ಸಾರಾಂಶ
ಗಂಗಾವತಿ ತಾಲೂಕಿನಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದಿವೆ.
ಕನ್ನಡಪ್ರಭ ವಾರ್ತೆ ಗಂಗಾವತಿ
ನಗರ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದಿವೆ. ಬಿಲಿಸಿನ ಧಗೆಗೆ ತತ್ತರಿಸಿದ ಜನತೆಗೆ ಮಳೆ ತಂಪೇರಿದೆ.ನಗರದ ಗುಂಡಮ್ಮ ಕ್ಯಾಂಪ್, ಲಕ್ಷ್ಮೀ ಕ್ಯಾಂಪ್, ಮುಜಾವರ ಕ್ಯಾಂಪ್ಗಳು ಸೇರಿದಂತೆ ಕೊಳಚೆ ಪ್ರದೇಶಗಳಲ್ಲಿರುವ ಗುಡಿಸಲಿಗೆ ನೀರು ನುಗ್ಗಿದೆ. ಇದರಿಂದ ಅಲ್ಲಿಯ ಜನರು ಕೆಲ ಸಮಯ ಪರದಾಡುವಂತಾಗಿತ್ತು.
ನಗರದಲ್ಲಿ ಕೆಲವೆಡೆ ಅವೈಜ್ಞಾನಿಕವಾಗಿ ಚರಂಡಿ ಮತ್ತು ರಸ್ತೆಗಳ ನಿರ್ಮಾಣವಾಗಿದ್ದರಿಂದ ಚರಂಡಿಗಳಲ್ಲಿ ಸರಳವಾಗಿ ನೀರು ಹೋಗದೆ ರಸ್ತೆ ಮೇಲೆ ಬಂದಿದ್ದರಿಂದ ರಸ್ತೆ ತುಂಬ ಕಸ, ಕಡ್ಡಿ ತುಂಬಿತ್ತು.ಉಪ ಕಾಲುವೆಗೂ ನೀರು
ನಗರದ ಸಮೀಪದಲ್ಲಿರುವ ದೇವಘಘಾಟ, ಮಲ್ಲಾಪುರ, ಬಂಡಿಬಸಪ್ಪ ಕ್ಯಾಂಪ್, ಕಡೇಬಾಗಿಲು ಬಳಿ ಇರುವ ಉಪ ಕಾಲುವೆಗಳಲ್ಲಿ ನೀರು ಹರಿದಿದೆ. ಕಾಲುವೆ ಸುತ್ತಮುತ್ತ ಗುಡ್ಡ, ಕಾಡು ಪ್ರದೇಶವಿದ್ದು, ಧಾರಾಕರ ಮಳೆಯ ನೀರು ಉಪ ಕಾಲುವೆಯಲ್ಲಿ ಹರಿದು ಬಂದಿದೆ. ವಿಜಯನರ ಕಾಲುವೆಗೂ ನದಿ ನೀರು ಬಂದಿದ್ದರಿಂದ ರೈತರಲ್ಲಿ ಸಂತಸ ಮೂಡಿದೆ.ನಗರದ ಕೆಲ ಸರಕಾರಿ ಶಾಲೆಗಳ ಮೈದಾನದಲ್ಲಿ ನೀರು ತುಂಬಿದ್ದರಿಂದ ಮಕ್ಕಳು ಶಾಲೆಯಿಂದ ಹೊರ ಬರಲು ಹರ ಸಹಸಪಟ್ಟರು.