ಇಬ್ಬರು ಅಪರಿಚಿತರಿಂದ ಮನೆಯ ಬೀಗ ಮುರಿದು ಕಳ್ಳತನ: ಚಿನ್ನಾಭರಣ ದೋಚಿ ಪರಾರಿ

| Published : Jun 05 2025, 01:25 AM IST

ಇಬ್ಬರು ಅಪರಿಚಿತರಿಂದ ಮನೆಯ ಬೀಗ ಮುರಿದು ಕಳ್ಳತನ: ಚಿನ್ನಾಭರಣ ದೋಚಿ ಪರಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮನೆ ಮೊದಲ ಅಂತಸ್ತಿನ ಕೊಠಡಿಗೆ ನುಗ್ಗಿ ಅಲ್ಮೆರಾದಲ್ಲಿ ಇಡಲಾಗಿದ್ದ 4.75 ಲಕ್ಷ ರು. ನಗದು, 25 ಗ್ರಾಂ ಚಿನ್ನದ ಸರ, ಎರಡು ಉಂಗುರ, ಬ್ರಾಸ್ ಲೈಟ್, ಎರಡು ಬೆಳ್ಳಿ ದೀಪ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಮನೆ ಕಾಂಪೌಂಡ್ ಹಾರಿ ಪರಾರಿಯಾ ಗಿರುವುದು ಮನೆಯಲ್ಲಿದ್ದ ಸಿಸಿಟಿವಿಗಳಲ್ಲಿ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಬೈಕ್ ನಲ್ಲಿ ಬಂದ ಮುಸುಕುಧಾರಿ ಇಬ್ಬರು ಅಪರಿಚಿತರು ಮನೆ ಬೀಗ ಮುರಿದು ನಗದು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ತಾಲೂಕಿನ ದೇಶಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಅಭಿಜಿತ್ ಅವರಿಗೆ ಸೇರಿದ ಲೇ.ದೇವರಾಜು, ಶಾಂತಮ್ಮ ನಿಲಯದ ಮನೆ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು, ಮನೆ ಕೊಠಡಿಯ ಅಲ್ಮೆರಾದಲ್ಲಿದ್ದ 4.75 ಲಕ್ಷ ರು. ನಗದು, 53 ಗ್ರಾಂ. ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಮನೆ ಮಾಲೀಕ ಅಭಿಜಿತ್ ಬೆಂಗಳೂರಿನ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ದೇಶಹಳ್ಳಿಯ ತಮ್ಮ ಮನೆಗೆ ಬಂದು ಹೋಗುತ್ತಿದ್ದರು. ಇದನ್ನು ದುರುಪಯೋಗಪಡಿಸಿಕೊಂಡ ದುಷ್ಕರ್ಮಿಗಳು ಕಳೆದ ಮೇ 30ರಂದು ಬೆಳಗಿನ ಜಾವದ ಸಮಯದಲ್ಲಿ ಬೈಕಿನಲ್ಲಿ ಬಂದು ಬೈಕಿನ ಹಿಂಭಾಗದ ನಂಬರ್ ಪ್ಲೇಟನ್ನು ಬಟ್ಟೆಯಿಂದ ಮರೆಮಾಚಿದ್ದಾರೆ.

ನಂತರ ಇಬ್ಬರ ಪೈಕಿ ಓರ್ವ ವ್ಯಕ್ತಿ ಅಭಿಜಿತ್ ಮನೆ ಮುಂಭಾಗದ ಬಾಗಿಲನ್ನು ಬಲವಾದ ಆಯುಧದಿಂದ ಮೀಟಿ ಜಖಂಗೊಳಿಸಿದ ನಂತರ ಮನೆಯೊಳಗೆ ಪ್ರವೇಶ ಮಾಡಿ ಹಾಲ್ ನಲ್ಲಿ ಹಣ ಮತ್ತು ಒಡವೆ, ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಬಳಿಕ ಮನೆ ಮೊದಲ ಅಂತಸ್ತಿನ ಕೊಠಡಿಗೆ ನುಗ್ಗಿ ಅಲ್ಮೆರಾದಲ್ಲಿ ಇಡಲಾಗಿದ್ದ 4.75 ಲಕ್ಷ ರು. ನಗದು, 25 ಗ್ರಾಂ ಚಿನ್ನದ ಸರ, ಎರಡು ಉಂಗುರ, ಬ್ರಾಸ್ ಲೈಟ್, ಎರಡು ಬೆಳ್ಳಿ ದೀಪ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಮನೆ ಕಾಂಪೌಂಡ್ ಹಾರಿ ಪರಾರಿಯಾ ಗಿರುವುದು ಮನೆಯಲ್ಲಿದ್ದ ಸಿಸಿಟಿವಿಗಳಲ್ಲಿ ದಾಖಲಾಗಿದೆ.

ಮನೆ ಮಾಲೀಕ ಅಭಿಜಿತ್ ಗೆ ಇತ್ತೀಚೆಗೆ ವಿವಾಹ ನಿಶ್ಚಯವಾಗಿದ್ದು, ಕಳೆದ ಮೇ 27ರಂದು ವಧುವಿನ ಕಡೆಯವರು ಅಭಿಜಿತ್ ಮನೆಗೆ ಭೇಟಿ ನೀಡಿ ಊಟ ಮಾಡಿ ಹೋಗಿದ್ದರು. ಈ ಬೆನ್ನಲ್ಲೇ ಮೇ 30ರಂದು ದುಷ್ಕರ್ಮಿಗಳು ಮನೆಗೆ ನುಗ್ಗಿ ಕಳ್ಳತನದ ಕೃತ್ಯ ನಡೆಸಿದ್ದಾರೆ.

ಘಟನೆ ಕುರಿತಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಅಭಿಜಿತ್ ಮನೆಗೆ ಬಂದು ಹೋದ ವ್ಯಕ್ತಿಗಳ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಂಬಂಧ ಬೆಸಗರಹಳ್ಳಿ ಪೊಲೀಸರು ಬಿಎನ್ಎಸ್ ಕಾಯ್ದೆ 331, 4, 305 ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗೆ ಶೋಧಕಾರ್ಯ ಕೈಗೊಂಡಿದ್ದಾರೆ.

ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ಗ್ರಾಮಾಂತರ ವಿಭಾಗದ ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಗೌಡ ಹಾಗೂ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.