ಸಾರಾಂಶ
ಕನಕಪುರ: ಕೆಂಪೇಗೌಡರ ದೂರದೃಷ್ಟಿ ಚಿಂತನೆ ಮತ್ತು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ನಿರ್ಮಿಸಿದ ಬೆಂಗಳೂರು ಇಂದು ವಿಶ್ವ ಮಾನ್ಯತೆ ಪಡೆದಿದೆ ಎಂದು ಸಮುದಾಯದ ಮುಖಂಡ ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ತುಂಗಣಿ ಗ್ರಾಮದ ಕೆಂಪೇಗೌಡರ ಅಭಿಮಾನಿ ಬಳಗದಿಂದ ನಿರ್ಮಾಣ ಮಾಡಿರುವ ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮಾಗಡಿ ಕೆಂಪೇಗೌಡರು ವಿಜಯನಗರದ ಅರಸರಂತೆ ನಾಡನ್ನು ಕಟ್ಟುವ ಸಂಕಲ್ಪ ಮಾಡಿ ದೂರದೃಷ್ಟಿ ಚಿಂತನೆ ಇಟ್ಟುಕೊಂಡು ಬೆಂಗಳೂರು ನಗರ ನಿರ್ಮಿಸಿದರು. ಬೆಂಗಳೂರು ವಿಸ್ತಾರವಾಗುತ್ತಿದ್ದಂತೆ ಕೆಂಪೇಗೌಡರ ಬೆಳವಣಿಗೆಯನ್ನು ಸಹಿಸದೆ ಚನ್ನಪಟ್ಟಣದ ಪಾಳೇಗಾರ ಜಗದೇಕರಾಯ ಮತ್ತು ಟಿಪ್ಪು ಸುಲ್ತಾನ್ ಇಬ್ಬರು ಸಂಚು ಮಾಡಿ ಕೆಂಪೇಗೌಡರು ನಿಮ್ಮ ವಿರುದ್ಧ ರಾಜ್ಯಭಾರ ಮಾಡುತ್ತಿದ್ದಾರೆ ಎಂದು ಶ್ರೀ ಕೃಷ್ಣದೇವರಾಯರಿಗೆ ದೂರು ಕೊಟ್ಟಿದ್ದರು. ಅದರ ಪರಿಣಾಮ ಶ್ರೀ ಕೃಷ್ಣದೇವರಾಯರು ಕೆಂಪೇಗೌಡರಿಗೆ 6 ವರ್ಷಗಳ ಸೆರೆವಾಸ ವಿಧಿಸಿದರು.ಸೆರೆವಾಸದ ಬಳಿಕ ಕೆಂಪೇಗೌಡರು ಯಾವುದೇ ತಪ್ಪನ್ನು ಮಾಡಿಲ್ಲ ಎಂಬ ಸತ್ಯ ಮನಗಂಡ ಶ್ರೀ ಕೃಷ್ಣದೇವರಾಯರು ಕೆಂಪೇಗೌಡರನ್ನ ಬಿಡುಗಡೆ ಮಾಡಿ ನಾಡನ್ನು ಕಟ್ಟಲು ಕೆಂಪೇಗೌಡರಿಗೆ ಹಣ ವಜ್ರ ವೈಡೂರ್ಯಗಳನ್ನು ಕೊಡುಗೆಯಾಗಿ ನೀಡಿದರು. ಕೆಂಪೇಗೌಡರು ಬೆಂಗಳೂರು ಸುತ್ತಮುತ್ತ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ ಬೆಂಗಳೂರು ನಗರದಲ್ಲಿ ಎಲ್ಲಾ ಜಾತಿ ಧರ್ಮದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 60ಕ್ಕೂ ಹೆಚ್ಚು ಪೇಟೆಗಳನ್ನು ನಿರ್ಮಿಸಿದರು. ಬೆಂಗಳೂರು ಸುತ್ತಮುತ್ತ ಏಳು ಕೋಟೆಗಳನ್ನು ನಿರ್ಮಿಸಿದರು ಎಂದರು.
ಮುಖಂಡ ವಿಶ್ವನಾಥ್ ಮಾತನಾಡಿ, ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ಜಗತ್ಪ್ರಸಿದ್ಧಿಯಾಗಿ ಪ್ರಖ್ಯಾತಿ ಪಡೆದುಕೊಂಡಿದೆ. ದೂರದೃಷ್ಟಿ ಚಿಂತನೆ ಇಟ್ಟುಕೊಂಡು ಕೆಂಪೇಗೌಡರು ಅಂದು ನಿರ್ಮಾಣ ಮಾಡಿದ ಬೆಂಗಳೂರು ಕರ್ನಾಟಕ ರಾಜ್ಯಕ್ಕೆ ಕಿರೀಟ ಪ್ರಾಯವಾಗಿದೆ. ಎಲ್ಲ ಜಾತಿ ಧರ್ಮದ ಜನರ ಜೀವನೋಪಾಯಕ್ಕೆ ವ್ಯಾಪಾರ ಕೇಂದ್ರಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಕೆಂಪೇಗೌಡರ ನಿಸ್ವಾರ್ಥ ಸೇವಾ ಮನೋಭಾವ ಪ್ರತಿಯೊಬ್ಬರಿಗೂ ಮಾದರಿ ಎಂದರು.ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಕೆಂಪೇಗೌಡ ಸೇನೆ ರಾಜ್ಯಾಧ್ಯಕ್ಷ ರವಿ, ಮುಖಂಡರಾದ
ಸಿದ್ದಮರಿಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟೇಗೌಡ, ರಾಮೇಗೌಡ, ರವಿ, ಪ್ರಕಾಶ್, ಶಿವನಂಜೇಗೌಡ, ಕೆಂಪೇಗೌಡ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 03:ತುಂಗಣಿ ಗ್ರಾಮದಲ್ಲಿ ಕೆಂಪೇಗೌಡ ಅಭಿಮಾನಿ ಬಳಗ ನಿರ್ಮಿಸಿರುವ ಕೆಂಪೇಗೌಡರ ಪುತ್ಥಳಿಯನ್ನು ಮುಖಂಡ ಕೃಷ್ಣಮೂರ್ತಿ ಲೋಕಾರ್ಪಣೆ ಮಾಡಿದರು.