ಸಾರಾಂಶ
ರಾಯಚೂರು ತಾಲೂಕಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಸಾವನಪ್ಪಿದ್ದಾರೆ.
ರಾಯಚೂರು: ತಾಲೂಕಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಸಾವನಪ್ಪಿದ್ದಾರೆ. ರಾಯಚೂರು ತಾಲೂಕಿನ ತುಂಗಭದ್ರಾ ಗ್ರಾಮದ ಸಮೀಪದ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಭಾನುವಾರ ರಾತ್ರಿ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಪಕ್ಕದ ಆಂಧ್ರ ಪ್ರದೇಶದ ಮಾಧವರಂನ ವೀರೇಶ (34) ಎಂದು ಗುರುತಿಸಲಾಗಿದೆ. ತಾಲೂಕಿನ ಗಿಲ್ಲೇಸೂಗೂರಿನಿಂದ ಆಂಧ್ರ ಪ್ರದೇಶದ ಮಾಧವರಂನ ಕಡೆ ಹೊರಟಿದ್ದ ವಿರೇಶಗೆ ರಾಯಚೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದಿದೆ. ಅಪಘಾತ ನಡೆದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೈಕ್ ಸವಾರ ಸಾವು: ರಾಯಚೂರು ತಾಲೂಕಿನ ಯರಗೇರಾ ಸಮೀಪದ ರಾಯಚೂರು ವಿಶ್ವ ವಿದ್ಯಾಲಯದ ಹತ್ತಿರ ಭಾನುವಾರ ರಾತ್ರಿ ನಡೆದ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಆಂಧ್ರ ಪ್ರದೇಶದ ಮಾಧವರಂನ ಮದನಪಲ್ಲಿ ಗ್ರಾಮದ ರೆಡ್ಡಿ (37) ಮೃತಪಟ್ಟಿದ್ದಾರೆ.
ರಾಯಚೂರಿನಿಂದ ಮಾಧವರಂಗೆ ಬೈಕ್ ಸವಾರ ತೆರಳುತ್ತಿದ್ದ ಸಮಯದಲ್ಲಿ ಲಾರಿ ಆಂಧ್ರ ಪ್ರದೇಶದಿಂದ ರಾಯಚೂರಿನ ಕಡೆ ಬರುತ್ತಿದ್ದಾಗ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.