ಸಾರಾಂಶ
ಜೋಯಿಡಾ: ತಾಲೂಕಿನಲ್ಲಿ ಸಾರಿಗೆ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕರು ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜೋಯಿಡಾ ತಾಲೂಕಿನಲ್ಲಿ ಸಾರಿಗೆ ಡಿಪೋ ಇಲ್ಲ. ದಾಂಡೇಲಿ ಘಟಕವೆ ತಾಲೂಕಿನಲ್ಲಿ ಸಾರಿಗೆ ವ್ಯವಸ್ಥೆ ಕೈಕೊಂಡಿದ್ದು, ಸರಿಯಾಗಿ ವ್ಯವಸ್ಥೆ ಜನತೆಗೆ ಮಾಡದೆ ಕಳೆದ ಹಲವಾರು ವರ್ಷಗಳಿಂದ ಜನರ ಸಂಕಷ್ಟಕ್ಕೆ ಸಭೆಗಳಲ್ಲಿ ಅಧಿಕಾರಿಗಳು ಹೇಳುವ ಹಾರಿಕೆಯ ಮಾತುಗಳಿಂದಲೇ ಸಮಾಧಾನ ಪಡುವಂತಾಗಿದೆ.ಅತ್ಯಂತ ವಿಸ್ತಾರವಾದ ತಾಲೂಕಿಗೆ ಕೇವಲ ಕಾಟಾಚಾರಕ್ಕೆ ಬಸ್ ಬಿಟ್ಟಂತೆ ಮಾಡಲಾಗುತ್ತಿದೆ. ಪ್ರಯಾಣಿಕರು ಒಂದಲ್ಲ ಎರಡು ಬಸ್ ತುಂಬುವಷ್ಟಿದ್ದರೂ ಇಲಾಖೆಗೆ ಬಸ್ ಬಿಡಲು ಉದಾಸೀನ. ಬೆಳಗ್ಗೆ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಸ್ಥಿತಿಯಂತೂ ಯಾರಿಗೂ ಬೇಡ. ಪ್ರತಿ ಹಳ್ಳಿಗಳಿಗೂ ನಿಲುಗಡೆ ನೀಡಬೇಕಾದ ಬಸ್ಗಳು ನಿಲ್ಲುತ್ತಿಲ್ಲ. ಕೇಳಿದರೆ ರಶ್ ಇತ್ತು ಅಂತಾರೆ. ಬಿಟ್ಟು ಹೋದ ಹಳ್ಳಿಗಳ ಮಕ್ಕಳಿಗೆ ಶಾಲೆ, ಕಾಲೇಜ್ ಬೇಡವೇ? ಬದಲಿ ವ್ಯವಸ್ಥೆ ಇಲ್ಲವೇ ಇಲ್ಲ. ಬಸ್ ಕೆಟ್ಟು ನಿಂತಾಗ ಬೇರೆ ಬಸ್ಗಳು ಬಂದು ಸೇವೆ ನೀಡಿದ ದಾಖಲೆಗಳೇ ಇಲ್ಲ. ಹೀಗಾದರೆ ಜನತೆಯ ಪಾಡೇನು? ಎಂದು ಶ್ರೀ ಕ್ಷೇತ್ರ ಉಳವಿ, ಕಾರ್ಟೋಲಿ, ರಾಮನಗರ, ಜೋಯಿಡಾ, ಜಗಲಬೇಟ, ಅನಮೋಡ ಎಲ್ಲೇ ಹೋದರೂ ಸಾರಿಗೆ ಇಲಾಖೆಗೆ ಹಿಡಿಶಾಪ ಹಾಕುತ್ತಾ ಜನರು ಸಂಕಷ್ಟ ಹೇಳುತ್ತಾರೆ.
ಕಳೆದ 4 ತಿಂಗಳಿಂದ ಗುಂದಕ್ಕೆ ಬಿಡುವ ಬಸ್ ಸ್ಥಗಿತಗೊಳಿಸಲಾಗಿದೆ. ಶಿರಸಿಯಿಂದ ಬರುವ ಬಸ್ಸಿಗೂ ಅನುಮತಿ ನೀಡದೆ ತಡೆ ಹಿಡಿಯಲಾಗಿದೆ. ತಾನು ಕೊಡ, ಪರರಿಗೂ ಬಿಡ ಎಂಬಂಥ ಲಕ್ಷಣದ ದಾಂಡೇಲಿ ಘಟಕ ವ್ಯವಸ್ಥಾಪಕರಿಂದ ಜನತೆಗೆ ಸಂಕಷ್ಟ ಎದುರಾಗಿದೆ.ಡಿ. 19ರಂದು ಜನತಾ ದರ್ಶನದಲ್ಲಿ ಜಿಲ್ಲಾಧಿಕಾರಿ ಮುಂದೆ ಜನತೆಯ ಸಮಸ್ಯೆಗೆ ಕೂಡಲೇ ಸ್ಪಂದಿಸುವ ಭರವಸೆ ನೀಡಿದ ದಾಂಡೇಲಿ ಘಟಕ ವ್ಯವಸ್ಥಾಪಕರು ಇದುವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಆದರೆ ಧಾರವಾಡಕ್ಕೆ ದಾಂಡೇಲಿಯಿಂದ 5 ನಿಮಿಷಕ್ಕೆ ಒಂದು ಬಸ್ ಬಿಡಲಾಗುತ್ತಿದೆ. ಪ್ರತಿ ದಿನವೂ ಬಸ್ ಬಿಡಿ ಎಂದು ತಾಲೂಕಿನ ಜನತೆ ಕೇಳಿಕೊಳ್ಳದೆ, ದಾಂಡೇಲಿಯಿಂದ ಬಸ್ ಅಲುಗಾಡುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶದಿಂದ ಹೇಳುತ್ತಾರೆ.ಶಾಸಕ ಆರ್.ವಿ. ದೇಶಪಾಂಡೆ ಅವರು ಕೂಡಲೇ ಈ ಬಗ್ಗೆ ಗಮನ ಹರಿಸಿ ಜನತೆಗೆ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ದಾಂಡೇಲಿ ಘಟಕ ಅಧಿಕಾರಿಗೆ ಹಲವಾರು ಬಾರಿ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಜವಾಬ್ದಾರಿ ಇಲ್ಲ. ನಮ್ಮ ತಾಲೂಕಿಗೆ ಸಾರಿಗೆ ಘಟಕ ಬೇಕು. ನಮ್ಮ ವಿದ್ಯಾರ್ಥಿಗಳ ಭವಿಷ್ಯ ಈ ಅಧಿಕಾರಿಯಿಂದ ಹಾಳಾಗುತ್ತಿದೆ. ಇದಕ್ಕೆ ಅವರಿಗೆ ಜಿಲ್ಲಾಧಿಕಾರಿಗಳೆ ಕ್ರಮ ಕೈಕೊಳ್ಳಬೇಕು ರೈತ ಗಣಪತಿ ಆಳ್ಳೆ ಹೇಳುತ್ತಾರೆ.