ಟಿಎಂಸಿ ಬ್ಯಾಂಕ್‌ ಡಿಜಿಟಲೀಕರಣಕ್ಕೆ ಒತ್ತು

| Published : Jul 25 2024, 01:22 AM IST / Updated: Jul 25 2024, 01:23 AM IST

ಸಾರಾಂಶ

ದೊಡ್ಡಬಳ್ಳಾಪುರ: ಟಿಎಂಸಿ ಬ್ಯಾಂಕ್ 60 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಬ್ಯಾಂಕಿನ ಡಿಜಿಟಲೀಕರಣ ಮಾಡಲು ಒತ್ತು ನೀಡಲಾಗುತ್ತಿದ್ದು, ನವೆಂಬರ್ ವೇಳೆಗೆ ಯುಪಿಐ ಪಾವತಿ, ಕೋರ್ ಬ್ಯಾಂಕಿಂಗ್ ಮೊದಲಾದ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಪಿ.ವಾಸುದೇವ್ ಹೇಳಿದರು.

ದೊಡ್ಡಬಳ್ಳಾಪುರ: ಟಿಎಂಸಿ ಬ್ಯಾಂಕ್ 60 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಬ್ಯಾಂಕಿನ ಡಿಜಿಟಲೀಕರಣ ಮಾಡಲು ಒತ್ತು ನೀಡಲಾಗುತ್ತಿದ್ದು, ನವೆಂಬರ್ ವೇಳೆಗೆ ಯುಪಿಐ ಪಾವತಿ, ಕೋರ್ ಬ್ಯಾಂಕಿಂಗ್ ಮೊದಲಾದ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಪಿ.ವಾಸುದೇವ್ ಹೇಳಿದರು.

ನಗರದ ಗಾಂಧಿನಗರದಲ್ಲಿರುವ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ನಡೆದ ದಿ ಟೆಕ್ಸ್‌ಟೈಲ್‌ ಮ್ಯಾನುಫ್ಯಾಕ್ಚರರ್ಸ್‌ ಕೋ ಆಪರೇಟಿವ್ ಬ್ಯಾಂಕ್‌, ಟಿಎಂಸಿ ಬ್ಯಾಂಕ್‌ನ 60ನೇ ವಾರ್ಷಿಕ ಹಾಗೂ 2023-24 ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು.

ಟಿಎಂಸಿ ಬ್ಯಾಂಕ್ ಮಾರ್ಚ್ 2024ರ ಅಂತ್ಯಕ್ಕೆ 40.66 ಲಕ್ಷ ರುಪಾಯಿಗಳ ನಿವ್ಹಳ ಲಾಭ ಗಳಿಸಿದ್ದು, ಬ್ಯಾಂಕ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ಮಗ್ಗಗಳ ಮೇಲೆ ಸಾಲ ನೀಡುವ ಏಕೈಕ ಬ್ಯಾಂಕ್ ನಮ್ಮದಾಗಿದ್ದು, ನೇಕಾರರಿಗೆ ಈಗ ಕಂಪ್ಯೂಟರ್ ಜಾಕಾರ್ಡ್ ಹಾಕಿಕೊಳ್ಳಲು ಸಾಲ ನೀಡಲಾಗುತ್ತಿದೆ. ಮಗ್ಗಗಳ 3 ಲಕ್ಷ ರು.ನಿಂದ 5 ಲಕ್ಷ ರುಪಾಯಿವರೆಗೆ ಸಾಲ ನೀಡಲಾಗುತ್ತಿದೆ. ಇದರೊಂದಿಗೆ ಶೈಕ್ಷಣಿಕ ಸಾಲ ಹೊರತುಪಡಿಸಿ ಉದ್ಯೋಗಸ್ಥ ಮಹಿಳೆಯರಿಗೆ ಸಾಲ, ಬೆಳ್ಳಿ, ಚಿನ್ನದ ಸಾಲ, ವಾಹನಗಳ ಮೇಲಿನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಶೇ.10ರಷ್ಟು ಡಿವಿಡೆಂಡ್ :

2024ರ ಮಾರ್ಚ್‌ ಪ್ರಗತಿಯಂತೆ ಶೇರು ಮೊತ್ತ 55.83ಲಕ್ಷ ರು. ಠೇವಣಿ ಮೊತ್ತ 13.84 ಕೋಟಿ ರು ದಾಟಿದ್ದು, 4.64 ಕೋಟಿ ರು. ಸಾಲ ವಸೂಲಾತಿಯಾಗಿದೆ. ಅನುತ್ಪಾದಕ ಆಸ್ತಿಗಳು ಈಗ ಶೇ.0.41ಕ್ಕೆ ಇಳಿಕೆಯಾಗಿದ್ದು, ಆಡಿಟ್‌ ವರದಿಯಲ್ಲಿ ಎ ಶ್ರೇಣಿ ಪಡೆದಿದೆ. ಶೇ.99.9ರಷ್ಟು ಸಾಲ ವಸೂಲಾಗುತ್ತಿದೆ. ಸದಸ್ಯರಿಗೆ ಈ ಬಾರಿಯೂ ಶೇ.10ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಹಕಾರ ಸಂಘಗಳ ನಿಯಮದಂತೆ ಸದಸ್ಯರು ಮತದಾನದ ಹಕ್ಕು ಪಡೆಬೇಕಾದರೆ, ಬ್ಯಾಂಕಿನಲ್ಲಿ ಕನಿಷ್ಟ 2500 ಠೇವಣಿ ಅಥವಾ 500 ರೂಗಳ ಆರ್.ಡಿ ಖಾತೆ ಅಥವಾ ಉಳಿತಾಯ ಖಾತೆಯಲ್ಲಿ 12 ವ್ಯವಹಾರಗಳು ಮತ್ತು ಸರ್ವ ಸದಸ್ಯರ 5 ಸಭೆಗಳಲ್ಲಿ 2ಕ್ಕೆ ಕಡ್ಡಾಯ ಸದಸ್ಯರು ಭಾಗವಹಿಸಬೇಕು. ಸದಸ್ಯರು ಹೆಚ್ಚಿನ ಹಣವನ್ನು ಬ್ಯಾಂಕಿನ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬ್ಯಾಂಕ್ ಮತ್ತಷ್ಟು ಏಳಿಗೆಯಾಗಲು ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ 60ನೇ ವಾರ್ಷಿಕೋತ್ಸವದ ಅಂಗವಾಗಿ 50 ವರ್ಷ ವೈವಾಹಿಕ ಜೀವನ ಪೂರೈಸಿರುವ ಬ್ಯಾಂಕಿನ ಸದಸ್ಯ ದಂಪತಿಗಳನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ಜಿ.ಮಂಜುನಾಥ್, ನಿರ್ದೇಶಕರಾದ ಪಿ.ಸಿ.ವೆಂಕಟೇಶ್, ಎ.ಆರ್.ಶಿವಕುಮಾರ್, ಎ.ಎಸ್.ಕೇಶವ, ಕೆ.ಜಿ.ಗೋಪಾಲ್, ಡಿ.ಪ್ರಶಾಂತ್ ಕುಮಾರ್, ಬಿ.ಆರ್.ಉಮಾಕಾಂತ್, ನಾರಾಯಣ್ ಎನ್.ನಾಯ್ಡು, ಎ.ಗಿರಿಜಾ, ಡಾ.ಆರ್.ಇಂದಿರಾ, ವೃತ್ತಿಪರ ನಿರ್ದೇಶಕರಾದ ಎ.ಆರ್.ನಾಗರಾಜನ್, ಕೆ.ಎಂ.ಕೃಷ್ಣಮೂರ್ತಿ, ಪ್ರಭಾರಿ ವ್ಯವಸ್ಥಾಪಕರಾದ ಎ.ಎಸ್.ಪುಷ್ಪಲತಾ ಹಾಜರಿದ್ದರು.

ಫೋಟೋ-

24ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಟಿಎಂಸಿ ಬ್ಯಾಂಕಿನ 60ನೇ ವಾರ್ಷಿಕೋತ್ಸವ ಹಾಗೂ ಸರ್ವಸದಸ್ಯರ ಸಭೆ ಆಯೋಜಿಸಲಾಗಿತ್ತು.