ಉಡುಪಿ ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟಿದ್ದು, ಕಳೆದೊಂದು ತಿಂಗಳು ನಿರೀಕ್ಷೆಯ ಮಳೆಯಾಗದೇ ಮುಖ್ಯವಾಗಿ ರೈತರು ಕೃಷಿ ಕಾರ್ಯ ಆರಂಭಿಸಲಾಗದೆ ಸಂಕಷ್ಟಕ್ಕಿಡಾಗಿದ್ದಾರೆ, ನದಿ, ಕೆರೆ, ಬಾವಿಗಳಲ್ಲಿಯೂ ನೀರು ತುಂಬದೇ ಮುಂದೆ ಕುಡಿಯುವ ನೀರಿಗೆ ತತ್ವಾರವಾಗುವ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಮಳೆ ಬೆಳೆಗಾಗಿ ಜನರು ದೇವರ ಮೊರೆ ಹೋಗುತ್ತಿದ್ದಾರೆ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟಿದ್ದು, ಕಳೆದೊಂದು ತಿಂಗಳು ನಿರೀಕ್ಷೆಯ ಮಳೆಯಾಗದೇ ಮುಖ್ಯವಾಗಿ ರೈತರು ಕೃಷಿ ಕಾರ್ಯ ಆರಂಭಿಸಲಾಗದೆ ಸಂಕಷ್ಟಕ್ಕಿಡಾಗಿದ್ದಾರೆ, ನದಿ, ಕೆರೆ, ಬಾವಿಗಳಲ್ಲಿಯೂ ನೀರು ತುಂಬದೇ ಮುಂದೆ ಕುಡಿಯುವ ನೀರಿಗೆ ತತ್ವಾರವಾಗುವ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಮಳೆ ಬೆಳೆಗಾಗಿ ಜನರು ದೇವರ ಮೊರೆ ಹೋಗುತ್ತಿದ್ದಾರೆ.ಸೋಮವಾರ ಮಳೆಗಾಗಿ ಬಾರಕೂರು ಕೋಟೆಕೇರಿ ಪಂಚಲಿಂಗೇಶ್ವರ ದೇವಾಲಯದಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಲಾಯಿತು, ನಂತರ 365 ಸೀಯಾಳ ಅಭಿಷೇಕ ನಡೆಸಲಾಯಿತು. ಕಳೆದ ವಾರ ಉಡುಪಿ ರಥಬೀದಿಯಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳಿಶ್ವರ ದೇವಾಲಯಗಳಲ್ಲಿಯೂ ದೇವರಿಗೂ ಮಳೆಗಾಗಿ ಪ್ರಾರ್ಥಿಸಿ ಸುಮಾರು 2,000ಕ್ಕೂ ಅಧಿಕ ಸೀಯಾಳಾಭಿಷೇಕ ನಡೆಸಲಾಗಿತ್ತು.
ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ದೇವಳದ ಆಡಳಿತ ವರ್ಗ, ಅರ್ಚಕರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.ಲಾಗಾಯ್ತಿನಿಂದಲೂ ಮಳೆ ಕಡಿಮೆಯಾದಾಗ ಉಡುಪಿಯ ಅನಂತೇಶ್ವರ - ಚಂದ್ರಮೌಳೀಶ್ವರ ದೇವರಿಗೆ ಸೀಯಾಳಾಭಿಷೇಕ ನಡೆಸಿ ಪ್ರಾರ್ಥಿಸುವ ಸಂಪ್ರದಾಯ ನಡೆಯುತ್ತಾ ಬಂದಿದೆ.