾಮಸ್ಥರು, ಹೆಣ್ಣುಮಕ್ಕಳು, ಮಹಿಳೆಯರು ಸರತಿ ಸಾಲಿನಲ್ಲಿ ಆಗಮಿಸಿ ಹುಲಿವಾಹನಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಮಧ್ಯಾಹ್ನ ಹುಲಿವಾಹನೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಹುಲಿವಾಹನೋತ್ಸವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹುಲಿವಾಹನವನ್ನು ಹೊತ್ತ ಮೆರವಣಿಗೆ ನಡೆಸಿದ ಯುವಕರು ಉಘೇ..ಉಘೇ.. ಉಘೇ ಮಾದಪ್ಪ ಎಂಬುದಾಗಿ ಘೋಷಣೆಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು. ಹುಲಿವಾಹನದ ಎದುರು ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಹರಕೆ ಹೊತ್ತ ಮಹಿಳೆಯರು ಬಾಯಿಬೀಗ ಹಾಕಿಕೊಂಡು ಹೂ -ಹಣ್ಣಿನ ಆರತಿಯೊಂದಿಗೆ ಸಾಗಿದರು.

ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಆಂಜನೇಯ ಹಾಗೂ ಗೋರಿಲ್ಲ ವೇಷಾಧಾರಿಗಳ ಕುಣಿತ ಹಾಗೂ ಹೆಣ್ಣುಮಕ್ಕಳು ಕುಣಿತ ವಿಶೇಷವಾಗಿತ್ತು. ಪೂಜಾಕುಣಿತ, ನಂದಿಕಂಬ, ಡೊಳ್ಳುಕುಣಿತ, ತಮಟೆ, ನಗಾರಿ, ವಾಧ್ಯ ಸೇರಿದಂತೆ ಹಲವು ಕಲಾತಂಡಗಳು ಗಮನ ಸೆಳೆದವು. ಈ ವೇಳೆ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ಯುವಕರು ಸಂಭ್ರಮಿಸಿದರು.

ಈ ವೇಳೆ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು. ಹುಲಿವಾಹನೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗ್ರಾಮದ ಮುಖಂಡರು, ಸಂಘ-ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು ಸಹಕಾರ ನೀಡಿದರು.

ನಂತರ ದೇಗುಲದ ಸುತ್ತಾ ಹುಲಿವಾಹನೋತ್ಸವದ ಮೆರವಣಿಗೆ ನಡೆಸಿದರು. ಮೇಲುಕೋಟೆ ಪೊಲೀಸರು ಸೂಕ್ತ ಬಂದೂಬಸ್ತ್ ವ್ಯವಸ್ಥೆ ಕಲ್ಪಿಸಿ ಮಾಡಿದ್ದರು.