ಉಡುಪಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಜಯ ಕರ್ನಾಟಕ ಸ್ಥಾಪಕಾಧ್ಯಕ್ಷ ದಿ. ಮುತ್ತಪ್ಪ ರೈ ಮತ್ತು ಶಾಸಕ ವಿಶ್ವನಾಥ ಅವರ ಸಂಪರ್ಕವನ್ನು ಪ್ರಸ್ತಾಪಿಸಿ ಹಗುರವಾಗಿ ಮಾತನಾಡಿರುವುದನ್ನು ಉಡುಪಿ ಜಿಲ್ಲಾ ಜಯ ಕರ್ನಾಟಕ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಸದಾನಂದ ಗೌಡರು ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸದಿದ್ದರೆ ರಾಜ್ಯ ಸಂಘಟನೆಯ ನಿರ್ದೇಶನದಂತೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಸಭೆಯಲ್ಲಿ ಒಮ್ಮತದ ನಿರ್ಣಯ ಮಾಡಲಾಯಿತು. ಜಿಲ್ಲಾಧ್ಯಕ್ಷ ಲೂವಿಸ್ ಎಂ. ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಸಂಘಟನೆಯ ವತಿಯಿಂದ ವಿವಿಧ ಜನಹಿತ ಕಾರ್ಯ ಮಾಡಿ ಜನತೆಯ ವಿಶ್ವಾಸ ಗಳಿಸುವ ದಿಶೆಯಲ್ಲಿ ವಿಚಾರ ವಿನಿಮಯ ನಡೆಸಲಾಯಿತು.

ಸಂಘಟನೆ ಕೇವಲ ಏಕಮುಖವಾಗದೆ ಮಹಿಳಾ, ವಿದ್ಯಾರ್ಥಿ ಘಟಕಗಳನ್ನು ಪ್ರಾರಂಭಿಸುವುದರ ಮೂಲಕ ಎಲ್ಲಾ ವರ್ಗದ ಜನಹಿತ ಕಾರ್ಯ ನಿರ್ವಹಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ಪ್ರಸ್ತಾಪಿಸಲಾಯಿತು.

ಸಭೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಕರುಣಾಕರ ಎಂ. ಪೂಜಾರಿ, ಕಾರ್ಯಾಧ್ಯಕ್ಷ ಶರತ್ ಶೆಟ್ಟಿ ಕುಂದಾಪುರ, ಪ್ರಧಾನ ಸಂಚಾಲಕ ರತ್ನಾಕರ ಮೊಗವೀರ ಮಾತನಾಡಿದರು. ಗೌರವ ಸಲಹೆಗಾರ ಸುಧಾಕರ್ ರಾವ್ ಬಾರ್ಕೂರು, ಮಾಧ್ಯವ ವಕ್ತಾರ ಶ್ರೀನಿವಾಸ ಶೆಟ್ಟಿ ತೋನ್ಸೆ ಸೂಕ್ತ ಸಲಹೆ ಸೂಚನೆ ನೀಡಿದರು.

ಈ ಸಂದರ್ಭ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ನಿತ್ಯಾನಂದ ಅಮೀನ್ ಸ್ವಾಗತಿಸಿ ವಂದಿಸಿದರು.