ಸಾರಾಂಶ
ಸಿದ್ದಾಪುರ: ತಾಲೂಕಿನ ಹಾಲು ಉತ್ಪಾದಕರ, ಹಾಲು ಸಂಘಗಳ ಹಾಗೂ ಸಂಘದ ಸಿಬ್ಬಂದಿ ಸಮಸ್ಯೆಗಳನ್ನು ಹಂತ- ಹಂತವಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪರಶುರಾಮ ವಿ. ನಾಯ್ಕ ಬೇಡ್ಕಣಿ ತಿಳಿಸಿದರು.ಪಟ್ಟಣದ ಹೊಸೂರಿನಲ್ಲಿರುವ ಧಾರವಾಡ ಹಾಲು ಒಕ್ಕೂಟದ ಸಿದ್ದಾಪುರ ಶಾಖಾ ಕಚೇರಿಯಲ್ಲಿ ಆಯೋಜಿಸಿದ್ದ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಉತ್ತಮ ಗುಣಮಟ್ಟದ ಹಾಲು ಶೇಖರಣೆ ಆಗುತ್ತಿದೆ. ಹಾಲು ಉತ್ಪಾದನೆ ಹಚ್ಚಿಸಲು ಆಕಳುಗಳನ್ನು ಆಸಕ್ತ ಸದಸ್ಯರು ಖರೀದಿಸುವುದಕ್ಕಾಗಿ ಧಾರವಾಡ ಹಾಲು ಒಕ್ಕೂಟದೊಂದಿಗೆ ಚರ್ಚೆ ನಡೆಸಲಾಗುವುದು. ಅಲ್ಲದೇ ಒಕ್ಕೂಟದಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ಕೊಡಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು.ಜಿಲ್ಲಾ ಮುಖ್ಯಸ್ಥ ಎಸ್.ಎಸ್. ಬಿಜ್ಜೂರು ಮಾತನಾಡಿ, ಜಿಲ್ಲೆಯಲ್ಲಿ ೪೨ ಸಾವಿರ ಲೀಟರ್ ಹಾಲು ಶೇಖರಣೆ ಆಗುತ್ತಿದೆ. ಜೂನ್- ಜುಲೈ ತಿಂಗಳಲ್ಲಿ ೪೫ರಿಂದ ೪೬ ಸಾವಿರ ಲೀಟರ್ ಹಾಲು ಶೇಖರಣೆ ಅಗಿತ್ತು. ಮುಂದಿನ ದಿನದಲ್ಲಿ ೫೦ ಸಾವಿರ ಲೀಟರ್ ಹಾಲನ್ನು ಶೇಖರಣೆ ಮಾಡುವುದಕ್ಕೆ ಗುರಿ ಇಟ್ಟುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಬೇಡಿಕೆ ಇದ್ದಷ್ಟು ಹಾಲಿನ ಶೇಖರಣೆ ಆಗುತ್ತಿಲ್ಲ. ಹಾಲಿನ ಉತ್ಪಾದನೆ ಹೆಚ್ಚಿಸುವುದಕ್ಕೆ ಎಲ್ಲ ಸಂಘಗಳು ಪ್ರಯತ್ನಿಸಬೇಕು. ಎಲ್ಲ ಹಾಲು ಸಂಘಗಳು ನೂತನವಾಗಿ ಬಂದ ಸಾಫ್ಟ್ವೇರ್ ಅಳವಡಿಸಿಕೊಳ್ಳಬೇಕು ಎಂದರು. ಸಂಘದ ಸಿಬ್ಬಂದಿಗೆ ಒಕ್ಕೂಟ ಪ್ರೋತ್ಸಾಹಧನ ನೀಡಬೇಕು. ನೂತನ ಸಾಫ್ಟ್ವೇರ್ ಅಳವಡಿಸಿಕೊಳ್ಳುವುದಕ್ಕೆ ತಾಂತ್ರಿಕ ತೊಂದರೆ ಇರುವುದರಿಂದ ಅವುಗಳನ್ನು ಮೊದಲು ನಿವಾರಿಸಬೇಕು ಹಾಗೂ ಸಿಬ್ಬಂದಿಗೆ ಸೂಕ್ತವಾದ ಮಾಹಿತಿ- ತರಬೇತಿ ನೀಡಬೇಕು. ಒಕ್ಕೂಟದಿಂದ ಸಂಘದ ಆಸಕ್ತ ರೈತರಿಗೆ ಆಕಳು- ಎಮ್ಮೆ ಖರೀದಿಸಲು ಆರ್ಥಿಕ ಸಹಕಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಬಿಳಗಿ, ಕಡಕೇರಿ, ಕೋಲಸಿರ್ಸಿ, ಶಿರಳಗಿ, ಕೋಡ್ಸರ, ಹಾರ್ಸಿಕಟ್ಟಾ, ವಾಜಗದ್ದೆ, ತಂಡಾಗುಂಡಿ ಸೇರಿದಂತೆ ವಿವಿಧ ಹಾಲು ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಆಗ್ರಹಿಸಿದರು. ಬಿಳಗಿ ಸಂಘದ ಅಧ್ಯಕ್ಷ ವಿಜಯಕುಮಾರ ಭಟ್, ಕಡಕೇರಿ ಹಾಲು ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮಗೇಗಾರ, ಹೊಸಳ್ಳಿ ಹಾಲು ಸಂಘದ ಅಧ್ಯಕ್ಷ ನಾಗಪತಿ ನಾಯ್ಕ, ಸಹಾಯಕ ವ್ಯವಸ್ಥಾಪಕ ಡಾ. ವಿನಾಯಕ ಉಪಸ್ಥಿತರಿದ್ದರು. ವಿಸ್ತರಣಾಧಿಕಾರಿ ಪ್ರಕಾಶ ಕೆ. ಕಾರ್ಯಕ್ರಮ ನಿರ್ವಹಿಸಿದರು. ಚಂದನ ಸಹಕರಿಸಿದರು.