ಸಾರಾಂಶ
ಹುಣಸಘಟ್ಟದ ಎಚ್.ಎಂ. ಮಲ್ಲಿಕಾರ್ಜುನಪ್ಪ, ಶರಣೇ ಲಿಂಗಮ್ಮ ಮಲ್ಲಿಕಾರ್ಜುನಪ್ಪ, ಶಾರದ ಎಚ್.ಎಂ. ಚಂದ್ರಶೇಖರಪ್ಪ ದತ್ತಿ ವತಿಯಿಂದ ಡಿ.20ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಶರಣ ಸಂಗಮ-298 ಕಾರ್ಯಕ್ರಮದಲ್ಲಿ ಪ್ರಸಿದ್ಧ ವೈದ್ಯೆ ಡಾ. ಶಾಲಿನಿ ನಲ್ವಾಡ್ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಹೇಳಿದರು.
ವೈದ್ಯೆ ಡಾ. ಶಾಲಿನಿ ನಲ್ವಾಡ್ಗೆ ಸನ್ಮಾನ । ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಮಾಹಿತಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಹುಣಸಘಟ್ಟದ ಎಚ್.ಎಂ. ಮಲ್ಲಿಕಾರ್ಜುನಪ್ಪ, ಶರಣೇ ಲಿಂಗಮ್ಮ ಮಲ್ಲಿಕಾರ್ಜುನಪ್ಪ, ಶಾರದ ಎಚ್.ಎಂ. ಚಂದ್ರಶೇಖರಪ್ಪ ದತ್ತಿ ವತಿಯಿಂದ ಡಿ.20ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಶರಣ ಸಂಗಮ-298 ಕಾರ್ಯಕ್ರಮದಲ್ಲಿ ಪ್ರಸಿದ್ಧ ವೈದ್ಯೆ ಡಾ. ಶಾಲಿನಿ ನಲ್ವಾಡ್ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಸವಕೇಂದ್ರದ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಕ್ಕಿನ ಕಲ್ಮಠ ಶ್ರೀಗಳಾದ ಡಾ. ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾಮಠದ ಶ್ರೀಸಿದ್ದಲಿಂಗ ಶ್ರೀ ವಹಿಸಲಿದ್ದಾರೆ. ನೇತೃತ್ವವನ್ನು ಬಸವಕೇಂದ್ರದ ಡಾ. ಬಸವಮರುಳಸಿದ್ದ ಸ್ವಾಮೀಜಿ ವಹಿಸಲಿದ್ದಾರೆ ಎಂದರು.ಶಾರದ ಎಚ್.ಎಂ. ಚಂದ್ರಶೇಖರಪ್ಪ ದತ್ತಿ ವತಿಯಿಂದ 2019ರಿಂದ ಪ್ರತಿವರ್ಷವು ಸಾಧನೆ ಮಾಡಿದವರಿಗೆ ಸನ್ಮಾನ ಮಾಡುತ್ತಾ ಬಂದಿದ್ದೇವೆ. ಈ ಬಾರಿಯೂ ಕೂಡ ಪ್ರಸಿದ್ಧ ವೈದ್ಯೆ ಮತ್ತು ಐಕ್ಯಾಟ್ ಅಧ್ಯಕ್ಷೆ, ಏರ್ ಅಂಬ್ಯುಲೆನ್ಸ್ ಸೇವೆ ಮಾಡುತ್ತಿರುವ ಡಾ. ಶಾಲಿನಿ ನಾಲ್ವಾಡ್ ಅವರನ್ನು ಸನ್ಮಾನಿಸಲಾಗುತ್ತದೆ. ಇವರ ಜೊತೆಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಿ.ಎಚ್. ವೆಂಕಟೇಶ್ ಅವರನ್ನು ಅಭಿನಂದಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ. ಬೆನಕಪ್ಪ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಎಂ.ಜೆ. ಮಲ್ಲಿಕಾರ್ಜುನ ಅವರು ವಚನಗಾಯನ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ. ಯೋಗೀಶ್ ಮಾತನಾಡಿ, ಇದೊಂದು ಅಪೂರ್ವ ಕಾರ್ಯಕ್ರಮವಾಗಿದ್ದು, ಡಾ. ಶಾಲಿನಿ ನಲ್ವಾಡ್ ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ. ಇವರು ಐರ್ಲೆಂಡ್ನ ಅನಸ್ತೇಶಿಯಾ ಕಾಲೇಜಿನಿಂದ ಫೆಲೋಶಿಪ್ ಪಡೆದಿದ್ದಾರೆ. ಅಲ್ಲದೆ ಯು.ಕೆ. ರಾಯಲ್ ಕಾಲೇಜಿನಿಂದ ಸದಸ್ಯತ್ವ ಕೂಡ ಪಡೆದಿದ್ದಾರೆ ಎಂದು ಶ್ಲಾಘಿಸಿದರು.ಡಾ. ಶಾಲಿನಿಯವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಏರ್ ಅಂಬ್ಯುಲೆನ್ಸ್ ಸೇವೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ವಿಶ್ವದಾದ್ಯಂತ ಲೆವೆಲ್ 2, ಲೆವೆಲ್ 3 ರೋಗಿಗಳ ವರ್ಗಾವಣೆಯನ್ನು ಸುಗಮಗೊಳಿಸಿದ್ದಾರೆ. ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತತೆಯ ಮಧ್ಯೆಯೂ 72 ಗಂಟೆಗಳ ಕಾಲಮಿತಿಯೊಳಗೆ ಐದು ದೇಶಗಳು ಹಾಗೂ ಎರಡು ಖಂಡಗಳ ರೋಗಿಗಳನ್ನು ವಿಮಾನದಲ್ಲಿ ಸಾಗಿಸುವಲ್ಲಿ ಅವರ ಪಾತ್ರ ಗಣನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಸ್ತುತ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಾಗರಿಕ ವಿಮಾನಯಾನ ಸಚಿವಾಲಯ, ರಸ್ತೆ ಮತ್ತು ಸಾರಿಗೆ ಸಚಿವಾಲಯ ಮತ್ತು ಆರೋಗ್ಯ ಹಾಗೂ ಸುರಕ್ಷೆಯ ಸಚಿವಾಲಯದೊಂದಿಗೆ ವಿವಿಧ ಸಾಮರ್ಥ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶ್ರೀ ಸಿದ್ಧಗಂಗಾ ಸ್ವಾಮೀಜಿಯವರನ್ನು ತುಮಕೂರು ಮಠದ ಏರ್ ಅಂಬುಲೆನ್ಸ್ ಮೂಲಕ ಚೆನೈನ ಆಸ್ಪತ್ರೆಗೆ ಸೇರಿಸಿದ್ದು ಅವರ ಒಂದು ಮಹತ್ವದ ಸಾಧನೆಯಾಗಿದೆ. ಅಲ್ಲದೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಅವರು ಸಲ್ಲಿಸಿದ ಸೇವೆ ಮಹತ್ವದ್ದು ಎಂದು ಹೇಳಿದರು.ಹೀಗೆ ಜಗತ್ತಿನ ಗಮನ ಸೆಳೆದ ಶಾಲಿನಿಯವರನ್ನು ನಮ್ಮ ದತ್ತಿವತಿಯಿಂದ ಸನ್ಮಾನಿಸುತ್ತಿರುವುದು ನಮ್ಮ ಹೆಮ್ಮೆ. ಈ ಕಾರ್ಯಕ್ರಮಕ್ಕೆ ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.ಗೋಷ್ಠಿಯಲ್ಲಿ ಎಚ್.ಎಂ. ಜಯದೇವಪ್ಪ, ಎಚ್.ಸಿ. ಶರಣ್, ಎಚ್.ಎಂ. ಮಧು, ಚಂದ್ರಪ್ಪ ಉಪಸ್ಥಿತರಿದ್ದರು.