ಸಾರಾಂಶ
ನೇತ್ರಾವತಿ ನದಿಯಲ್ಲಿ ಪಿಂಡ ಪ್ರದಾನಾದಿ ಕಾರ್ಯದಲ್ಲಿ ನಿರತರಾದ ಭಕ್ತರು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಆಷಾಢ ಅಮಾವಾಸ್ಯೆಯ ಭಾನುವಾರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಅಸಂಖ್ಯಾತ ಭಕ್ತಾದಿಗಳು ಗತಿಸಿದ ಹಿರಿಯರಿಗೆ ತಿಲ ಹೋಮಾದಿ ಪಿಂಡ ಪ್ರದಾನ ಮಾಡಿ ದೇವರಿಗೆ ಪೂಜೆ ನೆರವೇರಿಸಿದರು. ದಕ್ಷಿಣಕಾಶಿ ಎಂದೇ ಪ್ರಸಿದ್ಧ ವಾಗಿರುವ ನೇತ್ರಾವತಿ ಮತ್ತು ಕುಮಾರಧಾರಾ ನದಿ ಸಂಗಮ ಕ್ಷೇತ್ರವಾಗಿರುವ ಇಲ್ಲಿನ ದೇವಾಲಯಕ್ಕೆ ಭಾನುವಾರ ಮುಂಜಾನೆಯಿಂದಲೇ ರಾಜ್ಯ ಹೊರ ರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಭಕ್ತಾದಿಗಳು ಪುರೋಹಿತರ ಮುಖೇನ ಗತಿಸಿದ ಹಿರಿಯರಿಗೆ ತಿಲಹೋಮ ಪಿಂಡ ಪ್ರಧಾನ ನೆರೆವೇರಿಸಿದರೆ, ಇನ್ನು ಹಲವರು ನವ ಧಾನ್ಯಗಳನ್ನು ಸಂಗಮ ತಟದಲ್ಲಿ ಗಂಗಾ ಮಾತೆಗೆ ಸಮರ್ಪಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಮತ್ತವರ ತಂಡ ಸದಸ್ಯರು ಆಗಮಿಸಿದ ಭಕ್ತಾದಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದ್ದರು.