ಶನಿವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ದಲಿತ ನಾಯಕರು ಜಿಲ್ಲಾಡಳಿತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಎಸ್ಪಿ ಕಚೇರಿಯಲ್ಲಿ ಉಡುಪಿ ಜಿಲ್ಲಾ ದಲಿತರ ಪೋಲೀಸ್ ಕುಂದುಕೊರತೆ ಸಭೆ
ಉಡುಪಿ: ಉಡುಪಿ ಜಿಲ್ಲಾಧಿಕಾರಿ ದಲಿತರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ದೌರ್ಜನ್ಯ ನಡೆದ ಸ್ಥಳಕ್ಕೆ ಭೇಟಿ ಕೊಡುತ್ತಿಲ್ಲ, ಮನೆ ಬಿದ್ದು ಸೂರಿಲ್ಲದೆ ಹೆಬ್ರಿ ಅಂಬೇಡ್ಕರ್ ಭವನದಲ್ಲಿ ತಿಂಗಳುಗಳಿಂದ ಬದುಕುತ್ತಿರುವ ಬಡ ದಲಿತ ಕುಟುಂಬಕ್ಕೆ ಪುರ್ನವಸತಿ ಕಲ್ಪಿಸಿಲ್ಲ, ಸಾಕಷ್ಟು ದಲಿತರ ಭೂಮಿಯ ಸಮಸ್ಯೆಗಳಿದ್ದರೂ ಕ್ಯಾರೇ ಎನ್ನುತ್ತಿಲ್ಲ, ಕೇವಲ ದೇವಸ್ಥಾನ ಸುತ್ತುವುದರಲ್ಲೇ ಕಾಲ ಕಳೆಯುತ್ತಿದ್ದಾರೆ... ಇದು ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ದಲಿತ ಮುಖಂಡರ ಆರೋಪಗಳ ಸುರಿಮಳೆ.ಶನಿವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ದಲಿತ ನಾಯಕರು ಜಿಲ್ಲಾಡಳಿತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಅವರ ವರ್ಗಾವಣೆ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾಧಿಕಾರಿ ಅವರು ಮಾತ್ರವಲ್ಲ, ಇತರ ಇಲಾಖೆ ಅಧಿಕಾರಿಗಳು ಕೂಡ ದಲಿತರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ, ಜಿಲ್ಲಾ ಸಹಕಾರಿ ಇಲಾಖೆಯ ಅಧಿಕಾರಿಯವರಂತೂ ತಮ್ಮನ್ನು ಸಂಜೆ 3.30ರಿಂದ 5.30ರೊಳಗೆ ಮಾತ್ರ ಭೇಟಿಯಾಗಬೇಕು ಎಂದು ಫಲಕವನ್ನೇ ಹಾಕಿ ಬಿಟ್ಟಿದ್ದಾರೆ. ಪೊಲೀಸ್ ಅಧಿಕಾರಿಗಳು ಕೂಡ ದಲಿತ ದೌರ್ಜನ್ಯ ಕೇಸುಗಳಿಗೆ ತೀರಾ ನಿರ್ಲಕ್ಷದ ತನಿಖೆ ನಡೆಸಿ, ಬಿ ರಿಪೋರ್ಟ್ ಹಾಕುತ್ತಿದ್ದಾರೆ ಎಂದು ಆಪಾದಿಸಿದರು.ಕೊರಗ ಸಮುದಾಯದವರು ತಮಗಾದ ಅನ್ಯಾಯಕ್ಕೆ 10 ದಿನಗಳಿಂದ ಅಹೋರಾತ್ರಿ ಜಿಲ್ಲಾಧಿಕಾರಿ ಕಚೇರಿ ಎದುರಲ್ಲೇ ಧರಣಿ ನಡೆಸುತ್ತಿದ್ದರೂ ಅವರ ಸಮಸ್ಯೆಯನ್ನು ಕೇಳುವವರಿಲ್ಲ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗಾಗಿಯೇ ಆರಂಬಿಸಲಾದ ವಿಶೇಷ ಪೋಲೀಸ್ ಠಾಣೆಗೆ ಅವಶ್ಯಕ ಸಿಬ್ಬಂದಿಗಳ ನೇಮಕವನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್ಪಿ ಹರಿರಾಮ್ ಶಂಕರ್ ಅಧ್ಯಕ್ಷತೆ ವಹಿಸಿ ನಡೆಸಿಕೊಟ್ಟ ಈ ಸಭೆಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಸಂಚಾಲಕ ಮಂಜುನಾಥ ಗಿಳಿಯಾರು, ದಲಿತ ಮುಖಂಡರಾದ ಉದಯ ಕುಮಾರ್ ತಲ್ಲೂರು, ಜಯನ್ ಮಲ್ಪೆ, ವಿಶ್ವನಾಥ್ ಪೇತ್ರಿ, ಸಂಜೀವ ಬಳ್ಕೂರು, ರಮೇಶ್ ಕೋಟ್ಯಾನ್, ಶ್ಯಾಮಸುಂದರ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಚಂದ್ರ ಆಲ್ತಾರು, ಮಂಜುನಾಥ ಬಾಳ್ಕುದ್ರು, ಸುರೇಶ ಬಾರ್ಕೂರು, ವಡ್ಡರ್ಸೆ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.