ಸಾರಾಂಶ
ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮೂರು ಬಾರಿ ಚುನಾವಣಾ ವೆಚ್ಚವನ್ನು ತಪಾಸಣೆಗೊಳಪಡಿಸಲು ದಿನಾಂಕ ನಿಗದಿ ಮಾಡಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಆದೇಶಿಸಿದ್ದಾರೆ.
ಪ್ರಜಾಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚವನ್ನು ಚುನಾವಣಾ ವೆಚ್ಚ ವೀಕ್ಷಕರ ಮೂಲಕ ಕನಿಷ್ಠ ಮೂರು ಬಾರಿ ತಪಾಸಣೆಗೆ ಒಳಪಡಿಸಿಕೊಳ್ಳಬೇಕಿದೆ. ಅಭ್ಯರ್ಥಿಗಳು ಚುನಾವಣಾ ವೆಚ್ಚವನ್ನು ಮೂರು ರಿಜಿಸ್ಟರ್ನಲ್ಲಿ ನಿರ್ವಹಿಸಿ ಅದನ್ನು ಚುನಾವಣಾ ವೆಚ್ಚ ವೀಕ್ಷಕರಿಗೆ ಸಲ್ಲಿಸಿ ಪರಿಶೀಲನೆಗೊಳಪಡಿಸಿ ಸಹಿ ಪಡೆಯಬೇಕಿದೆ.
ಅದರಂತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಗಳು ಕೆಜಿ ರಸ್ತೆಯಲ್ಲಿನ ಕಂದಾಯ ಭವನ ಹಿಂಭಾಗದ ಕಂದಾಯ ಇಲಾಖೆ ನೌಕರರ ಸಂಘದ ಕಟ್ಟಡದ 2ನೇ ಮಹಡಿಯಲ್ಲಿನ ಕಚೇರಿಗೆ ಚುನಾವಣಾ ವೆಚ್ಚದ ರಿಜಿಸ್ಟರ್ನ್ನು ಸಲ್ಲಿಸಬೇಕಿದೆ. ಏ. 12, 18 ಮತ್ತು 24ರಂದು ಬೆಳಗ್ಗೆ 10ರಿಂದ 5ರವರೆಗೆ ಅಭ್ಯರ್ಥಿಗಳು ಸಲ್ಲಿಸುವ ರಿಜಿಸ್ಟರ್ ಅನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಕೆ.ಎ.ದಯಾನಂದ ತಿಳಿಸಿದ್ದಾರೆ.