ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ರಥ ಬೀದಿಯಲ್ಲಿರುವ ಶ್ರೀ ಮಂತ್ರಾಲಯ ಶಾಖಾ ಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದದ್ವಯರ ಉಪಸ್ಥಿತಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯು ವೈಭವದಿಂದ ನಡೆಯಿತು.ಮಧ್ಯಾಹ್ನದ ಮಹಾಪೂಜೆ ಹಾಗೂ ಪಲ್ಲ ಪೂಜೆಗಳನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಗಳು ನೆರವೇರಿಸಿದರು. ಸಂಜೆ ಶ್ರೀ ಕೃಷ್ಣನ ಸುವರ್ಣ ರಥದಲ್ಲಿ ರಾಘವೇಂದ್ರ ಸ್ವಾಮಿಗಳ ಪೂರ್ವ ಅವತಾರ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ರಥೋತ್ಸವ ನಡೆಸಿ ಶ್ರೀ ಕೃಷ್ಣನ ಸನ್ನಿಧಿಯ ಮುಂಭಾಗದ ಚಂದ್ರ ಶಾಲೆಯಲ್ಲಿ ವೈಭವದ ಪೂಜೆಗಳನ್ನು ನಡೆಸಲಾಯಿತು. ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಗಳು ಉಪಸ್ಥಿತರಿದ್ದರು.
ರಾಘವೇಂದ್ರ ಸ್ವಾಮಿಗಳು ಉಡುಪಿಯ ಶ್ರೀ ಕೃಷ್ಣನ ಈ ಸನ್ನಿಧಿಯ ಮಂತ್ರಾಲಯ ಮಠದಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಇದ್ದು, ಶ್ರೀಕೃಷ್ಣನ ಉಪಾಸನೆ ಮಾಡುತ್ತಾ ಚಂದ್ರಿಕಾ ಪ್ರಕಾಶವೆಂಬ ಉದ್ಗ್ರಂಥವನ್ನು ರಚಿಸಿದ್ದರು. ಶ್ರೀ ಕೃಷ್ಣನ ಸ್ತೋತ್ರವನ್ನು ನಡೆಸಲು ಅವರು ರಚಿಸಿದ ಇಂದು ಎನಗೆ ಗೋವಿಂದ... ದೇವರ ನಾಮ ಪ್ರಸಿದ್ಧ. ಶ್ರೀ ಕೃಷ್ಣನ ಪ್ರತಿರೂಪವಾದ ಸುವರ್ಣ ಪ್ರತಿಮೆಯನ್ನು ಸ್ವಯಂ ನಿರ್ಮಿಸಿ ಶ್ರೀ ಮಠದಲ್ಲಿ ಇಂದು ಗುರುಪರಂಪರೆಯಿಂದ ಪೂಜಿತವಾಗಿರುವ ವಿಚಾರಗಳನ್ನೆಲ್ಲ ಸ್ಮರಿಸಿದ ಪರ್ಯಾಯ ಶ್ರೀಪಾದರು, ಮುಂಬರುವ ವರ್ಷದಲ್ಲಿ ಮಂತ್ರಾಲಯ ಶ್ರೀಪಾದರಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಸಹಯೋಗದಲ್ಲಿ ಉಡುಪಿಯ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಪ್ರತಿಷ್ಠೆಯ ಶತಮಾನೋತ್ಸವವನ್ನು ವೈಭವದಿಂದ ಆಚರಿಸಲಾಗುವುದು ಎಂದು ತಿಳಿಸಿದರು.ಪರ್ಯಾಯಮಠದ ದಿವಾನರಾದ ನಾಗರಾಜ ಆಚಾರ್ಯ ಉಪಸ್ಥಿತರಿದ್ದರು. ಉಡುಪಿ ರಾಘವೇಂದ್ರ ಮಠದ ವ್ಯವಸ್ಥಾಪಕ ಜಯತೀರ್ಥ ಆಚಾರ್ಯರು, ಶ್ರೀ ರಾಘವೇಂದ್ರ ಮಠದ ಗೌರವವನ್ನು ಪರ್ಯಾಯ ಶ್ರೀಪಾದದ್ವಯರಿಗೆ ಸಲ್ಲಿಸಿದರು.
----ಅಂತಾರಾಷ್ಟ್ರೀಯ ಶಾಖೆಗಳಲ್ಲೂ ಆರಾಧನೆಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆದೇಶ, ಮಾರ್ಗದರ್ಶನದಂತೆ, ಶ್ರೀಪುತ್ತಿಗೆ ಮಠದ ಎಲ್ಲ 15 ಅಂತಾರಾಷ್ಟ್ರೀಯ ಶಾಖೆಗಳಲ್ಲಿ ಭಕ್ತರ ಸಹಕಾರದೊಂದಿಗೆ ವೈಭವದಿಂದ ಜರುಗಿತು.