ಬೆಳ್ತಂಗಡಿ : ಅತಿಯಾದ ಮದ್ಯಪಾನವು ಆರೋಗ್ಯದ ಮೇಲೆ ದುಷ್ಪರಿಣಾಮಗಳಿಗೆ ಕಾರಣವಾಗಬಹುದು. ಮನೋ ನಿಗ್ರಹ ಮತ್ತು ಉತ್ತಮ ಜೀವನ ಶೈಲಿಯಿಂದ ಪರಿವರ್ತನೆ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 266ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ರಾಜ್ಯಾದ್ಯಂತ ಆಗಮಿಸಿದ 67 ಮಂದಿ ಶಿಬಿರಾರ್ಥಿಗಳಿಗೆ ಆಶೀರ್ವದಿಸಿದರು.ಮದ್ಯದಚಟಕ್ಕೆ ಪ್ರಮುಖ ಕಾರಣ ಗೆಳೆಯರ ಸಹವಾಸ, ಒತ್ತಡ. ಇದು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಜೀವನದಲ್ಲಿ ದೊಡ್ಡ ಪರಿಣಾಮವನ್ನು ಬೀರುತ್ತದೆ. ಪಂಚೇಂದ್ರಿಯಗಳು ನಮ್ಮನ್ನು ಮೋಸ ಮಾಡುತ್ತವೆ. ಅವುಗಳು ನಮ್ಮ ಜೀವನದಲ್ಲಿ ತಪ್ಪು ಮಾಡುವುದಕ್ಕೆ ಪ್ರೇರಣೆ ಕೊಡುತ್ತವೆ. ಹಾಗಾಗಿ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಡಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳದ ಸಿಬ್ಬಂದಿ ಪಾರ್ಶ್ವನಾಥ್, ಧನಕೀರ್ತಿ, ಸುದರ್ಶನ್, ಜಾಗೃತಿ ಸೌಧದ ಪ್ರಬಂಧಕ ಕಿಶೋರ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾÊಸ್, ಆಡಳಿತ ಯೋಜನಾಧಿಕಾರಿ ಮಾಧವಗೌಡ, ಶಿಬಿರಾಧಿಕಾರಿ ವಿದ್ಯಾಧರ್, ಜಯಾನಂದ, ಆರೋಗ್ಯ ಸಹಾಯಕಿಯರಾದ ರಂಜಿತಾ, ತುಷಾರ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು 2026ನೇ ಮಾ.23 ರಿಂದ ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.