ಶಿವಮೊಗ್ಗ ಲೋಕಸಭಾ ಕಣ ಅಖಾಡಕ್ಕೆ ತ್ರಿಕೋನ ಸ್ಪರ್ಧೆ ಸಿದ್ಧ..!

| Published : Apr 23 2024, 12:48 AM IST / Updated: Apr 23 2024, 01:02 PM IST

ಸಾರಾಂಶ

ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಕೊನೆಗಳಿಗೆಯಲ್ಲಿಯಾದರೂ ನಾಮಪತ್ರ ಹಿಂತೆಗೆದುಕೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು, ಕಣದಲ್ಲಿಯೇ ಉಳಿದಿದ್ದಾರೆ

ಗೋಪಾಲ್ ಯಡಗೆರೆ

ಶಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿ ವಿರುದ್ಧ ಬಂಡಾಯ ಎದ್ದು ಸ್ವತಂತ್ರವಾಗಿ ಸ್ಪರ್ಧೆಗೆ ಇಳಿದಿದ್ದ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಕೊನೆಗಳಿಗೆಯಲ್ಲಿಯಾದರೂ ನಾಮಪತ್ರ ಹಿಂತೆಗೆದುಕೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು, ಕಣದಲ್ಲಿಯೇ ಉಳಿದಿದ್ದಾರೆ. ಇದರೊಂದಿಗೆ ಶಿವಮೊಗ್ಗ ಲೋಕಸಭಾ ಕಣ ಅಖಾಡಕ್ಕೆ ಸಿದ್ಧವಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಂತಾಗಿದೆ.

ಹಾವೇರಿಯಿಂದ ತಮ್ಮ ಪುತ್ರ ಕೆ.ಇ ಕಾಂತೇಶ್‌ಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ತೀವ್ರವಾಗಿ ಆಕ್ರೋಶಗೊಂಡ ಈಶ್ವರಪ್ಪ ಚುನಾವಣಾ ಕಣಕ್ಕೆ ಇಳಿಯುವ ನಿರ್ಧಾರ ಮಾಡಿದರು. ಆರಂಭದಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಆಕ್ರೋಶದ ಕಿಡಿಯಾಗಿದ್ದ ಸ್ಪರ್ಧೆ ಬಳಿಕ ಅನಿರೀಕ್ಷಿತ ಬೆಂಬಲ ಅಥವಾ ರಾಜಕೀಯ ಬೆಳವಣಿಗೆಯಲ್ಲಿ ಈಶ್ವರಪ್ಪನವರು ತಮ್ಮವರಸೆ ಬದಲಿಸಿ ಪಕ್ಷದ ಶುದ್ಧೀಕರಣ ಎಂಬ ಬಾಣವನ್ನು ತಮ್ಮ ಚುನಾವಣಾ ಬಿಲ್ಲಿಗೆ ಹೆದೆಯೇರಿಸಿ ಗುರಿಯಾಗಿಸಿದರು.

ಜೊತೆಗೆ ಹಿಂದುತ್ವ ಎಂಬುದನ್ನು ಪ್ರಮುಖ ಅಸ್ತ್ರವಾಗಿರಿಸಿಕೊಂಡರು. ಒಟ್ಟಾರೆ ಇದು ಕ್ಷೇತ್ರದಲ್ಲಿ ಬಿರುಗಾಳಿ ಬೀಸಿದಂತಾಗಿದ್ದು ಮಾತ್ರ ನಿಜ. ಇವರನ್ನು ಕಣದಿಂದ ಹಿಂದಕ್ಕೆ ಕರೆಸುವ ಎಲ್ಲ ಯತ್ನಗಳು ಕೂಡ ವಿಫಲವಾದವು. ಅಂತಿಮವಾಗಿ ಪಕ್ಷ ಕೂಡ ಕೈ ಚೆಲ್ಲಿತು. ಇದರ ನಡುವೆ ಈಶ್ವರಪ್ಪ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ತಮ್ಮ ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿ ಇರಿಸಿದರು. ತಮ್ಮ ರಾಷ್ಟ್ರಭಕ್ತರ ಬಳಗಕ್ಕೆ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು ಎಂದು ಹೇಳುತ್ತಾ ನರೇಂದ್ರ ಮೋದಿಯವರ ಭಾವಚಿತ್ರ ಮತ್ತು ಹಿಂದುತ್ವವನ್ನು ಪ್ರಧಾನ ಪ್ರಚಾರದ ಬತ್ತಳಿಕೆಯಾಗಿ ಬಳಸತೊಡಗಿದರು. ಸಧ್ಯ ನರೇಂದ್ರ ಮೋದಿ ಭಾವಚಿತ್ರ ಬಳಕೆ ವಿಚಾರ ನ್ಯಾಯಾಲಯದಲ್ಲಿದೆ.

ನಾಗಾಲೋಟದಲ್ಲಿ ಬಿಜೆಪಿ:

ಇತ್ತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಇದಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ತಮ್ಮ ಬಿಜೆಪಿ ತಂಡದೊಂದಿಗೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಬಳಗ, ಸಂಪರ್ಕ ಜಾಲ ಬಿಜೆಪಿ ದೊಡ್ಡ ಪ್ಲಸ್ ಪಾಯಿಂಟ್. ಜೊತೆಗೆ ಪೇಜ್ ಕಾರ್ಯಕರ್ತರ ಪಡೆ ಗೆಲುವಿನ ದಡವನ್ನು ಸುಲಭವಾಗಿ ಮುಟ್ಟಿಸುತ್ತದೆ ಎಂದು ನಾಯಕರು ಬಲವಾಗಿ ನಂಬಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರಿಗೆ ಕೇಂದ್ರದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಇನ್ನೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬ ಬಲವಾದ ಇಚ್ಚೆ ಹೊಂದಿದ್ದು, ಯಾರೂ ತಮ್ಮ ಭದ್ರ ಅಡಿಪಾಯ ಅಲುಗಾಡಿಸಲು ಸಾಧ್ಯವಿಲ್ಲ ಎಂದು ನಂಬಿ ಮುನ್ನಡೆದಿದ್ದಾರೆ.

ಈಶ್ವರಪ್ಪ ಜೊತೆಯಲ್ಲಿ ಲಾಗಾಯ್ತಿನಿಂದಲೂ ಗುರುತಿಸಿಕೊಂಡಿದ್ದ ಶಿವಮೊಗ್ಗ ನಗರ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಸೇರಿ ಬಹುತೇಕರು ಈಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡ ಬಳಿಕ ಅವರ ಜೊತೆಗೆ ಹೋಗದೆ ಪಕ್ಷದಲ್ಲಿಯೇ ಉಳಿದಿದ್ದಾರೆ. ರಾಘವೇಂದ್ರ ಪರವಾಗಿ ಗಟ್ಟಿಯಾಗಿ ಪ್ರಚಾರ ನಡೆಸುತ್ತಿದ್ದು, ಇದು ರಾಘವೇಂದ್ರ ಅವರ ಹುಮ್ಮನಸ್ಸು ಇಮ್ಮಡಿಗೊಳಿಸುವಂತೆ ಮಾಡಿದೆ.

ಇತ್ತ ಕಾಂಗ್ರೆಸ್ ಈ ಕ್ಷಣದವರೆಗೆ ಪ್ರಚಾರದ ವಿಷಯದಲ್ಲಿ ಸರಿಯಾದ ರೀತಿಯಲ್ಲಿ ಟೇಕಾಪ್ ಆದಂತೆ ಕಾಣುತ್ತಿಲ್ಲ. ಆದರೆ ಮುಖಂಡರು ಇದನ್ನು ನಿರಾಕರಿಸುತ್ತಿದ್ದಾರೆ. ಇದೀಗ ಗ್ಯಾರಂಟಿ ಕಾರ್ಡ್‌ಗಳನ್ನು ಮುಂದಿಟ್ಟುಕೊಂಡು ನನ್ನ ಬೂತ್ ನನ್ನ ಜವಾಬ್ದಾರಿ ಅಭಿಯಾನದ ಮೂಲಕ ಮತದಾರರನ್ನು ತಲುಪಲು ಹೊರಟಿದ್ದಾರೆ. ಮೋದಿ ಹವಾದಲ್ಲಿ ಈ ಅಭಿಯಾನ ಯಾವ ರೀತಿಯ ಪರಿಣಾಮ ಉಂಟು ಮಾಡಬಲ್ಲದೋ ಕಾದು ನೋಡಬೇಕು.

ಈಶ್ವರಪ್ಪಗೆ ‘ಕಬ್ಬಿನ ಜಲ್ಲೆಯ ಜೊತೆ ರೈತ’ ಚಿನ್ಹೆ

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿ ನಾಮಪತ್ರ ಸಲ್ಲಿಸಿದ್ದ ಕೆ. ಎಸ್. ಈಶ್ವರಪ್ಪ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿ ಸೋಮವಾರ ತಮ್ಮ ನಿರ್ಧಾರ ಬಳಸದೆ ಕಣದಲ್ಲಿಯೇ ಉಳಿದುಕೊಂಡರು.

ಇದರೊಂದಿಗೆ ಅವರ ಸ್ಪರ್ಧೆ ಕುರಿತಾದ ಊಹಾಪೋಹಕ್ಕೆ ತೆರೆ ಬಿದ್ದಿದೆ. ಅವರಿಗೆ ಚುನಾವಣಾ ಆಯೋಗವು ಕಬ್ಬಿನ ಜಲ್ಲೆ ಜೊತೆ ರೈತ ಚಿನ್ಹೆ ನೀಡಿದೆ.