ಬೀಳಗಿ ತಾಲೂಕಿನ ಹೆರಕಲ್ ದಿಂದ ಆಲಮಟ್ಟಿ ಪ್ರದೇಶದವರೆಗೆ ವ್ಯಾಪಿಸಿರುವ ಆಲಮಟ್ಟಿ ಹಿನ್ನೀರಿನಲ್ಲಿ ಸಾಗರ ಮಾಲಾ ಯೋಜನೆಯಡಿ ರಿವರ್ ಕ್ರೂಸ್ ಪ್ರವಾಸೋದ್ಯಮ ಹಾಗೂ ಜಲ ಸಾಹಸ ಕ್ರೀಡಾ ಚಟುವಟಿಕೆಗಳ ಅಭಿವೃದ್ದಿಗೆ ವಿವಿಧ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೀಳಗಿ ತಾಲೂಕಿನ ಹೆರಕಲ್ ದಿಂದ ಆಲಮಟ್ಟಿ ಪ್ರದೇಶದವರೆಗೆ ವ್ಯಾಪಿಸಿರುವ ಆಲಮಟ್ಟಿ ಹಿನ್ನೀರಿನಲ್ಲಿ ಸಾಗರ ಮಾಲಾ ಯೋಜನೆಯಡಿ ರಿವರ್ ಕ್ರೂಸ್ ಪ್ರವಾಸೋದ್ಯಮ ಹಾಗೂ ಜಲ ಸಾಹಸ ಕ್ರೀಡಾ ಚಟುವಟಿಕೆಗಳ ಅಭಿವೃದ್ದಿಗೆ ವಿವಿಧ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಬೀಳಗಿ ಮತಕ್ಷೇತ್ರದ ವ್ಯಾಪ್ತಿಯ ವಿವಿಧೆಡೆ ಪ್ರವಾಸೋದ್ಯ ಅಭಿವೃದ್ಧಿ ವಿಷಯಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಯಡಿ ಅಂದಾಜು ₹12.20 ಕೋಟಿ ವೆಚ್ಚದಲ್ಲಿ ಕ್ರೂಸ್ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹೆರಕಲ್ ಗ್ರಾಮ ವ್ಯಾಪ್ತಿಯ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಗುರುತಿಸಿದ 2.30 ಎಕರೆ ಜಮೀನನ್ನು ಲೀಸ್ ಮೇಲೆ ಕರ್ನಾಟಕ ಜಲಸಾರಿಗೆ ಜಲಮಂಡಳಿಗೆ 15 ದಿನಗಳಲ್ಲಿ ಹಸ್ತಾಂತರಿಸಲು ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆರಕಲ್ದಿಂದ ಚಿಕ್ಕಸಂಗಮ ಪ್ರದೇಶದವರೆಗೆ ವ್ಯಾಪಿಸಿರುವ ಆಲಮಟ್ಟಿ ಹಿನ್ನೀರಿನಲ್ಲಿ ಬೋಟಿಂಗ್ ಸೇರಿದಂತೆ ಇತರೆ ಜಲಸಾಹಸ ಕ್ರೀಡಾ ಚಟುವಟಿಕೆಗಳಿಗೆ ಕೆಬಿಜೆಎನ್ಎಲ್ ದಿಂದ ಅನುಮತಿ ಪಡೆಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಪ್ರವಾಸೋದ್ಯಮ ಇಲಾಖೆಗೆ ಸೂಚನೆ ನೀಡಿದರು. ಈ ಸ್ಥಳದಲ್ಲಿ ಅರಣ್ಯ ವಸತಿ ವಿಹಾರ ಧಾಮ (ಜಂಗಲ್ ಲಾಡ್ಜ್ & ರೆಸಾರ್ಟ್) ನಿರ್ಮಾಣಕ್ಕೆ ಜಮೀನು ಪಡೆಯಲು ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಯಿತು.ಎರಡನೇ ಹಂತದಲ್ಲಿ ಆಲಮಟ್ಟಿ ಹಿನ್ನೀರಿನ ದ್ವೀಪದಲ್ಲಿ ಪ್ರವಾಸೋದ್ಯಮ ಚಟವಟಿಕೆಗಳ ಅಭಿವೃದ್ಧಿಪಡಿಸಲು ತಿಳಿಸಿ, ಈ ಯೋಜನೆಯಡಿ ಕೈಗೊಳ್ಳಲಾಗುವ ಕೆಲಸ ಕಾರ್ಯಗಳನ್ನು ಕರ್ನಾಟಕ ಜಲಸಾರಿಗೆ ಮಂಡಳಿ ಕಾರವಾರ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಈ ಬಗ್ಗೆ ವಿಸ್ತೃತವಾದ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಮೇ 22ರಂದು ಬೆಂಗಳೂರಿನಲ್ಲಿ ಪ್ರದರ್ಶಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಕಾರ್ಯಗಳ ಜೊತೆಯಲ್ಲಿ ಈ ವ್ಯಾಪ್ತಿಯಲ್ಲಿ ಅರಣ್ಯೀಕರಣ ಕಾರ್ಯ ಕೈಗೊಳ್ಳಲು ಅರಣ್ಯ ಇಲಾಖೆಗೆ ಸೂಚಿಸಿದರು.
ಬೀಳಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಕ್ಕಸಂಗಮ ಪ್ರವಾಸಿ ತಾಣ ಅಭಿವೃದ್ಧಿಯು ಅಂತಾರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಆಗಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸುವ ಕೆಲಸವಾಗಬೇಕು. ಜಲಕ್ರೀಡೆ, ಕ್ರೂಸ್ ಸೇವೆ, ಐತಿಹಾಸಿಕ ಹಾಗೂ ಧಾರ್ಮಿಕ ತಾಣ ಹಾಗೂ ಪರಿಸರ ಪ್ರವಾಸ ತಾಣಗಳ ಅಭಿವೃದ್ದಿಯಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ಬರುವಂತೆ ಮಾಡಲು ತಿಳಿಸಿದರು. ಈ ಭಾಗದಲ್ಲಿ 84 ವಿವಿಧ ಜಾತಿಯ ವಲಸೆ ಪಕ್ಷಿಗಳು ಬರುತ್ತಿದ್ದು, ಅವುಗಳಿಗೆ ಅನುಗುಣವಾಗಿ ಅಂದಾಜು 50 ಸಾವಿರ ಸಸಿಗಳನ್ನು ಮಳೆಗಾಲದ ಪೂರ್ವದಲ್ಲಿ ನೆಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಮನೋಹರ ಅಹಿರೆ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಚೈತ್ರಾ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಿ.ಎಸ್.ಹಿತ್ತಲಮನಿ, ಕೆಬಿಜೆಎನ್ಎಲ್ ಕಾರ್ಯಪಾಲಕ ಅಭಿಯಂತರ ತಾರಾನಾಥ ದೊಡಮನಿ, ಕರ್ನಾಟಕ ಜಲಸಾರಿಗೆ ಮಂಡಳಿಯ ಕಾರ್ಯಪಾಲಕ ಅಭಿಯಂತರರು ತಾರಾನಾಥ ರಾಠೋಡ, ತಹಶೀಲ್ದಾರ ವಾಸುದೇವ ಸ್ಮಾಮಿ ಸೇರಿದಂತೆ ಇತರರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯಲ್ಲಿ ವಿಳಂಬಕ್ಕೆ ಅವಕಾಶ ಕೊಡದೇ ಪ್ರಾರಂಭಿಸಿದ ಅಭಿವೃದ್ಧಿ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವವರೆಗೆ ನಿಮ್ಮ ಜವಾಬ್ದಾರಿ ಮುಖ್ಯವಾಗಿದೆ. ಇದನ್ನು ಮನಗಂಡು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು.- ಸಂಗಪ್ಪ ಜಿಲ್ಲಾಧಿಕಾರಿ