ಇಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಂತಹ ವೃತ್ತಿಪರ ವಿಷಯದಲ್ಲಿ ಶಿಕ್ಷಣ ಪಡೆದರೆ ಹೆಚ್ಚಿನ ಉದ್ಯೋಗಾವಕಾಶ ಹೊಂದಬಹುದು.

ಧಾರವಾಡ:

ಸಮಾಜದಲ್ಲಿನ ಬದಲಾವಣೆ ತೀಕ್ಷ್ಣವಾಗಿ ಅರಿತು ವಿದ್ಯಾರ್ಥಿಗಳು ಭವಿಷ್ಯದ ಉನ್ನತ ಶಿಕ್ಷಣದ ದಾರಿ ಆಯ್ದುಕೊಳ್ಳಬೇಕೆಂದು ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಸಂಜಯಕುಮಾರ ಮಾಲಗತ್ತಿ ಹೇಳಿದರು.

ಕುಮಾರೇಶ್ವರ ನಗರದ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆಯಲ್ಲಿ ಅವರು ಮಾತನಾಡಿ, ಇಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಂತಹ ವೃತ್ತಿಪರ ವಿಷಯದಲ್ಲಿ ಶಿಕ್ಷಣ ಪಡೆದರೆ ಹೆಚ್ಚಿನ ಉದ್ಯೋಗಾವಕಾಶ ಹೊಂದಬಹುದು ಎಂದರು.

ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಚಂದುನವರ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಸಕಲ ಸೌಲಭ್ಯಗಳನ್ನು ಹೊಂದಿ ಖಾಸಗಿ ಕಾಲೇಜುಗಳನ್ನು ಮೀರಿಸುವಷ್ಟು ವಿಫುಲವಾಗಿ ಬೆಳೆಯುತ್ತಿವೆ, ವಿದ್ಯಾರ್ಥಿಗಳು ಕಾಣುವ ಕನಸುಗಳು ದೊಡ್ಡದಾಗಿರಬೇಕು ಮತ್ತು ಅವುಗಳನ್ನು ನನಸಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಗುರುನಾಥ ಬಡಿಗೇರ, ಯಾವುದೇ ಕೆಲಸ ಮಾಡಿದರು ಅದರಲ್ಲಿ ಶ್ರದ್ಧೆಯಿಂದ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಅಂದಾಗ ಮಾತ್ರ ಅದು ನಿಮಗೆ ತೃಪ್ತಿಕೊಡುತ್ತದೆ ಎಂದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸರಸ್ವತಿ ಪಾಟೀಲ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಬಸವರಾಜೇಶ್ವರಿ ಪಾಟೀಲ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಮೌನೇಶ ಬಡಿಗೇರ ಹಾಗೂ ಪತ್ರಿಕೋದ್ಯಮ ವಿಭಾಗದ ಡಾ. ವಿಶ್ವನಾಥ ಚಿಂತಾಮಣಿ ಮಾತನಾಡಿದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಐಕ್ಯೂಎಸಿ ಸಂಯೋಜಕ ಇಬ್ರಾಹಿಂ ಸೌದಾಘರ ಹಾಜರಿದ್ದರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು. ಇದೇ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳು ತಾವು ವಿದ್ಯಾರ್ಜನೆಗೈದ ಮಹಾವಿದ್ಯಾಲಯಕ್ಕೆ ಕಿರು ಕಾಣಿಕೆ ಸಮರ್ಪಿಸಿದರು, ಉದ್ದಮ್ಮ ಅಂಜನಕಟ್ಟಿ ನೀರೂಪಿಸಿದರು, ಪವಿತ್ರಾ ಮಾಲಾಪೂರ ಸ್ವಾಗತಿಸಿದರು. ನೀಲಮ್ಮ ಸಬರದ ವಂದಿಸಿದರು.