ಸಾರಾಂಶ
ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ವತಿಯಿಂದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಇಲ್ಲಿನ ಸಂತೆಕಟ್ಟೆಯ ಮೌಂಟ್ ರೋಝರಿ ಚರ್ಚ್ ಸಮೀಪದ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಕಲ್ಯಾಣಪುರಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ವತಿಯಿಂದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಇಲ್ಲಿನ ಸಂತೆಕಟ್ಟೆಯ ಮೌಂಟ್ ರೋಝರಿ ಚರ್ಚ್ ಸಮೀಪದ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಉಪನ್ಯಾಸಕಿ ಶಾರದಾ, ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಜಾತಿಯಾಧಾರಿತ, ಧರ್ಮಾಧಾರಿತ ಹಾಗೂ ಪುರುಷಾಧಿಪತ್ಯದ ಮನಸ್ಥಿತಿಯೇ ಕಾರಣವಾಗಿದೆ. ಹೆಣ್ಣುಮಕ್ಕಳು ಮೊಂಬತ್ತಿಗಳ ರೂಪಕವಾಗಬಾರದು. ನಮ್ಮ ಬಟ್ಟೆ ಸರಿಯಿಲ್ಲ, ನಡವಳಿಕೆ ಸರಿಯಿಲ್ಲ ಎನ್ನುವ ಮನಸ್ಥಿತಿ ವಿರುದ್ಧ ಮಾತನಾಡಬೇಕು. ಅವರನ್ನು ಸಮಾಜದಲ್ಲಿ ಪ್ರಶ್ನಿಸುವಂತವರಾಗಿ ಬೆಳೆಸಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಪರ ಮಾತನಾಡುವವರನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನ ನಡೆಯುತ್ತಿದೆ. ಅದರ ಕುರಿತು ಮಾತನಾಡಬೇಕೆಂದು ಕರೆ ನೀಡಿದರು.ಇನ್ನೋರ್ವ ಅತಿಥಿ ಡಾ.ಪಿ.ವಿ. ಭಂಡಾರಿ ಮಾತನಾಡಿ, ವೈದ್ಯರ ರಕ್ಷಣೆಗೆ ಸೂಕ್ತವಾದ ಕಾನೂನು ರಚಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ. ಹಾಗಿರುವಾಗ ಬಂಗಾಳ ಸರ್ಕಾರವನ್ನೋ, ಕರ್ನಾಟಕ ಸರ್ಕಾರವನ್ನೋ ದೂರಿ ಪ್ರಯೋಜನವಿಲ್ಲ. ಎಲ್ಲ ಸರ್ಕಾರಗಳು ಸಮಾನವಾಗಿ ನಿಷ್ಕ್ರಿಯವಾಗಿದೆ. ಇದರಿಂದಾಗಿ ಪೊಲೀಸರಿಗೂ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವು ಪ್ರಕರಣದಲ್ಲಿ ಮಹಿಳೆಯರು ಪ್ರಕರಣ ದಾಖಲಿಸಲು ಹಿಂಜರಿಯಬೇಕಾದ ವಾತಾವರಣ ಸೃಷ್ಟಿಯಾಗಿದೆ ಎಂದು ವಿಷಾಧಿಸಿದರು.ಈ ಸಂದರ್ಭದಲ್ಲಿ ಸುಂದರ ಮಾಸ್ತರ್, ವೆರೋನಿಕಾ ಕರ್ನೆಲಿಯೋ, ಅಝೀಜ್ ಉದ್ಯಾವರ, ಝೀರ್ ನೇಜಾರು, ಸಾದೀಕ್ ಉಸ್ತಾದ್ ಹೂಡೆ, ಹುಸೇನ್ ಕೋಡಿಬೆಂಗ್ರೆ, ಫಾ.ವಿಲಿಯಮ್ ಮಾರ್ಟಿಸ್, ಸಂತೋಷ್ ಕರ್ನೆಲಿಯೋ, ಆಯಾನ್ ಮಲ್ಪೆ ಸೇರಿದಂತೆ ಹಲವಾರು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಮೀರ್ ತೀರ್ಥಹಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಲ್ವಿನ್ ದಾಂತಿ ನಿರೂಪಿಸಿದರು. ಗಾಡ್ವಿನ್ ಮಸ್ಕರೇನಸ್ ವಂದಿಸಿದರು.ಸಭೆಯ ಆರಂಭದಲ್ಲಿ ಮೌಂಟ್ ರೋಝರಿ ಚರ್ಚ್ನಿಂದ ಪ್ರತಿಭಟನಾ ಸ್ಥಳದ ವರೆಗೆ ಮೆರವಣಿಗೆ ನಡೆಸಿದರು.