ಸಾರಾಂಶ
ಸಿದ್ಧಗಂಗಾ ಮಠದಲ್ಲಿ ಜರುಗುತ್ತಿರುವ ಇತಿಹಾಸ ಪ್ರಸಿದ್ಧ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಅಂಗವಾಗಿ ತೆರದಿರುವ ವಾರ್ತಾ ಇಲಾಖೆ ಮಳಿಗೆ ಬಗ್ಗೆ ಶ್ರೀ ಮಠದ ಸಿದ್ದಲಿಂಗ ಸ್ವಾಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಸಿದ್ಧಗಂಗಾ ಮಠದಲ್ಲಿ ಜರುಗುತ್ತಿರುವ ಇತಿಹಾಸ ಪ್ರಸಿದ್ಧ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಅಂಗವಾಗಿ ತೆರದಿರುವ ವಾರ್ತಾ ಇಲಾಖೆ ಮಳಿಗೆ ಬಗ್ಗೆ ಶ್ರೀ ಮಠದ ಸಿದ್ದಲಿಂಗ ಸ್ವಾಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ವಸ್ತುಪ್ರದರ್ಶನದ ಉದ್ಘಾಟನೆ ನಂತರ ವಾರ್ತಾ ಇಲಾಖೆ ಮಳಿಗೆಗೆ ಭೇಟಿ ನೀಡಿ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯು ವಾರ್ತಾ ಇಲಾಖೆ ತೆರದಿರುವ ಮಳಿಗೆಯಲ್ಲಿ ಲಭ್ಯವಿದ್ದು ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತಿ ಸಿಇಒ ಜಿ. ಪ್ರಭು ಮಾತನಾಡಿ ತುಮಕೂರು ಜಿಲ್ಲೆ ಅಭಿವೃದ್ಧಿ ಮಾಹಿತಿ, ಸರ್ಕಾರದ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಸೇರಿದಂತೆ ೫ ಗ್ಯಾರಂಟಿ ಯೋಜನೆಗಳು ಹಾಗೂ ಕನ್ನಡ ನಾಮಫಲಕಕ್ಕೆ ಒತ್ತು, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಜನಸ್ಪಂದನ, ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಲು ಕೃಷಿ-ಖುಷಿ, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ, ಇಂದಿರಾ ಕ್ಯಾಂಟೀನ್ ಮರುಪ್ರಾರಂಭ, ಕ್ಷೀರಭಾಗ್ಯಕ್ಕೆ ಹತ್ತರ ಸಂಭ್ರಮ, ಅತಿಥಿ ಉಪನ್ಯಾಸಕರಿಗೆ ಗೌರವ, ಬ್ರಾಂಡ್ ಬೆಂಗಳೂರು, ನಮ್ಮ ಹಕ್ಕುಗಳ ಜನನಿ ನಮ್ಮ ಸಂವಿಧಾನ ಸೇರಿದಂತೆ ಸರ್ಕಾರದ ವಿವಿಧ ಮಹತ್ತರ ಯೋಜನೆ/ಕಾರ್ಯಕ್ರಮಗಳ ಮಾಹಿತಿ ಕಣಜವೇ ಮಳಿಗೆಯಲ್ಲಿ ಲಭ್ಯವಿದ್ದು, ಸಾರ್ವಜನಿಕರು ಮಳಿಗೆಗೆ ಭೇಟಿ ನೀಡಿ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರಭುದೇವ ಅವರು ಮಳಿಗೆಯ ವಿನ್ಯಾಸವನ್ನು ವಿನೂತನ ಶೈಲಿಯಲ್ಲಿ ರೂಪಿಸಲಾಗಿದೆ. ಅಲ್ಲದೆ ಎಲ್ಇಡಿ ಟಿವಿ ಮೂಲಕವೂ ಮಾಹಿತಿ ನೀಡುತ್ತಿರುವುದು ಉತ್ತಮ ಪ್ರಯತ್ನ. ಇದರಿಂದ ಅನಕ್ಷರಸ್ತರಿಗೂ ಸಹ ಸರ್ಕಾರಿ ಯೋಜನೆಗಳ ಮಾಹಿತಿ ದೊರೆಯಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಆರ್. ರೂಪಕಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಶ್ರೀಮಠದ ಸೇವಾಕರ್ತರು ಸೇರಿದಂತೆ ಮತ್ತಿತರರಿದ್ದರು.