ಸಾರಾಂಶ
ಈ ಅಭಿಯಾನದ ಮೊದಲ ಕಾರ್ಯಕ್ರಮದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ತುಳು ಅಧ್ಯಯನ ಕೇಂದ್ರದ ೩೮ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಬರೆಯುವ ಜೊತೆಗೆ ಓದಿಸುವ ಕೆಲಸ ನಡೆಯಬೇಕಾದದ್ದು ಅಗತ್ಯ. ಈ ನಿಟ್ಟಿನಲ್ಲಿ ತುಳು ಅಕಾಡೆಮಿ ಆಯೋಜಿಸಿರುವ ‘ಅಕಾಡೆಮಿಡ್ ಒಂಜಿ ದಿನ : ಬಲೆ ತುಳು ಓದುಗ’ ಕಾರ್ಯಕ್ರಮ ಅತ್ಯಂತ ಸಕಾಲಿಕ ಹಾಗೂ ಮೌಲಿಕ ಕಾರ್ಯಕ್ರಮವಾಗಿದೆ ಎಂದು ತುಳು ವಿದ್ವಾಂಸ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಮಂಗಳೂರಿನ ತುಳು ಭವನದಲ್ಲಿ ಶುಕ್ರವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡ ‘ಅಕಾಡೆಮಿಡ್ ಒಂಜಿದಿನ : ಬಲೆ ತುಳು ಓದುಗ’ ಅಭಿಯಾನ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು. ಒಂದು ಕಾಲದಲ್ಲಿ ತುಳು ಕೇಳುವ ಹಾಗೂ ಮಾತುಕತೆಯ ಭಾಷೆಯಾಗಿತ್ತು. ೧೬ನೇ ಶತಮಾನದ ಬಳಿಕ ಓದುವ ಪರಂಪರೆ ಆರಂಭಗೊಂಡಿತು, ೧೯ನೇ ಶತಮಾನದ ಆರಂಭದಲ್ಲಿ ಬಾಸೆಲ್ ಮಿಶನ್ನವರು ತುಳುವಿನ ಪುಸ್ತಕಗಳ ಮುದ್ರಣಕ್ಕೆ ಆದ್ಯತೆ ನೀಡಿದ ಬಳಿಕ ತುಳು ಬರೆಯುವ ಹಾಗೂ ಓದುವ ಪರಂಪರೆ ವಿಸ್ತಾರಗೊಂಡಿತು ಎಂದು ಶಿವರಾಮ ಶೆಟ್ಟಿ ಹೇಳಿದರು. ತುಳುವಿನ ಓದು ಅಂದರೆ ಅದು ತುಳು ಬದುಕಿನ ಓದು. ಈ ಓದು ನಮ್ಮಲ್ಲಿ ಜ್ಞಾನ, ಕುತೂಹಲದ ಬಗ್ಗೆ ಪ್ರಶ್ನೆ ಮೂಡಿಸುವುದು. ತುಳುವಿಗೆ ಒಂದು ತಾಕತ್ತು, ತಮೇರಿ ನೀಡುವ ಸಲುವಾಗಿ ಬರೆಯುವ ಹಾಗೂ ಓದುವ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ಪ್ರೊ. ಬಿ. ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು.ಈ ಅಭಿಯಾನದ ಮೊದಲ ಕಾರ್ಯಕ್ರಮದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ತುಳು ಅಧ್ಯಯನ ಕೇಂದ್ರದ ೩೮ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಧ್ಯಕ್ಷತೆ ವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಭಾಷೆ, ಸಂಸ್ಕೃತಿ ಬಗ್ಗೆ ಅಗಾಧವಾದ ಪುಸ್ತಕ ಭಂಡಾರವು ಅಕಾಡೆಮಿಯ ಗ್ರಂಥಾಲಯದಲ್ಲಿದೆ. ವಿದ್ಯಾರ್ಥಿ, ಯುವ ಜನರಲ್ಲಿ ತುಳು ಓದಿನ ಅಭಿರುಚಿ ಮೂಡಿಸುವ ಹಿನ್ನೆಲೆಯಲ್ಲಿ ಅಕಾಡೆಮಿಯ ಬಲೆ ತುಳು ಓದುಗ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ, ನಿವೃತ್ತ ಪತ್ರಗಾರ ಸಹಾಯಕ ಬೆನೆಟ್ ಅಮ್ಮನ್ನ, ಆಳ್ವಾಸ್ ತುಳು ಅಧ್ಯಯನ ಕೇಂದ್ರದ ಸಂಯೋಜಕ ಡಾ. ಯೋಗೀಶ್ ಕೈಕೋಡಿ ಶುಭ ಹಾರೈಸಿದರು.ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು, ತುಳು ಅಕಾಡೆಮಿಯ ಸದಸ್ಯ ಸಂತೋಷ್ ಶೆಟ್ಟಿ ವಂದಿಸಿದರು.