ಕ್ಷಯ ರೋಗ ನಿಯಂತ್ರಣಕ್ಕೆ ಉಚಿತ ಚಿಕಿತ್ಸೆಗಳನ್ನೊಳಗೊಂಡ ರಾಷ್ಟ್ರೀಯ ಕಾರ್ಯಕ್ರಮ : ಚಿಕ್ಕಬಳ್ಳಾಪುರ ಪ್ರಥಮ

| N/A | Published : Mar 25 2025, 12:50 AM IST / Updated: Mar 25 2025, 01:08 PM IST

ಕ್ಷಯ ರೋಗ ನಿಯಂತ್ರಣಕ್ಕೆ ಉಚಿತ ಚಿಕಿತ್ಸೆಗಳನ್ನೊಳಗೊಂಡ ರಾಷ್ಟ್ರೀಯ ಕಾರ್ಯಕ್ರಮ : ಚಿಕ್ಕಬಳ್ಳಾಪುರ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ದೇಶಾದ್ಯಂತ ಕ್ಷಯ ಮತ್ತು ಕುಷ್ಠರೋಗವನ್ನು ನಿರ್ಮೂಲನೆ ಮಾಡಲು  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಹಲವು ವರ್ಷಗಳಿಂದ ಆರೋಗ್ಯ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳ ಪರಿಣಾಮವಾಗಿ ಕ್ಷಯರೋಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ

  ಚಿಕ್ಕಬಳ್ಳಾಪುರ : ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ತಿಳಿಸಿದರು

ಜಿಲ್ಲಾಡಳಿತ ಭವನದ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ನಡೆದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವ ಕ್ಷಯರೋಗ ನಿರ್ಮೂಲನೆಗಾಗಿ ಕಳೆದ 5 ವರ್ಷಗಳಲ್ಲಿ ಕೈಗೊಂಡಿರುವ ಕ್ರಮಗಳ ವಿವಿಧ ಸೂಚ್ಯಂಕಗಳನ್ನು ರಾಜ್ಯ ಮಟ್ಟದಲ್ಲಿ ಪರಿಶೀಲಿಸಿ ಈ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಅಯ್ಕೆಯಾಗಿದೆ ಎಂದರು.

ಪ್ರಕರಣಗಳ ಇಳಿಕೆ:

ಕ್ಷಯರೋಗಗಳ ಪ್ರಕರಣಗಳ ಇಳಿಕೆ, ಪತ್ತೆಹಚ್ಚುವಿಕೆ, ಚಿಕಿತ್ಸಾ ವಿಧಾನ ಸೇರಿದಂತೆ 12 ರೀತಿಯ ಮಾನದಂಡಗಳಲ್ಲಿ ಪರಿಶೀಲಿಸಿ ಈ ಸ್ಥಾನವನ್ನು ಚಿಕ್ಕಬಳ್ಳಾಪುರ ಗಳಿಸಿದೆ. ಈ ಕಾರ್ಯಕ್ಕೆ ಶ್ರಮಿಸಿದ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ಶುಶ್ರುಷಕಿಯರು, ಆರೋಗ್ಯ ಆಶಾ ಕಾರ್ಯಕರ್ತೆಯರು ಹಾಗೂ ಇತರ ಸಿಬ್ಬಂದಿಗಳಿಗೆ ಈ ಸಂದರ್ಭಧಲ್ಲಿ ಧನ್ಯವಾದ ತಿಳಿಸಲು ಇಚ್ಚಿಸುತ್ತೇನೆ ಎಂದರು. ಕ್ಷಯಮುಕ್ತ ಜಿಲ್ಲೆ ಮಾಡುವ ವಿಶೇಷ ಅಭಿಯಾನದಲ್ಲಿ ಆಶಾ, ಆರೋಗ್ಯ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. 

ಗ್ರಾಮೀಣ ಮತ್ತು ನಗರ ಭಾಗದ ಪ್ರತಿ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬರನ್ನು ಕ್ಷಯರೋಗ ತಪಾಸಣೆಗೊಳಪಡಿಸಿ, ಒಂದು ವೇಳೆ ಯಾರಿಗಾದರೂ ರೋಗ ಪತ್ತೆಯಾದರೆ ಅವರಿಗೆ ಸರ್ಕಾರದಿಂದ ಸಿಗುವ ಸಂಪೂರ್ಣ ಉಚಿತ ಚಿಕಿತ್ಸೆ ಮತ್ತು ಪೌಷ್ಠಿಕ ಆಹಾರ ನೀಡುವ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸುವ ಜೊತೆಗೆ ಚಿಕಿತ್ಸಾ ಅವಧಿ ಮುಗಿಯುವವರೆಗೂ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಶ್ರಮಿಸಿದ್ದಾರೆ ಎಂದರು.

ಹಿಂದೆ ಚಿಕಿತ್ಸೆ ಇರಲಿಲ್ಲ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಮಾತನಾಡಿ, ಹಿಂದೆ ಕ್ಷಯ ರೋಗಕ್ಕೆ ಸರಿಯಾದ ಚಿಕಿತ್ಸೆ ದೊರೆಯುತ್ತಿರಲಿಲ್ಲ ಮತ್ತು ಅರಿವಿನ‌ ಕೊರತೆ ಕಾರಣವಾಗಿತ್ತು. ಈಗ ಕ್ಷಯ ಮತ್ತು ಕುಷ್ಠರೋಗಗಳು ಸಂಪೂರ್ಣವಾಗಿ ಗುಣಪಡಿಸಬಹುದಾದಂತಹ ಕಾಯಿಲೆಗಳೆಂದು ವೈದ್ಯಕೀಯ ವಿಜ್ಞಾನ ದೃಢಪಡಿಸಿದೆ ಎಂದರು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಇಡೀ ದೇಶಾದ್ಯಂತ ಕ್ಷಯ ಮತ್ತು ಕುಷ್ಠರೋಗವನ್ನು ನಿರ್ಮೂಲನೆ ಮಾಡಲು ಸಂಪೂರ್ಣ ಉಚಿತ ಚಿಕಿತ್ಸೆಗಳನ್ನೊಳಗೊಂಡ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಹಲವು ವರ್ಷಗಳಿಂದ ಆರೋಗ್ಯ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳ ಪರಿಣಾಮವಾಗಿ ಕ್ಷಯರೋಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

ಟಿಬಿ ಪತ್ತೆ ಮಾಡಬಹುದು

ಕ್ಷಯರೋಗ ಭಾರತದಲ್ಲಿ ಸವಾಲಾಗಿ ಉಳಿದಿದೆ. ಕಡಿಮೆ ಬ್ಯಾಕ್ಷೀರಿಯಾದ ಉಪಸ್ಥಿತಿಯಿರುವ ಸಂದರ್ಭಗಳಲ್ಲಿಯೂ ಸಹ ಕ್ಷಯರೋಗವನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಎನ್ಎಎಟಿ ಯಂತ್ರದಲ್ಲಿ ಸಾಮಾನ್ಯ ಜನರಲ್ಲಿ ಮಾತ್ರವಲ್ಲದೆ ಮಕ್ಕಳು, ಹೆಚ್‌ಐವಿ ಯೊಂದಿಗೆ ವಾಸಿಸುವ ಜನರು ಮತ್ತು ಟಿಬಿ ಹೊಂದಿರುವ ವ್ಯಕ್ತಿಗಳಲ್ಲಿ ಟಿಬಿಯನ್ನು ಪತ್ತೆ ಹಚ್ಚಲು ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಂಜುಳ, ಡಾ. ಉಮಾ, ನಾಯನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕೊಂಡೇನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಸಿಬ್ಬಂದಿ ಆಶಾಕಾರ್ಯಕರ್ತಯರು ಮುಂತಾದವರು ಇದ್ದರು.