ಸುಮಾರು 600 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ಹಿರೇಕೆರೆ ಇಂದು ಜನರಿಂದ ಸಾಕಷ್ಟು ಒತ್ತುವರಿಯಾಗಿದೆ.
ಹರಪನಹಳ್ಳಿ: ನಗರದ ಐತಿಹಾಸಿಕ ಹಿರೇಕೆರೆ ಅಭಿವೃದ್ಧಿಗೆ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹3 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.
ನಗರದಲ್ಲಿ ಹಿರೇಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ ಸೋಮಶೇಖರ ನಾಯಕ ನಿರ್ಮಿಸಿದ ಹಿರೇಕೆರೆ ಇಂದು ಗಿಡ-ಗಂಟೆಗಳು ಬೆಳೆದು ಮಲಿನವಾಗಿದೆ. ಇದನ್ನು ತೆರವುಗೊಳಿಸಿ ಕೆರೆ ಅಭಿವೃದ್ಧಿಪಡಿಸಲಾಗವುದು ಎಂದರು.ಸುಮಾರು 600 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ಹಿರೇಕೆರೆ ಇಂದು ಜನರಿಂದ ಸಾಕಷ್ಟು ಒತ್ತುವರಿಯಾಗಿದೆ. ಇದನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಿ ಕೆರೆ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಈ ಭಾಗದ ಜನ ಜಾನುವಾರುಗಳಿಗೆ ಮತ್ತು ಕೃಷಿ ಚಟುವಟಿಕೆಗೆ ಅನುಕೂಲವಾಗಿದ್ದ ಕೆರೆ ಕಳೆದ 25 ವರ್ಷಗಳಿಂದ ನೀರು ತುಂಬಿಲ್ಲ. ಹಾಗಾಗಿ ಕೆರೆ ಅಭಿವೃದ್ಧಿಗೆ ಮೀಸಲಿಟ್ಟ ₹೩ ಕೋಟಿ ಅನುದಾನದಲ್ಲಿ ಕೆರೆ ಏರಿ ದುರಸ್ತಿ, ನೀರು ಸೋರಿಕೆ ತಡೆಗಟ್ಟುವುದು, ಏರಿ ಬಲಪಡಿಸುವುದು, ಬಂಡ್ ಸುತ್ತಲೂ ಚೈನ್ ಲಿಂಕ್ ಫೆನ್ಸಿಂಗ್ ಅಳವಡಿಸುವುದು, ನೀರಿನ ಶೇಖರಣಾ ಸಾಮಾರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಂಗಲ್ ಹಾಗೂ ಹೂಳು ತೆಗೆಸುವುದು ಮತ್ತು ಕೆರೆಯ ಕೊಡಿಯ ಪಕ್ಕದಲ್ಲಿ ಕಿರುಸೇತುವೆ ನಿರ್ಮಾಣ ಮಾಡಲಾಗುವುದು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿದರು. ನಗರಸಭೆ ಪೌರಾಯುಕ್ತೆ ರೇಣುಕಾ ಎಸ್.ದೇಸಾಯಿ, ನಗರಸಭೆ ಮಾಜಿ ಸದಸ್ಯರಾದ ಅಬ್ದುಲ್ ರೆಹಮಾನ್, ಟಿ.ವೆಂಕಟೇಶ, ಲಾಟಿ ದಾದಾಪೀರ್, ಮಂಜುನಾಥ್ ಇಜಂತ್ಕರ್, ಎಚ್.ವಸಂತಪ್ಪ, ಅಲೀಂ, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ ಈಶ್ವರ, ಪೂಜಾರ ಕೃಷ್ಣಕಾಂತ, ಎಲ್.ಮಂಜ್ಯಾನಾಯ್ಕ್, ಎನ್.ಶಂಕರ್ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಕಾರ್ಯಕರ್ತರು ಉಪಸ್ಥಿತರಿದ್ದರು.