ಸಾರಾಂಶ
ಚಿಟ್ಪಾಡಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಗುವಿನ ಪೋಷಕರಿಗೆ ಈ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪರರಿಗೆ ಸಹಾಯ ಮಾಡುವುದಕ್ಕೆ ಮನಸ್ಸಿದ್ದರೇ ಮಾರ್ಗ ಇದ್ದೇ ಇರುತ್ತದೆ ಎಂಬುದನ್ನು ತೋರಿಸಿಕೊಟ್ಟ ಇಲ್ಲಿನ ಕಸ್ತೂರ್ಬಾ ನಗರದ ಶ್ರೀ ಭಗವತೀ ನಾಸಿಕ್ ಕಲಾ ತಂಡದ ಕಲಾವಿದರು, ಇತ್ತೀಚೆಗೆ ಉಡುಪಿ ಕೃಷ್ಣ ಮಠದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ 2.8 ಲಕ್ಷ ರು.ಗಳನ್ನು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ನೀಡಲಾಯಿತು.ನಗರದ ಚಿಟ್ಪಾಡಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಗುವಿನ ಪೋಷಕರಿಗೆ ಈ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಮಗುವಿನ ವೈದ್ಯಕೀಯ ಚಿಕಿತ್ಸೆಯ ಸಹಾಯಾರ್ಥವಾಗಿ ವೇಷ ಧರಿಸಿದ ಶ್ರೀ ಭಗವತೀ ನಾಸಿಕ್ ಕಲಾ ತಂಡದ ಕಲಾವಿದರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಅಣ್ಣಯ್ಯ ಸೇರಿಗಾರ್, ಮಣಿಪಾಲ ಆಸ್ಪತ್ರೆಯ ವೈದ್ಯೆ ಡಾ. ಅರ್ಚನಾ, ಸಂಸ್ಥೆಯ ಗೌರವಾಧ್ಯಕ್ಷ ಶ್ರೀಧರ ದೇವಾಡಿಗ, ನಗರಸಭಾ ಮಾಜಿ ಸದಸ್ಯ ಶಶಿರಾಜ್ ಕುಂದರ್, ಸಂಸ್ಥೆಯ ಅಧ್ಯಕ್ಷ ಪ್ರಣಮ್, ದೈವಸ್ಥಾನದ ಆಡಳಿತ ಮಂಡಳಿ ಸದಸ್ಯ ಭಾಸ್ಕರ ಶೆಟ್ಟಿ, ಪ್ರಮುಖರಾದ ಲಕ್ಷ್ಮಣ್, ಶಂಕರ್ ಉಪಸ್ಥಿತರಿದ್ದರು.